ಗಂಧದ ಕಡ್ಡಿ ಹಚ್ಚುವ ಮುನ್ನ ಗ್ಯಾಸ್ ಆಫ್ ಇದ್ಯಾ ನೋಡ್ಕೊಳ್ಳಿ
ಪಿರಿಯಾಪಟ್ಟಣ, ನವೆಂಬರ್, 07 : ಅಡುಗೆ ಅನಿಲ ಸೋರಿಕೆಯಿಂದ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಪುಟ್ಟ ಬಾಲಕಿ ಸಾವನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಒಳಕೋಟೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಪಿರಿಯಾಪಟ್ಟಣದ ಒಳಕೋಟೆಯ ನಾಗರಾಜ್ ಮನೆಯಲ್ಲಿ ನಡೆದ ಅವಘಡದಲ್ಲಿ ಸಾವನ್ನಪ್ಪಿದ ಬಾಲಕಿ ನಮಿತಾ (2.5). ನಾಗರಾಜು ಅವರ ಅತ್ತೆ ನಾಗಮ್ಮ (55) ಅವರಿಗೆ ದೇಹದ ಅರ್ಧಭಾಗ ಸುಟ್ಟುಹೋಗಿದ್ದು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.[ಆನ್ ಲೈನ್ ನಲ್ಲೇ ಹೊಸ ಗ್ಯಾಸ್ ಸಂಪರ್ಕ ಪಡೆಯಿರಿ]
ನಾಗರಾಜು ಅವರ ಮನೆಯಲ್ಲಿ ಶುಕ್ರವಾರ ಹಬ್ಬವಿತ್ತು. ಆ ಹಬ್ಬದ ಆಚರಣೆಯಲ್ಲಿ ತೊಡಗಿದ್ದ ಮನೆಯವರು ಪೂಜೆ ಮುಗಿಸಿ ಮನೆ ಹೊರಗೆ ಕುಳಿತಿದ್ದರು. ಮನೆ ಪೂಜೆಯಲ್ಲಿ ಭಾಗವಹಿಸದ ನಾಗಮ್ಮ ರಾತ್ರಿ 8 ಗಂಟೆಗೆ ಪೂಜೆ ಮಾಡಲು ಮನೆ ಒಳಗೆ ಹೋಗಿದ್ದಾರೆ.[ಚಿತ್ರಗಳು : ಕುಮಟಾದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ, 4 ಸಾವು]
ಈ ಮೊದಲೇ ಅಡುಗೆ ಅನಿಲ ಸೋರಿಕೆಯಾಗಿರುವುದು ತಿಳಿಯದ ನಾಗಮ್ಮ ಪೂಜೆ ಮಾಡಲು ಗಂಧದ ಕಡ್ಡಿ ಹಚ್ಚಿದ್ದಾರೆ. ಆಗ ಅದೇ ವೇಳೆಗೆ ಆಕಸ್ಮಿಕವಾಗಿ ಮನೆಯೊಳಗೆ ಬಂದ ನಮಿತಾ ಮತ್ತು ನಾಗಮ್ಮ ಇಬ್ಬರು ಬೆಂಕಿ ಅವಘಡಕ್ಕೆ ಸಿಲುಕಿ ಗಾಯಗೊಂಡಿದ್ದಾರೆ
ಅನಿಲ ಸೋರಿಕೆ ದುರಂತಕ್ಕೆ ಸಿಲುಕಿದ ನಮಿತಾ ಮತ್ತು ನಾಗಮ್ಮ ಇಬ್ಬರನ್ನು ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುತ್ತಿದ್ದ ವೇಳೆ ಬಾಲಕಿ ನಮಿತಾ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ. ನಾಗಮ್ಮನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದೆ. ಈ ಬಗ್ಗೆ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.