ದಸರಾ ಗಜರಾಜರಿಗೆ ಬೆಣ್ಣೆಯಲ್ಲಿ ಬೇಯಿಸಿದ ಘಮಘಮಿಸುವ ತರಹೇವಾರಿ ಖಾದ್ಯ
ಮೈಸೂರು, ಸೆಪ್ಟೆಂಬರ್. 28 : ಕಾಡಿನಲ್ಲಿ ಪೌಷ್ಠಿಕ ಆಹಾರ ದೊರೆಯದೆ ಕೆಲವು ಆನೆಗಳು ಸೊರಗಿರುತ್ತವೆ. ಮತ್ತೆ ಕೆಲವು ತೂಕ ಕಳೆದುಕೊಂಡಿರುತ್ತವೆ. ಅದರಲ್ಲೂ ಕಳೆದ ಮೂರು ವರ್ಷದಿಂದ ತೀವ್ರ ಬರ, ಹಸಿರು ನಾಶ, ನೀರು, ಬಿದಿರು ಆಹಾರ ಸಿಗದೆ ಆನೆಗಳು ಪರದಾಡಿವೆ.
ಕಳೆದ ದಸರಾ ಸಂದರ್ಭದಲ್ಲಿ ತಮ್ಮ ತೂಕ ಹೆಚ್ಚಿಸಿಕೊಂಡು ಹೋಗಿದ್ದ ಆನೆಗಳು ಈಗ ಸರಾಸರಿ 200ರಿಂದ 300 ಕೆಜಿ ತೂಕ ಕಳೆದುಕೊಂಡಿವೆ. ಅದರಲ್ಲೂ ಅರ್ಜುನ 350 ಕೆಜಿ ತೂಕ ಕಳೆದುಕೊಂಡಿದ್ದಾನೆ. ಈ ಆನೆಗಳನ್ನು ದಸರಾಗೆ ಸಜ್ಜುಗೊಳಿಸುವ ಹೊಣೆ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಜವಾಬ್ದಾರಿಯಾಗಿದೆ.
ದಸರೆಯಲ್ಲಿ ಭಾಗವಹಿಸುವ ಮೊದಲ ತಂಡದ ಆನೆಗಳ ಸಂಪೂರ್ಣ ವಿವರ
ಈಗ ಅವುಗಳನ್ನು ಸಲಹುವ, ಪೋಷಿಸುವ ಕೆಲಸ ಆರಂಭವಾಗಿದೆ. ಒಂದೆಡೆ ಪ್ರತಿನಿತ್ಯ ತಾಲೀಮು ನಡೆಯುತ್ತಿದ್ದರೆ, ಮತ್ತೊಂದೆಡೆ ಗಜಪಡೆಗಳಿಗೆ ರಾಜಾತಿಥ್ಯ ಜೋರಾಗಿಯೇ ಸಾಗುತ್ತಿದೆ. ಅರಮನೆಗೆ ಪ್ರವೇಶ ಪಡೆದ ಮರುದಿನದಿಂದಲೇ ಅಂದರೆ ಸೆ.6ರಿಂದಲೇ ಗಜ ಪಾಕಶಾಲೆ ಆರಂಭವಾಗಿದೆ.
ಗಜಪಡೆಗೆ ಸಮಯಕ್ಕೆ ಸರಿಯಾಗಿ ಶಕ್ತಿಯುತ, ಸ್ವಾದಿಷ್ಟ ಆಹಾರಗಳನ್ನು ನೀಡುವ ಮೂಲಕ ಅವುಗಳನ್ನು ದೈಹಿಕವಾಗಿ ಬಲಿಷ್ಠಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಅವುಗಳಿಗೆ ವಿಶೇಷ ಆಹಾರ ನೀಡಿ ಉಪಚಾರ ಮಾಡಿದರೆ ಮಾತ್ರ ಜಂಬೂ ಸವಾರಿಯಲ್ಲಿ ಆನೆಗಳು ರಾಜಗಾಂಭೀರ್ಯದಲ್ಲಿ ನಡೆಯಲು ಸಾಧ್ಯ.
ಹೀಗಾಗಿ ಆನೆಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ. ಬೆಳಗ್ಗೆ ತಾಲೀಮು ಆರಂಭಿಸುವ ಮುನ್ನ 15ರಿಂದ 20 ಕೆಜಿ ಕಾಳುಗಳ ಉಂಡೆ, ಅಲ್ಲಿಂದ ಬಂದ ಮೇಲೆ ತರಕಾರಿಗಳ ಉಂಡೆ, ಮಧ್ಯಾಹ್ನದಿಂದ ಸಂಜೆಯವರೆಗೆ ಹಸಿರು ಸೊಪ್ಪು ತಿನ್ನುತ್ತಿರುತ್ತವೆ.
ಈ ಬಾರಿ ಎರಡು ಸಲ ನಡೆಯಲಿದೆ ವಿಶ್ವವಿಖ್ಯಾತ ಜಂಬೂ ಸವಾರಿ!
ಅಂಬಾರಿ ಹೊರುವ ದಿನ ವಿಶೇಷ ಆಹಾರ ನೀಡಲಾಗುತ್ತದೆ. ಜೊತೆಗೆ ಹಸಿ ಹುಲ್ಲು ನೀಡಿ ಜಂಬೂ ಸವಾರಿ ಸಂದರ್ಭ ಮಾರ್ಗ ಮಧ್ಯೆ ನೀರಡಿಕೆಯಾಗುವುದನ್ನು ತಪ್ಪಿಸಲಾಗುತ್ತದೆ.
ಹೀಗಿದೆ ಮೆನು
ಬೆಳಗ್ಗೆ 15-20 ಕೆಜಿ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನು ಬೇಯಿಸಿದ ಉಂಡೆ. ಮಧ್ಯಾಹ್ನ 15 ಕೆಜಿ (ಅರ್ಧ ಕೆಜಿ ಬೆಣ್ಣೆ) ಬೇಯಿಸಿದ ತರಕಾರಿ ಉಂಡೆ. ನಂತರ ಸಂಜೆಯವರೆಗೆ ಹಸಿರು ಸೊಪ್ಪು. ಸಂಜೆ 12+12 ಕೆಜಿ ಭತ್ತದ ಹುಲ್ಲಿನಲ್ಲಿ ಕುಸುರೆಯ ಸುತ್ತಿ ಭತ್ತವನ್ನು ಬೇಯಿಸಿ ಹಾಕಿ, ಬೆಲ್ಲ ಹಿಂಡಿ, ತೆಂಗಿನ ಕಾಯಿ, ಈರುಳ್ಳಿ, ಬೇಯಿಸಿ ಒಟ್ಟಿಗೆ ಕೊಡಲಾಗುತ್ತದೆ.
ಕನಿಷ್ಠ ಪ್ರತಿ ಆನೆಗೆ 12 ಕೆಜಿ ಭತ್ತ, 12 ಕೆಜಿ ಹುಲ್ಲು, 250 ಗ್ರಾಂ ಬೆಲ್ಲ, 2 ತೆಂಗಿನ ಕಾಯಿ, ಅರ್ಧ ಕೆಜಿ ಬೆಣ್ಣೆ ಕೊಡಲಾಗುತ್ತದೆ. ಇದರ ಜತೆಗೆ ಜೋಳದ ಕಡ್ಡಿ, ಸೊಪ್ಪು ನೀಡಲಾಗುತ್ತದೆ.
ಮೊದಲ ಬಾರಿಗೆ ಸಿಡಿಮದ್ದು ಶಬ್ದಕ್ಕೆ ಕಿವಿ ಕೊಡಲಿದ್ದಾನೆ ಧನಂಜಯ
ಆಯುಧ ಪೂಜೆಯ ದಿನ ಸ್ಪೆಷಲ್ ಕುಸುರೆ 15 ಕೆಜಿ ಅವಲಕ್ಕಿ, ಗ್ಲುಕೋಸ್, ಬೆಣ್ಣೆ, ಬೆಲ್ಲ, ತೆಂಗಿನಕಾಯಿ ಎಲ್ಲವನ್ನು ಹಸಿ ಹುಲ್ಲಿನಲ್ಲಿ ಸುತ್ತಿ ಸ್ಪೆಷಲ್ ಕುಸುರೆ ಮಾಡಿ ತಿನ್ನಿಸಲಾಗುತ್ತದೆ. ಜತೆಗೆ ಹಸಿ ಹುಲ್ಲು ಸಹ ನೀಡಲಾಗುತ್ತದೆ.