ಮೈಸೂರು ಕ್ರಿಕೆಟ್ ಅಡ್ಡೆಗಳ ಮೇಲೆ ದಾಳಿ, ಆರು ಬಂಧನ
ಮೈಸೂರು, ಜನವರಿ 31 : ಕ್ರಿಕೆಟ್ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿರುವ ಪೊಲೀಸರು ಅವರಿಂದ 47 ಸಾವಿರ ರೂ. ನಗದು, ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
ಖಚಿತ ಮಾಹಿತಿಯ ಮೇರೆಗೆ ನರಸಿಂಹರಾಜಠಾಣಾ ವ್ಯಾಪ್ತಿಯ ರಿಂಗ್ ರಸ್ತೆಯ ಪುಷ್ಪಾಶ್ರಮದ ಬಳಿ ದಾಳಿ ನಡೆಸಿದ ಪೊಲೀಸರು ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗ್ರಾಮದ ಎನ್.ರಮೇಶ್ (34) ಎಂಬಾತನನ್ನು ಬಂಧಿಸಿ, ಆತನಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಗೆ ಬಳಕೆಯಾಗಿದ್ದ 38ಸಾವಿರ ರೂ.ನಗದು, 2ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯಾರಣ್ಯಪುರದಲ್ಲೂ ದಾಳಿ: ಇನ್ನೊಂದು ಪ್ರಕರಣದಲ್ಲಿ ಖಚಿತ ಮಾಹಿತಿಯ ಮೇರೆಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ನಗರ ಇಂಡಸ್ಟ್ರೀಯಲ್ ಬಳಿಯಿರುವ ಅಪಾರ್ಟ್ ಮೆಂಟೊಂದರ ಮೇಲೆ ದಾಳಿ ಪೊಲೀಸರು ನಡೆಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ನಡುವೆ ನಡೆಯುತ್ತಿದ್ದ ಬೆಟ್ಟಿಂಗ್ ಗೆ ಸಂಬಂಧಿಸಿದಂತೆ ಜೆ.ಪಿ.ನಗರ ಜನತಾಬಡಾವಣೆಯ ನಿವಾಸಿ ಶ್ರೀಕಂಠವೀರ್ (29), ದಟ್ಟಗಳ್ಳಿ ನಿವಾಸಿ ವಿಜಯಕುಮಾರ್(34), ವಿಜಯನಗರ ನಿವಾಸಿ ಅಬ್ದುಲ್ ರಜಾಕ್(38), ಕೈಲಾಸಪುರಂ ನಿವಾಸಿ ಕೈಲಾಸ್ (32), ಮಹದೇವಪುರ ನಿವಾಸಿ ಗುರುಸ್ವಾಮಿ(33) ಎಂಬವರನ್ನು ಬಂಧಿಸಿದ್ದು, ಬಂಧಿತರಿಂದ 9,550 ರೂ.ನಗದು, 1ಎಲ್.ಸಿ.ಡಿ.ಟಿ.ವಿ, 1ಲ್ಯಾಪ್ ಟಾಪ್, 14ಮೊಬೈಲ್ ಫೋನ್ ಗಳು, 1ಕಾರು, 3ದ್ವಿಚಕ್ರ ವಾಹನ ಮತ್ತು ಇತರೇ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.