ಮೈಸೂರಿನ ತ್ರಿಪುರ ಸುಂದರಿ ದೇವಿಗೆ ನೋಟಿನ ಅಲಂಕಾರ
ಮೈಸೂರು, ಅಕ್ಟೋಬರ್ 19 : ಕಾರ್ತಿಕ ಮಾಸ ಆರಂಭವಾಗುತ್ತಿದ್ದಂತೆ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ ಬಲು ಜೋರಾಗಿಯೇ ನಡೆಯುತ್ತವೆ.
ಚಾಮುಂಡೇಶ್ವರಿ ದೇವಿಯ ತಂಗಿ ಚಿಕ್ಕದೇವಮ್ಮನ ನೆಲೆ ಗೊತ್ತಾ?
ಅದೇ ರೀತಿ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ಸ್ವಾಮಿ ದೇವಾಲಯದಲ್ಲೂ ಬಾಲಾ ತ್ರಿಪುರ ಸುಂದರಿ ಅಮ್ಮನವರಿಗೆ ವಿಶೇಷ ನೋಟುಗಳ ಅಲಂಕಾರ ಮಾಡಲಾಗಿತ್ತು. ನೋಟಿನ ಅಲಂಕಾರದಲ್ಲಿ ತಾಯಿ ತ್ರಿಪುರ ಸುಂದರಿ ಮಹಾಲಕ್ಷ್ಮೀ ಅವತಾರದಲ್ಲಿ ಭೂವಿಗಿಳಿದಂತೆ ಭಾಸವಾಗುತ್ತಿದೆ.
ದೀಪಾವಳಿ ಅಮಾವಾಸ್ಯೆ ಗೋಧೂಳಿ ಲಗ್ನದಲ್ಲಿ ಹೀಗೆ ನೋಟಿನ ಅಲಂಕಾರ ಮಾಡಿ ಧನಲಕ್ಷ್ಮಿಗೆ ನಾಡಿನಾದ್ಯಂತ ಪೂಜಿಸಲಾಯ್ತು. 10 ರೂಪಾಯಿಯಿಂದ ಹಿಡಿದು ಒಂದು ಸಾವಿರ ರೂಪಾಯಿ ತನಕ ಎಲ್ಲಾ ಮುಖಬೆಲೆಯ ನೋಟುಗಳನ್ನು ಈ ಅಲಂಕಾರಕ್ಕೆ ಬಳಸಲಾಗಿದೆ.
ಸುಮಾರು 30ಕ್ಕೂ ಹೆಚ್ಚು ಮಂದಿ 50 ಸಾವಿರ, 1 ಲಕ್ಷದಂತೆ ಒಟ್ಟು 10 ಲಕ್ಷ ರೂಪಾಯಿಯನ್ನು ಅಲಂಕರಿಸಲು ಕೊಟ್ಟಿದ್ದಾರೆ. ಇದರಿಂದ ಅವರಿಗೆ ಧನ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ ಎನ್ನುತ್ತಾರೆ ದೇವಾಲಯದ ಅರ್ಚಕ ಸೋಮಶೇಖರ್.
ಕಳೆದ 15 ವರ್ಷಗಳಿಂದ ದೇವಾಲಯದಲ್ಲಿ ಈ ರೀತಿ ಧನಲಕ್ಷ್ಮಿ ಹಬ್ಬದ ದಿನ ನೋಟಿನ ಅಲಂಕಾರ ಮಾಡುವ ಸಂಪ್ರದಾಯ ನಡೆಯುತ್ತಾ ಬಂದಿದೆ. ಇನ್ನೂ ಮೂರು ದಿನಗಳ ಕಾಲ ಧನಲಕ್ಷ್ಮಿ ಪೂಜೆ ನಡೆಯುವುದರಿಂದ ಅಷ್ಟೂ ದಿನ ನೋಟಿನ ಅಲಂಕಾರ ಇರುತ್ತದೆ. ನಿತ್ಯ ಸಾವಿರಾರು ಭಕ್ತರು ಆಗಮಿಸಿ ನೋಟಿನ ಅಲಂಕಾರ ವೀಕ್ಷಿಸುವ ಮೂಲಕ ಖುಷಿಪಡುತ್ತಿದ್ದಾರೆ.
ದೇವಿಯ ವಿಶೇಷ ಅಲಂಕಾರವನ್ನು ನೋಡಲು ಭಕ್ತರು ದೇವಾಲಯಕ್ಕೆ ಮುಗಿಬಿದ್ದಿದ್ದು, ಪೂಜೆ ಸಲ್ಲಿಸುತ್ತಿದ್ದಾರೆ. ಭಾನುವಾರ ಸಂಜೆಯವರೆಗೂ ಅಲಂಕಾರ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದ್ದು, ಸಂಜೆ ಮಹಾಲಕ್ಷ್ಮೀ ಪೂಜೆಯೊಂದಿಗೆ ಭಕ್ತರಿಗೆ ಪ್ರಸಾದ ವಿನಿಯೋಗ ನಡೆಯಲಿದೆ.