ಮೈಸೂರು ದಸರಾ ಗಜಪಡೆಗಳಿಗೆ 32 ಲಕ್ಷ ರುಪಾಯಿ ವಿಮೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಸಕಲ ಸಿದ್ಧತೆಗಳು ಆರಂಭಗೊಂಡಿವೆ. ದಸರಾದ ಪ್ರಮುಖ ಪ್ರಮುಖ ಆಕರ್ಷಣೆ ಕೇಂದ್ರ ಬಿಂದು ಜಂಬೂ ಸವಾರಿ. ಈ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ ಆರು ಆನೆಗಳ ಮೊದಲ ತಂಡ ಈಗಾಗಲೇ ಕಾಡಿನಿಂದ ನಾಡಿಗೆ ಆಗಮಿಸಿವೆ.
ಅರಮನೆಗೆ ಸಾಂಪ್ರದಾಯಿಕ ಸ್ವಾಗತ ನೀಡಿ ಬರಮಾಡಿಕೊಂಡ ಬಳಿಕ ಜಂಬೂಸವಾರಿಗೆ ಗಜಪಡೆಗಳ ತಯಾರಿ ಆರಂಭವಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಆರು ಆನೆಗಳ ಗಜಪಡೆ ಆಗಮಿಸಲಿದ್ದು, ತಾಲೀಮು ಆರಂಭಗೊಳ್ಳಲಿದೆ. ಈ ಬಾರಿ ಜಂಬೂಸವಾರಿಗೆ ಆಗಮಿಸಲಿರುವ ಗಜಪಡೆಗೆ ಸುಮಾರು 32 ಲಕ್ಷ ರು. ವಿಮೆ ಮಾಡಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.[ದಸರಾ ವಿಶೇಷ: ಮಾವುತರೆಂಬ ಗಜಪಡೆಯ ರಿಂಗ್ ಮಾಸ್ಟರ್!]
ಪ್ರತಿ ವರ್ಷವೂ ಗಜಪಡೆಗಳಿಗೆ ವಿಮೆ ಮಾಡಿಸಲಾಗುತ್ತದೆ. ಒಂದು ತಂಡ(ಆರು ಆನೆಗಳ)ಕ್ಕೆ ತಲಾ 16 ಲಕ್ಷದಂತೆ ಎರಡು ತಂಡಕ್ಕೆ 32ಲಕ್ಷ ರು. ವಿಮೆ ಮಾಡಲಾಗಿದೆ. ವಿಮೆ ಕಂತಿನ ಹಣವಾಗಿ ಇದೀಗ 60 ಸಾವಿರ ರು.ವನ್ನು ಓರಿಯೆಂಟಲ್ ಇನ್ಷೂರೆನ್ಸ್ ಕಂಪೆನಿಗೆ ಪಾವತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.[ಮೈಸೂರು ದಸರಾ ಜಂಬೂಸವಾರಿಯ ಗಜಪಡೆಗಳ ಬಗ್ಗೆ ಗೊತ್ತಾ?]
ಆನೆಗಳಿಗೆ ಮಾತ್ರವಲ್ಲದೆ ದಸರಾದಲ್ಲಿ ಪಾಲ್ಗೊಳ್ಳುವ ಕಾವಾಡಿ ಮತ್ತು ಮಾವುತರಿಗೂ ವಿಮೆ ಮಾಡಲಾಗಿದೆ. ಮೊದಲ ತಂಡ ಗಜಪಡೆಯ ವಿಮಾ ಅವಧಿ ಗಜಪಯಣದ ದಿನದಿಂದಲೇ ಜಾರಿಗೆ ಬಂದಿದ್ದು, ಇನ್ನು ದಸರಾ ದಿನದಂದು ಚಿನ್ನದ ಅಂಬಾರಿಯ ಮೆರವಣಿಗೆ ನಡೆಯಲಿದೆ. ಅದಕ್ಕೂ ವಿಮೆ ಮಾಡಿಸಲಾಗುತ್ತದೆ. ಒಟ್ಟಾರೆ ವಿಮೆಯಡಿ ದಸರಾ ನಡೆಯಲಿದೆ.