ಇಂದಿನಿಂದ(ಫೆ. 17) ಕೆ.ಆರ್.ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಮೈಸೂರು, ಫೆಬ್ರವರಿ 17 : ಭತ್ತದ ನಾಡು ಕೃಷ್ಣರಾಜ ನಗರದ ನವವಧುವಿನಂತೆ ಕಂಗೊಳಿಸುತ್ತಿದೆ. ಭತ್ತದ ಘಮಲಿನ ಜೊತೆಗೆ ಕನ್ನಡದ ಕಂಪು ಮೇಳೈಸಿ ಕನ್ನಡ ಪ್ರೇಮಿಗಳನ್ನು ಹೊಸದೊಂದು ಲೋಕಕ್ಕೆ ಕರೆದೊಯ್ದಿದೆ.
ಮೈಸೂರು ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆ.ಆರ್.ನಗರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣದಲ್ಲಿ ಹಿರಿಯ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಹಾಗೂ ಸಮ್ಮೇಳನಾಧ್ಯಕ್ಷ ಅನಂತರಾಮು, ಶಾಸಕ ಸಾ.ರಾ.ಮಹೇಶ್ ಕನ್ನಡ ತಾಯಿ ಭುವನೇಶ್ವರಿ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಚಾಲನೆಗೂ ಮುನ್ನ ಸಮ್ಮೇಳನಾಧ್ಯಕ್ಷ ಸಾಹಿತಿ ಅನಂತರಾಮು ಅವರನ್ನು ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯ ಮೂಲಕ ಡಾ.ರಾಜಕುಮಾರ್ ಬಾನಂಗಳ ಬಯಲು ರಂಗಮಂದಿರದ ವೇದಿಕೆಗೆ ಕರೆತರಲಾಯಿತು.[ಮೈಸೂರಿನಲ್ಲಿ 83ನೇ ಸಾಹಿತ್ಯ ಸಮ್ಮೇಳನ: ಸಿಹಿ ಹಂಚಿ ಸಂಭ್ರಮಾಚರಣೆ]
ವೀರಗಾಸೆ, ಡೊಳ್ಳುಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಸಮ್ಮೇಳನಾಧ್ಯಕ್ಷರು ಸಾಗಿ ಬಂದರು. ಶಾಲಾ- ಕಾಲೇಜು ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಸಮ್ಮೇಳನಾಧ್ಯಕ್ಷ ಅನಂತರಾಮು ಅವರನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮಂಜುನಾಥ್, ಪುರಸಭಾಧ್ಯಕ್ಷೆ ಕವಿತಾ ವಿಜಯಕುಮಾರ್ ಬೆಳ್ಳಿ ರಥದಲ್ಲಿ ಕುಳ್ಳಿರಿಸಿ ಕನ್ನಡದ ತೇರನ್ನು ಎಳೆದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ ರಾಜಣ್ಣ ತಾಲೂಕು ಘಟಕದ ಅಧ್ಯಕ್ಷ ಡಿಂಡಿಮ ಶಂಕರ್ ಸೇರಿದಂತೆ ಸಹಸ್ರಾರು ಕನ್ನಡಾಭಿಮಾನಿಗಳು ಮೆರವಣಿಗೆಯ ಜೊತೆ ಹೆಜ್ಜೆ ಹಾಕಿದರು. ಎರಡು ದಿನಗಳ ಕಾಲ ಕೆ.ಆರ್.ನಗರದಲ್ಲಿ ಕನ್ನಡದ ಕಲರವ ಕೇಳಿ ಬರಲಿದೆ.