ಜಯಲಲಿತಾ ಸಾವು: ಸಿಬಿಐಗೆ ವಹಿಸಲು ಸೋದರ ಆಗ್ರಹ
ಶ್ರೀರಂಗಪಟ್ಟಣ, ಡಿಸೆಂಬರ್ 17: ತಮಿಳುನಾಡಿನ ಅಮ್ಮ, ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಮಲಸೋದರ ವಾಸುದೇವನ್ ಹಾಗೂ ಸಹೋದರಿಯ ಪುತ್ರಿ ಒತ್ತಾಯಿಸಿದ್ದಾರೆ.
ಶ್ರೀರಂಗಪಟ್ಟಣದ ಯಜ್ಞವಲ್ಕ್ಯ ಮಂಟಪದಲ್ಲಿ ಜಯಲಲಿತ ಅವರ ತಿಥಿ (ಸಪಿಂಡೀಕರಣ) ಕಾರ್ಯದಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ವಾಸುದೇವನ್ ಅವರು, ಜಯಲಲಿತ ಅವರ ಸಾವಿನ ಬಗ್ಗೆ ಹಲವಾರು ಅನುಮಾನಗಳು ಸೃಷ್ಟಿಯಾಗಿವೆ. ಸಾವಿನ ಹಿಂದಿರುವ ಸತ್ಯ ವ್ಯಕ್ತವಾಗಬೇಕಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಹೇಳಿದರು.[ಜಯಲಲಿತಾ ಸಾವು: ತನಿಖೆಗಾಗಿ ಪ್ರಧಾನಿಗೆ ನಟಿ ಗೌತಮಿ ಪತ್ರ]
ಜಯಲಲಿತಾ ಸಾವಿನ ಹಿಂದಿನ ಅನೇಕ ಅನುಮಾನಗಳ ಪರಿಹಾರಕ್ಕಾಗಿ ಈಗಾಗಲೇ ಪ್ರಧಾನಿ ಮೋದಿಯವರಿಗೂ ಪತ್ರ ಬರೆಯಲಾಗಿದೆ. ಜಯಾ ಸಾವಿನಲ್ಲಿ ಅವರ ಗೆಳತಿ ಶಶಿಕಲಾ ಕೈವಾಡವಿದೆ ಎಂಬ ಅನುಮಾನ ದಟ್ಟವಾಗಿದೆ. ನನ್ನ ಸಹೋದರಿ ಬರೆದಿದ್ದಾರೆ ಎನ್ನಲಾದ ವಿಲ್ ಬಹಿರಂಗಪಡಿಸಬೇಕು, ಸಾವಿನ ಬಗ್ಗೆ ನಿಖರವಾದ ಕಾರಣ ತನಿಖೆಯಿಂದ ಹೊರಬರಬೇಕು ಎಂದು ತಿಳಿಸಿದರು.
ತಮಿಳುನಾಡು ತೆಲಗು ಯುವ ಶಕ್ತಿ ಸಂಘಟನೆ ಸುಪ್ರೀಂಗೆ ಜಯಾ ಸಾವಿನ ವಿಚಾರವಾಗಿ ಕೇಂದ್ರ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಪತ್ರ ಬರೆದಿದ್ದರು, ಅಲ್ಲದೆ ಪ್ರಧಾನಿ ಮೋದಿ ಅವರಿಗೆ ತಮಿಳುನಾಡಿನ ಚಿತ್ರ ನಟಿ ಗೌತಮಿ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದರು.[ಆರೆಸ್ಸೆಸ್ ನಿಂದ ಜಯಲಲಿತಾ ಸಾವು ಎಂದವಳ ವಿರುದ್ಧ ಎಫ್ ಐಆರ್]
ಇಂದು (ಡಿಸೆಂಬರ್ 17) ಜಯಲಲಿತ ಅವರ ವೈಕುಂಠ ಸಮಾರಾಧನೆ ನಡೆಯಲಿದೆ. ಶ್ರೀ ವೈಷ್ಣವ ಪದ್ದತಿಯಂತೆ ಜಯಲಲಿತ ಅವರ ಮರು ಅಂತ್ಯಸಂಸ್ಕಾರ ನಡೆದಿದೆ ಎಂದು ವಾಸುದೇವನ್ ತಿಳಿಸಿದರು.