ಮೈಸೂರು ಮೇಯರ್ ಗಾದಿಗೆ ಮುಹೂರ್ತ ಫಿಕ್ಸ್: ಪಟ್ಟಕ್ಕಾಗಿ ರಾಜಕೀಯದಾಟ ಶುರು
ಮೈಸೂರು, ನವೆಂಬರ್. 14:ರಾಜ್ಯದ ಎರಡನೇ ಅತಿ ದೊಡ್ಡ ನಗರ ಮೈಸೂರು ಮಹಾನಗರಪಾಲಿಕೆಯ ಮಹಾಪೌರರ ಆಯ್ಕೆಗೆ ಕಾಲ ಕೂಡಿ ಬಂದಿದ್ದು, ನ.17 ರಂದು ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಇದರ ಬೆನ್ನಲ್ಲೇ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಮಹಾಪೌರರ ಮೀಸಲಾತಿ ಬದಲಾವಣೆ ಕುರಿತಂತೆ ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮಹಾಪೌರರ ಚುನಾವಣೆಗೆ ಇದ್ದ ಅಡ್ಡಿ ನಿವಾರಣೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಪ್ರಾದೇಶಿಕ ಆಯುಕ್ತರಿಗೆ ಬರೆದ ಪತ್ರದ ಆಧಾರದ ಮೇಲೆ ಸಭೆ ನಡೆಸಿದ ಚುನಾವಣಾಧಿಕಾರಿ ಯಶವಂತ್ ಅವರು, ನ.17ರಂದು ಚುನಾವಣೆಗೆ ದಿನಾಂಕ ನಿಗದಿಪಡಿಸಿದ್ದಾರೆ. ಅಂದು ಬೆಳಗ್ಗೆ 7 ಗಂಟೆಯಿಂದಲೇ ನಾಮಪತ್ರ ಸ್ವೀಕರಿಸಲಿದ್ದು, 11 ಗಂಟೆಗೆ ಚುನಾವಣಾ ಸಭೆ ಆರಂಭವಾಗಲಿದೆ.
ನ.17ರಂದು ಮೈಸೂರು ಪಾಲಿಕೆ ಮೇಯರ್, ಉಪ ಮೇಯರ್ ಆಯ್ಕೆ
ಮಹಾಪೌರರ ಸ್ಥಾನ ಸಾಮಾನ್ಯ ಮಹಿಳೆಗೆ. ಉಪ ಮಹಾಪೌರರ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿದೆ. ನಗರಪಾಲಿಕೆಯ 65 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಮೈತ್ರಿ ಆಡಳಿತ ಅನಿವಾರ್ಯವಾಗಿದೆ.
ಯಾವ ಪಕ್ಷಕ್ಕೆ ಮಹಾಪೌರ ಸ್ಥಾನ?
ನಗರಪಾಲಿಕೆಯ 65 ಸದಸ್ಯ ಸ್ಥಾನಗಳಲ್ಲಿ ಬಿಜೆಪಿ 22 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್- 19, ಜಾ.ದಳ-18, ಬಿಎಸ್ಪಿ 1, ಪಕ್ಷೇತರರು 5 ಸ್ಥಾನಗಳಲ್ಲಿ ಜಯ ಗಳಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜಾ.ದಳ ಮೈತ್ರಿ ಸರ್ಕಾರ ಅಧಿಕಾರದಲ್ಲಿ ಇರುವ ಹಿನ್ನೆಲೆಯಲ್ಲಿ ನಗರಪಾಲಿಕೆಯಲ್ಲಿ ಕೂಡ ಕಾಂಗ್ರೆಸ್ ಮತ್ತು ಜಾ.ದಳ ಮೈತ್ರಿಗೆ ನಿರ್ಧಾರ ಮಾಡಿದೆ. ಆದರೆ ಯಾವ ಪಕ್ಷಕ್ಕೆ ಮಹಾಪೌರ ಸ್ಥಾನ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಅಧಿಕಾರ ಹಂಚಿಕೆ ಸೂತ್ರವೂ ಸಿದ್ಧವಾಗಿಲ್ಲ. ಈ ವಿಷಯ ಸಮನ್ವಯ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ ಎನ್ನಲಾಗಿದೆ.
ಮೂರು ಮಹಾನಗರ ಪಾಲಿಕೆಗಳಿಗೆ ಇನ್ನೂ ಹೊಸ ಮೇಯರ್ ಸಿಕ್ಕಿಲ್ಲ!
ಪಟ್ಟು ಹಿಡಿದ ಸಿದ್ದರಾಮಯ್ಯ
ಇನ್ನು ಮೈಸೂರು ನಗರಪಾಲಿಕೆಯಲ್ಲಿ ಜಾ.ದಳ-ಕಾಂಗ್ರೆಸ್ ದೋಸ್ತಿಗೆ ಮುಂದಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾಪೌರರ ಸ್ಥಾನ ನಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೂ ಮುನ್ನ ಸಂಖ್ಯಾಬಲದ ಆಧಾರದ ಮೇಲೆ ಮಹಾಪೌರರ ಸ್ಥಾನ ನಮಗೇ ದಕ್ಕಲಿದೆ. ಮಹಾಪೌರರ ಸ್ಥಾನ ನಮಗೇ ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದರು.
ಸ್ಥಳೀಯ ಸಂಸ್ಥೆ ಫಲಿತಾಂಶ : ಯಾವ ಪಕ್ಷದ ಹಿಡಿತ ಎಷ್ಟು?
ಜೆಡಿಎಸ್ ಮುಖಂಡರ ವಾದ
ಉಪಚುನಾವಣೆಯ ಫಲಿತಾಂಶದಿಂದ ಬೀಗುತ್ತಿರುವ ಜಾ.ದಳ, ಕಾಂಗೆಸ್ ಮಿತ್ರ ಪಕ್ಷಗಳು ಇಲ್ಲಿ ಯಾವ ದಾಳ ಉರುಳಿಸುತ್ತವೆಯೋ ಗೊತ್ತಿಲ್ಲ. ಆದರೆ ಬೆಂಗಳೂರು ಮಹಾಪೌರರ ಸ್ಥಾನವನ್ನು ಕಾಂಗ್ರೆಸ್ ಪಡೆದಿರುವುದರಿಂದ ಇಲ್ಲಿ ಜಾ.ದಳಕ್ಕೆ ಬಿಟ್ಟುಕೊಡಬೇಕೆನ್ನುವುದು ಮುಖಂಡರ ವಾದವಾಗಿದೆ.
ಪ್ರಬಲ ಆಕಾಂಕ್ಷಿಗಳು
ಆಯ್ಕೆಯಾಗಿರುವ ಸದಸ್ಯರಲ್ಲಿ ಜಾ.ದಳ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ವರ್ಗದ ಅರ್ಹ ಮಹಿಳೆಯರಿದ್ದರೂ ಯಾವ ಪಕ್ಷಕ್ಕೆ ಮಹಾಪೌರರ ಗಾದಿ ಒಲಿಯಲಿದೆ ಎಂಬುದು ನಿಶ್ಚಯ ಆಗದಿರುವ ಹಿನ್ನೆಲೆಯಲ್ಲಿ ಎರಡೂ ಪಕ್ಷದ ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.
ಜಾ.ದಳದಿಂದ ಭಾಗ್ಯ ಮಹದೇಶ್, ರುಕ್ಮಿಣಿ ಮಾದೇಗೌಡ, ಅಶ್ವಿನಿ ಅನಂತು, ಪ್ರೇಮಾ ಶಂಕರೇಗೌಡ, ಕಾಂಗ್ರೆಸ್ನಿಂದ ಶೋಭಾ ಸುನಿಲ್, ಪುಷ್ಪಲತಾ ಜಗನ್ನಾಥ್ ಅವರು ಮಹಾಪೌರರ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.