ಇಂಡಿಯಾ ಟುಡೇ ಸಮೀಕ್ಷೆ ಹಿಂದೆ ಅಮಿನ್ ಮಟ್ಟು ಕೈವಾಡ: ಎಚ್ ಡಿಕೆ
ಮೈಸೂರು, ಏಪ್ರಿಲ್ 14 : ಇಂಡಿಯಾ ಟುಡೇ ಸಮೀಕ್ಷೆ ಯಾರು, ಏಕೆ ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಪಾತ್ರ ಇದರಲ್ಲಿ ಎಷ್ಟಿದೆ ಎನ್ನುವ ಮಾಹಿತಿ ನನ್ನ ಬಳಿ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಕುರುಬ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮೈಸೂರಿನ ಕೋಟೆಹುಂಡಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ಟಿಕೆಟ್ ಘೋಷಣೆಯಾಗದೆ ಸಮೀಕ್ಷೆ ನಡೆಸಲು ಹೇಗೆ ಸಾಧ್ಯ? ಸಮೀಕ್ಷೆ ಉಲ್ಟಾ ಪಲ್ಟಾ ಆಗುವುದು ಖಚಿತ. ಜೆಡಿಎಸ್ ಕಿಂಗ್ ಮೇಕರ್ ಅಲ್ಲ, ಕಿಂಗ್ ಆಗುತ್ತದೆ. ಸಮೀಕ್ಷೆಯಲ್ಲಿ ಮೂರನೇ ಸ್ಥಾನದಲ್ಲಿರುವ ನಾವು, ಮೊದಲನೇ ಸ್ಥಾನಕ್ಕೆ ಬರುವುದು ಖಚಿತ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರಿಗೆ ಗ್ರಾಮದ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ಈ ವೇಳೆ ಜನರ ಒತ್ತಾಯಕ್ಕೆ ಮಣಿದು ಎಚ್ ಡಿಕೆ ಕುಮಾರ ಪರ್ವ ವಾಹನ ಇಳಿದರು. ಕೋಟೆ ಹುಂಡಿ ಗ್ರಾಮದಲ್ಲಿ ಭರ್ಜರಿ ಪ್ರತಿಕ್ರಿಯೆ ದೊರೆಯಿತು. ಇದೇ ವೇಳೆ ಕುಮಾರಸ್ವಾಮಿಗೆ ಶಾಸಕ ಜಿ ಟಿ ದೇವೇಗೌಡ, ಬಿರೀಹುಂಡಿ ಬಸವಣ್ಣ, ಮಾಜಿ ಮೇಯರ್ ಎಂ.ಜಿ.ರವಿಕುಮಾರ್ ಸಾಥ್ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರ ನನ್ನ ಪ್ರಚಾರಕ್ಕೆ ವಿಶೇಷ ಅರ್ಥ ಬೇಡ
ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ನಾನು ಪ್ರಚಾರ ಮಾಡುತ್ತಿರುವುದಕ್ಕೆ ವಿಶೇಷ ಅರ್ಥ ಬೇಡ. ಇತರೆ ಮತಕ್ಷೇತ್ರಗಳಲ್ಲಿ ಪ್ರಚಾರ ಕೈಗೊಂಡಿರುವಂತೆ ಇಲ್ಲಿಯೂ ಪ್ರಚಾರ ಮಾಡುತ್ತಿದ್ದೇನೆ. 100 ಹಳ್ಳಿಗೆ ಭೇಟಿ ನೀಡಲು ನನ್ನ ಸಮಯ ನಿಗದಿ ಮಾಡಿಕೊಂಡಿದ್ದೇನೆ. ಚಾಮುಂಡೇಶ್ವರಿ ಮತಕ್ಷೇತ್ರಕ್ಕೆ ಸಿದ್ದರಾಮಯ್ಯ ಅವರಿಗಿಂತ ನನ್ನ ಕೊಡುಗೆ ಹೆಚ್ಚು. ಇದಕ್ಕೆ ಜಿ.ಟಿ.ದೇವೆಗೌಡರು ಕಾರಣ ಎಂದರು.
ರಾಮನಗರ, ಚನ್ನಪಟ್ಟಣದಲ್ಲಿ ಸಿದ್ದರಾಮಯ್ಯ ಒಂದು ತಿಂಗಳು ಕ್ಯಾಂಪ್ ಮಾಡಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಒಂದು ತಿಂಗಳು ಕ್ಯಾಂಪ್ ಮಾಡಲಿ. ಆ ಎರಡು ಕ್ಷೇತ್ರಗಳಿಗೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಅವರೇನು ಮಾಡುತ್ತಾರೆ ಮಾಡಿಕೊಳ್ಳಲಿ. ಅಲ್ಲಿ ನಾನೇ ಗೆಲ್ಲುವುದು. ರಾಮನಗರದಲ್ಲಿ ನನ್ನ ನಡವಳಿಕೆಗೂ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರ ನಡವಳಿಕೆಗೂ ಹೋಲಿಕೆ ಮಾಡಬೇಡಿ ಎಂದರು.
ಸಿದ್ದರಾಮಯ್ಯ ಅವರಿಗೂ ರಾಮನಗರಕ್ಕೂ ಏನು ಸಂಬಂಧ?
ನಾನು ಒಂದು ದಿನ ಪ್ರಚಾರಕ್ಕೆ ಹೋದರೂ ಸಾಕು, ಕುಮಾರಸ್ವಾಮಿ ಅವರನ್ನು ರಾಮನಗರದಲ್ಲಿ ಸೋಲಿಸಬಿಡಬಹುದು ಎಂಬ ಮುಖ್ಯಮಂತ್ರಿಗಳ ಹೇಳಿಕೆಯನ್ನು ಪ್ರಸ್ತಾಪಿಸದೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೂ ರಾಮನಗರಕ್ಕೂ ಏನು ಸಂಬಂಧ? ಅವರು ರಾಮನಗರಕ್ಕೆ ಬಂದರೆ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಹೇಳಿದರು.
ಜೆಡಿಎಸ್ ಪರ ಕೆಸಿಆರ್, ಮಾಯಾವತಿ ಪ್ರಚಾರ
ತೆಲಗು ಭಾಷಾ ಕನ್ನಡಿಗರ ಮತ ಕ್ರೋಡೀಕರಣಕ್ಕೆ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಜೆಡಿಎಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ. ಅಲ್ಲದೆ, ಬಿಎಸ್ ಪಿ ನಾಯಕಿ ಮಾಯಾವತಿ ಕೂಡ ಮೈಸೂರು ಸೇರಿದಂತೆ ನಾಲ್ಕು ಕಡೆ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.