ಬಿಕೋ ಎನ್ನುತ್ತಿದೆ ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ದೇವಾಲಯ
ಮೈಸೂರು, ಡಿಸೆಂಬರ್ 24 : ವಿಷ ಪ್ರಸಾದ ಪ್ರಕರಣದ ಬಳಿಕ ಇಡೀ ಸುಳ್ವಾಡಿಯಲ್ಲಿಯೇ ಸ್ಮಶಾನ ಮೌನ ಆವರಿಸಿದೆ. ಇತ್ತ ಪ್ರತಿ ಶುಕ್ರವಾರ ಮತ್ತು ಮಂಗಳವಾರ ಭಕ್ತರಿಂದ ಗಿಜಿಗುಡುತ್ತಿದ್ದ ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇಗುಲದ ಆವರಣ ಈಗ ಬಿಕೋ ಎನ್ನುತ್ತಿದೆ. ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ.
ಮಾರಮ್ಮನಲ್ಲಿ ನಿಜವಾದ ಭಕ್ತಿ ಶ್ರದ್ಧೆ ಇಟ್ಟಿದ್ದವರು ತಾವಿದ್ದಲ್ಲಿಂದಲೇ ಕೈ ಮುಗಿಯುತ್ತಿದ್ದಾರೆ. ಇತ್ತ ಯಾರೂ ಸುಳಿಯುತ್ತಿಲ್ಲ. ಅಲ್ಲೊಬ್ಬ ಇಲ್ಲೊಬ್ಬರು ಮಾತ್ರ ಬಂದು ಕೈಮುಗಿದು ಹೋಗುತ್ತಿದ್ದಾರೆ. ಎಲ್ಲೆಡೆ ನೀರವ ಮೌನ ಮೈದಾಳಿದೆ.
ಸುಳ್ವಾಡಿಯ ಕಿಚ್ಚುಗುತ್ತು ಮಾರಮ್ಮನ ದೇಗುಲಕ್ಕೆ ತೆರಳಿ ತಮ್ಮ ಸಂಕಷ್ಟವನ್ನೆಲ್ಲ ಪರಿಹರಿಸು ತಾಯಿ ಎಂದು ಬೇಡಿ ಕೊಳ್ಳುತ್ತಿದ್ದ ಭಕ್ತರು ಪ್ರಸಾದದಲ್ಲಿ ವಿಷ ಹಾಕಿ ತಮ್ಮ ಮನೆಯ ದೀಪ ಆರಿಸಿದ ದುಷ್ಟರಿಗೆ ಶಿಕ್ಷೆಯನ್ನು ನೀನೇ ಕೊಡು ತಾಯಿ ಎಂದು ಪರಿ ಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.
ಚಿನ್ನಪ್ಪಿ ಮೇಲ್ಯಾಕೆ ಬಂದೆಮ್ಮಾ ಮಾರಮ್ಮಾ? ಓದುಗರ ವ್ಯಂಗ್ಯಭರಿತ ಪತ್ರ
ಇವತ್ತು ದೇವರ ಪ್ರಸಾದ ಸೇವಿಸಿ ತಮ್ಮವರನ್ನು ಕಳೆದುಕೊಂಡ ಮನೆಯವರು, ಬಂಧುಗಳಲ್ಲಿ ಕಣ್ಣೀರು ಧಾರೆಯಾಗಿ ಹರಿಯುತ್ತಿದೆ. ಅಮ್ಮ.. ತಾಯಿ.. ನಿನ್ನ ನಂಬಿ ಬಂದಿದಕ್ಕೆ ಇಂತಹ ಶಿಕ್ಷೆಯೇ ಎಂದು ನೊಂದವರು ಪ್ರಶ್ನಿಸುತ್ತಿದ್ದಾರೆ. ದುರಂತ ಘಟನೆ ನಡೆದು 10 ದಿನಗಳು ಕಳೆದು ಹೋಗಿದೆ. ಇದುವರೆಗೆ 17 ಮಂದಿ ಅಮಾಯಕರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ.
ಕೆಲವರು ಇನ್ನೂ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಚೇತರಿಸಿಕೊಂಡು ಆಸ್ಪತ್ರೆಯಿಂದ ಧಾವಿಸಿ ಬಂದಿದ್ದಾರೆ. ಹೆತ್ತವರನ್ನು, ಮಕ್ಕಳನ್ನು, ಬಂಧು ಬಾಂಧವರನ್ನು ಕಳೆದುಕೊಂಡವರು, ಮನೆಗೆ ದಿಕ್ಕೇ ಇಲ್ಲದಂತಾಗಿ ಶೂನ್ಯ ದೃಷ್ಟಿ ನೆಟ್ಟು ಕೂತಿದ್ದಾರೆ.
ತೆರವುಗೊಳಿಸಲು ಚಿಂತನೆ
ಮಾರಮ್ಮ ದೇವಾಲಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿದ್ದು, ಇದನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಚಿಂತಿಸಿದೆ ಎನ್ನಲಾಗಿದೆ. ಸುಳವಾಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಮೀಸಲು ಅರಣ್ಯಕ್ಕೆ ಸೇರಿದ 3 ಎಕರೆ ಜಾಗವನ್ನು ಹಂತ ಹಂತವಾಗಿ ಟ್ರಸ್ಟ್ನವರು ಅಕ್ರಮವಾಗಿ ವಶಪಡಿಸಿಕೊಂಡು ಈ ಪೈಕಿ 2 ಎಕರೆ ಪ್ರದೇಶದಲ್ಲಿ ದೇವಸ್ಥಾನ, ಅಂಗಡಿ ಮಳಿಗೆಗಳು, ಭಕ್ತರು ಉಳಿದುಕೊಳ್ಳಲು ಕೊಠಡಿ, ಭೋಜನಾಲಯ ಮತ್ತು ಅಡುಗೆ ಕೊಠಡಿ ನಿರ್ಮಿಸಿದ್ದಾರೆ. ಆದರೆ, ಇದಕ್ಕೆ ಟ್ರಸ್ಟ್ ಸರ್ಕಾರದಿಂದ ಅನುಮತಿ ಪಡೆದಿಲ್ಲ ಎನ್ನಲಾಗಿದೆ.
ಈಗ 'ಮಾರಮ್ಮನೇ' ಹೇಳಿದ್ದಾಳೆ; ಆರೋಪಿಗಳು ಇನ್ನೂ ಆರು ಮಂದಿ ಇದ್ದಾರಂತೆ!
ಹೇಗೆ ವಶಕ್ಕೆ ಪಡೆದುಕೊಳ್ಳುವುದು?
ಗ್ರಾಮಸ್ಥರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಬಾರದೆಂಬ ದೃಷ್ಟಿಯಿಂದ ಇಲ್ಲಿಯವರೆಗೆ ಸುಮ್ಮನಿದ್ದ ಅರಣ್ಯ ಇಲಾಖೆ ಅಧಿಕಾರಿಗಳು, ವಿಷ ಪ್ರಸಾದ ದುರಂತ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿದ್ದು, ಯಾವ ರೀತಿಯಲ್ಲಿ ದೇಗುಲವಿರುವ ಅರಣ್ಯ ಭೂಮಿಯನ್ನು ಹೇಗೆ ವಶಕ್ಕೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಚರ್ಚೆಯಲ್ಲಿ ತೊಡಗಿದ್ದಾರೆ.
ವಿಷಪ್ರಸಾದ ಪ್ರಕರಣದ ಸಂಪೂರ್ಣ ಮಾಹಿತಿ: ಇದು ಮೂವರ ದ್ವೇಷದ ಕತೆ
ಸಚಿವ ಪುಟ್ಟರಂಗಶೆಟ್ಟಿ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪುಟ್ಟರಂಗಶೆಟ್ಟಿ, ಕಿಚ್ಚುಗುತ್ತು ಮಾರಮ್ಮ ದೇವಾಲಯವು ಇರುವ ಸ್ಥಳವು ಮೀಸಲು ಅರಣ್ಯ ಪ್ರದೇಶಕ್ಕೆ ಒಳಪಟ್ಟಿದ್ದಲ್ಲಿ ಅರಣ್ಯ ಇಲಾಖೆಯವರು ಇಷ್ಟು ದಿನದಿಂದ ಏಕೆ ಸುಮ್ಮನಿದ್ದರು?. ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಕ್ತಾಯಗೊಳಿಸಿ ತಪ್ಪಿತಸ್ಥರಿಗೆ ತಕ್ಕಶಿಕ್ಷೆಯನ್ನು ನೀಡಲು, ಅಗತ್ಯ ಕಮಕೈಗೊಳ್ಳಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಜನಪ್ರತಿನಿಧಿಗಳು ಬಂದೇ ಇಲ್ಲ
ಮಾರಮ್ಮ ದೇವಾಲಯದಲ್ಲಿ ದುರಂತ ಸಂಭವಿಸಿ ಒಂದು ವಾರ ಕಳೆದರೂ, ಜನರಿಗೆ ಸಾಂತ್ವನ ಹೇಳಲು ಜಿಲ್ಲಾ ಉಸ್ತುವಾರಿ ಸಚಿವ, ಸಂಸದ ಹಾಗೂ ಕೊಳ್ಳೇಗಾಲ, ಹನೂರು ಶಾಸಕರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಹಾಗೂ ಇತರ ಕೆಲವು ಸದಸ್ಯರ ಬಿಟ್ಟರೆ ಬೇರೆ ಜನಪ್ರತಿನಿಧಿಗಳು ಬರದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿ.ಪಂ. ಸದಸ್ಯೆ ಇಷ್ರತ್ ಭಾನು ಅವರು ವಿದೇಶಕ್ಕೆ ತೆರಳಿರುವುದು ಇಲ್ಲಿನವರನ್ನು ಕೆರಳಿಸಿದೆ. ವಿಧಾನ ಪರಿಷತ್ ಸದಸ್ಯರಾದ ಧರ್ಮಸೇನ, ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ ಬರದಿರುವುದನ್ನೂ ಜನರು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯ ಬಿಜೆಪಿ ಮುಖಂಡರು ಬಾರದಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.