ದೇವೇಗೌಡ್ರು ಯಜಮಾನ್ರು, ಅವರನ್ನು ಟೀಕಿಸೋಲ್ಲ: ಸಿದ್ದರಾಮಯ್ಯ
ಮೈಸೂರು, ಜನವರಿ 24 : 'ದೇವೇ ಗೌಡ್ರು ಯಜಮಾನರು. ಅವರನ್ನು ನಾನು ಟೀಕಿಸುವುದಿಲ್ಲ. ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಮಾಜಿ ಬಾಸ್ ಬಗ್ಗೆ ಹೇಳಿದ್ದಾರೆ. ಇದೇನು ವ್ಯಂಗ್ಯವೋ, ಹಾಸ್ಯವೋ, ಗಂಭೀರದ ಮಾತೋ ದೇವರೇ ಬಲ್ಲ!
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರವಾಗಿ ಮಾತನಾಡಿ, ಇದೊಂದು ಆಡಳಿತಾತ್ಮಕ ಪ್ರಕ್ರಿಯೆ. ಇದರಲ್ಲಿ ರಾಜಕೀಯ ಇಲ್ಲ' ಎಂದರು.
ರೋಹಿಣಿ ಸಿಂಧೂರಿ ವರ್ಗಾವಣೆ, ಸರ್ಕಾರಕ್ಕೆ ದೇವೇಗೌಡರ ಪ್ರಶ್ನೆ
ರೋಹಿಣಿ ಸಿಂಧೂರಿ ವರ್ಗಾವಣೆಯ ಕುರಿತು ಪ್ರತಿಕ್ರಿಯೆ ನೀಡಿದ್ದ ಮಾಜಿ ಪ್ರಧಾನಿ ದೇವೇಗೌಡ, 'ದುಡ್ಡು ಹೊಡೆಯಲು ಆ ಹೆಣ್ಣು ಮಗಳು ಬಿಡಲಿಲ್ಲ ಅಂತ ವರ್ಗಾವಣೆ ಮಾಡಿದ್ದೀರಾ?' ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 'ಯಜಮಾನರನ್ನು ಟೀಕಿಸುವುದಿಲ್ಲ' ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಬಿಜೆಪಿ ನಾಯಕರನ್ನು ಸಹ ತರಾಟೆಗೆ ತೆಗೆದುಕೊಂಡರು. ಕೇಂದ್ರ ಸರ್ಕಾರದ ಅನುದಾನ ಯಡಿಯೂರಪ್ಪ ನಮಗೆ ಭಿಕ್ಷೆ ಕೊಡುವ ರೀತಿಯಲ್ಲಿ ಹೇಳುತ್ತಿದ್ದಾರೆ. ಅಮಿತ್ ಶಾ, ಯಡಿಯೂರಪ್ಪ ನಾವು ಕೇಂದ್ರದಿಂದ ಹಣ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಅವರಿಗೆ ಸಂವಿಧಾನ ಕಾನೂನು ಗೊತ್ತಿಲ್ಲ. ಸುಮ್ಮನೆ ಜನರಿಗೆ ತಪ್ಪು ಮಾಹಿತಿ ನೀಡಬಾರದು. ಕಾನೂನಾತ್ಮಕವಾಗಿ ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ , ರಾಜ್ಯಕ್ಕೆ ಅನುದಾನ ನೀಡಲೇಬೇಕು. ಯಡಿಯೂರಪ್ಪಗೆ ಈ ರೀತಿ ಮಾತನಾಡಲು ನಾಚಿಕೆಯಾಗಬೇಕು. ಅವರ ಮುಖ್ಯಮಂತ್ರಿಯಾಗಿದ್ದವರು ಸ್ವಲ್ಪ ಕಾನೂನು ತಿಳಿದುಕೊಳ್ಳಬೇಕು ಎಂದು ಹರಿಹಾಯ್ದರು.
ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ ಕುರಿತು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಕೀಳು ಮಟ್ಟದ ರಾಜಕಾರಣಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಇದು ನೂರಕ್ಕೆ ನೂರರಷ್ಟು ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ನಾಳಿನ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಸಾರ್ವಜನಿಕರು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕು ಎಂದರು.
ಬಿಜೆಪಿಯವರು ಸುಮ್ಮನೆ ತಮಟೆ ಹೊಡೆದುಕೊಂಡು ಪುಂಗಿ ಊದಿಕೊಂಡು ಹೋಗುತ್ತಾರೆ. ಇವರು ಜೈಲಿಗೆ ಏಕೆ ಹೋಗಿದ್ದರು ? ಬಿಜೆಪಿಯವರು ನೆಂಟಸ್ತನ ಬೀಗತನ ಮಾಡಲು ಜೈಲಿಗೆ ಹೋಗಿದ್ದರಾ ಎಂದು ಪ್ರಶ್ನಿಸಿದರು. ಕೇಂದ್ರ ಸಚಿವ ಜಾವ್ಡೇಕರ್ ಭವಿಷ್ಯ ನುಡಿದ ವಿಚಾರದ ಕುರಿತು ಮಾತನಾಡಿದ ಅವರು, ಜಾವಡೇಕರ್ ಗೆ ಕರ್ನಾಟಕದ ಬಗ್ಗೆ ಏನು ಗೊತ್ತು ? ಚುನಾವಣೆಗೆ ಅಮಿತ್ ಶಾ ಮೋದಿ ಜಾವಡೇಕರ್ ಎಷ್ಟೇ ಬಂದರೂ ಅವರ ಆಟ ಇಲ್ಲಿ ನಡೆಯುವುದಿಲ್ಲ. ಚುನಾವಣೆಯಲ್ಲಿ ನಾವೇ ಗೆಲ್ಲುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು