ಮೈಸೂರು: ವಿಚ್ಛೇದಿತ ಪತಿಯಿಂದ ಪತ್ನಿಯ ಬರ್ಬರ ಹತ್ಯೆ
ಮೈಸೂರು, ಜೂನ್ 13 : ಕಳೆದ 4 ವರುಷದ ಕೆಳಗೆ ವಿಚ್ಛೇದನ ಪಡೆದ ಪತಿ ಮಹಾಶಯ ಏಕಾಏಕಿ ಪತ್ನಿಯ ಮನೆಗೆ ಬಂದು ಆಕೆಯ ಕತ್ತಿಗೆ ಚಾಕುವಿನಿಂದ ಇರಿದು ಹತ್ಯೆಗೈದು ಪರಾರಿಯಾದ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ನಡೆದಿದೆ.
ಕಾರ್ತಿಕ್ ಮತ್ತು 29 ವರ್ಷದ ಸುನೀತಾ ನಾಲ್ಕು ವರ್ಷದ ಹಿಂದೆಯೇ ವಿಚ್ಛೇದನ ಪಡೆದಿದ್ದರು. ಆದರೆ, ಮಂಗಳವಾರ ಸುನೀತಾ ಮನೆಗೆ ಬಂದ ಕಾರ್ತಿಕ್ ಮಗುವನ್ನು ಶಾಲೆಗೆ ಬಿಟ್ಟು ಬಂದಿದ್ದಾನೆ. ನಂತರ ಮನೆಗೆ ಬಂದು ಸುನಿತಾ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿ ಚಾಕುವಿನಿಂದ ಇರಿದು ಹತ್ಯೆಗೈದು ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನು ಆಕೆ ಅತನ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದಕ್ಕೆ ಆಕೆಯ ಕೈಯ್ಯಲಿದ್ದ ಬಳೆಗಳು ಚೂರೂಚೂರಾಗಿ ಎತ್ತೆತ್ತಲೋ ಬಿದ್ದಿರುವುದೇ ಸಾಕ್ಷಿಯಾಗಿದೆ.
ಸ್ಥಳಕ್ಕೆ ವಿದ್ಯಾರಣ್ಯಪುರಂ ಪೊಲೀಸ್ ಇನ್ಸಪೆಕ್ಟರ್ ಓಕಾಂರಪ್ಪ, ಸಿಸಿಬಿ ಎಸಿಪಿ ಗೋಪಾಲ್, ಡಿಸಿಪಿ ರುದ್ರಮುನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಆರೋಪಿಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.