ಕೆಆರ್ ನಗರ ತಾಲೂಕಿನಲ್ಲಿ ವರ್ಷವಾದರೂ ಮುಗಿಯದ ಕಾಮಗಾರಿ, ಈ ನಿರ್ಲಕ್ಷ್ಯವೇಕೆ?
ಮೈಸೂರು, ಅಕ್ಟೋಬರ್.24: ಗ್ರಾಮೀಣ ರಸ್ತೆಗಳು ಹೇಗಿವೆ ಎಂಬುದರ ಮೇಲೆ ದೇಶದ ಅಭಿವೃದ್ಧಿ ನಿಂತಿದೆ. ರಸ್ತೆ ಅಭಿವೃದ್ಧಿ ದೇಶದ ನಾಗರೀಕನಿಗೆ ನೀಡುವ ಮೂಲ ಸೌಲಭ್ಯಗಳಲ್ಲೊಂದಾಗಿದೆ. ಆದರೆ ಇವತ್ತಿಗೂ ಬಹಳಷ್ಟು ಹಳ್ಳಿಗಳ ಜನ ಉತ್ತಮ ರಸ್ತೆಯಿಲ್ಲದೆ ಪರದಾಡುವಂತಾಗಿದೆ.
ಇಷ್ಟಕ್ಕೂ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡದ ಕಾರಣದಿಂದಾಗಿ ಒಂದು ವೇಳೆ ನೀಡಿದರೂ ಕಾಮಗಾರಿ ಜವಬ್ದಾರಿ ಹೊತ್ತ ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷ್ಯ ಮತ್ತು ಅಸಡ್ಡೆಯ ಪರಿಣಾಮವಾಗಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.
ಮಲೆನಾಡು, ಕರಾವಳಿಗೆ ಸೇತುವೆಗಳ ಕೊಡುಗೆ ಘೋಷಿಸಿದ ಕುಮಾರಸ್ವಾಮಿ
ಕೆ.ಆರ್.ನಗರ ತಾಲೂಕಿನಲ್ಲಿ ಎರಡು ರಸ್ತೆಗಳ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗಳು ಕುಂಠಿತಗೊಂಡಿರುವುದು ಸಾಕ್ಷಿಯಾಗಿದೆ.
ಕೆ.ಆರ್.ನಗರ ತಾಲೂಕಿನ ಹಳಿಯೂರು ಗ್ರಾಮದಿಂದ ಅಂಕನಹಳ್ಳಿ ಗ್ರಾಮಕ್ಕೆ ಮತ್ತು ಕೆ.ಆರ್.ನಗರ -ರಾಮನಾಥಪುರ ರಾಜ್ಯ ಹೆದ್ದಾರಿ ರಸ್ತೆಯಿಂದ ಡಿ.ಕೆ.ಕೊಪ್ಪಲು ಗ್ರಾಮಕ್ಕೆ ತೆರಳುವ ಈ ಎರಡು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು ಒಂದು ವರ್ಷವಾಗುತ್ತಾ ಬಂದಿದ್ದರೂ ಇನ್ನು ಕಾಮಗಾರಿ ಮುಗಿಯುವ ಲಕ್ಷಣವೇ ಕಂಡು ಬರುತ್ತಿಲ್ಲ.
ಜಾಣ ಕುರುಡು ಪ್ರದರ್ಶನ
ಎರಡು ಕಾಮಗಾರಿಗೆ 7 ರಿಂದ 8 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ಕಾಮಗಾರಿ ಆರಂಭಗೊಂಡ ತಕ್ಷಣ ಶರವೇಗದಲ್ಲಿ ನಡೆದ ಕಾಮಗಾರಿ ಮೆಟ್ಲಿಂಗ್ ಮಾಡಿ ಮಣ್ಣು ಹಾಕಿ ನಂತರದ ದಿನಗಳಲ್ಲಿ ಸುಮ್ಮನಾದ ಗುತ್ತಿಗೆದಾರ ಇತ್ತ ತಿರುಗಿ ನೋಡದೆ ಬೇಜವಬ್ದಾರಿಯಾಗಿ ವರ್ತಿಸುತ್ತಿದ್ದು ಇದನ್ನು ಕೇಳಬೇಕಾದ ಎಇಇ ಮತ್ತು ಕಿರಿಯ ಇಂಜಿನಿಯರ್ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಈ ರಸ್ತೆಗಳ ಕಾಮಗಾರಿ ಹಳ್ಳ ಹಿಡಿಯಲು ಕಾರಣವಾಗಿದೆ.
ತಿಂಗಳೊಳಗೆ ಎಲಿವೇಟೆಡ್ ಪೆರಿಫೆರಲ್ ರಸ್ತೆ ಕಾಮಗಾರಿ: ಎಚ್ಡಿಕೆ ಘೋಷಣೆ
ಸಂಚರಿಸಬೇಕಾದ ಅನಿವಾರ್ಯತೆ
ಅಂದು ಶಾಸಕರಾಗಿದ್ದ ಹಾಲಿ ಸಚಿವ ಸಾ.ರಾ.ಮಹೇಶ್ ಅವರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಇಲಾಖೆಯ ಮೇಲೆ ಒತ್ತಡವೇರಿ ಅನುದಾನವನ್ನು ಮಂಜೂರು ಮಾಡಿಸಿದ್ದರು ಇದನ್ನು ಸದುಪಯೋಗ ಮಾಡಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವ ಪರಿಣಾಮ ಧೂಳುಮಯ ರಸ್ತೆಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪೆರಿಫೆರಲ್ ರಸ್ತೆ: ದಶಕದ ಬಳಿಕ ಕಡತದ ಧೂಳು ಝಾಡಿಸಿದ ಸರ್ಕಾರ
ಗುಣಮಟ್ಟದ ಕೊರತೆ
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ರಸ್ತೆಗಳಿಗೆ ಈಗಾಗಲೇ ಒಂದು ಬಾರಿ ಮೆಟ್ಲಿಂಗ್ ಅನ್ನು ಗುತ್ತಿಗೆದಾರ ಮಾಡಿದ್ದು 2ನೇ ಮೆಟ್ಲಿಂಗ್ ಮಾಡದೆ ಬಿಟ್ಟಿರುವ ಪರಿಣಾಮ ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲುಗಳು ಮೇಲೆದ್ದು ಮೆಟ್ಲಿಂಗ್ ಕಿತ್ತು ಹೋಗುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡರೂ ಗುಣಮಟ್ಟದ ಕೊರತೆ ಎದುರಾಗುವ ಲಕ್ಷಣಗಳು ಕಂಡು ಬರುತ್ತಿವೆ.
ಅಗತ್ಯ ಕ್ರಮ ಕೈಗೊಳ್ಳುವರೇ?
ಇನ್ನಾದರೂ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮತ್ತು ಗ್ರಾಮ ಸಡಕ್ ಇಲಾಖೆಯ ಹಿರಿಯ ಅಧಿಕಾರಿಗಳು ಹಳಿಯೂರು-ಅಂಕನಹಳ್ಳಿ ರಸ್ತೆ ಮತ್ತು ಕೆ.ಆರ್.ನಗರ -ರಾಮನಾಥಪುರ ರಾಜ್ಯ ಹೆದ್ದಾರಿ ರಸ್ತೆಯಿಂದ ಡಿ.ಕೆ.ಕೊಪ್ಪಲು ಗ್ರಾಮಕ್ಕೆ ತೆರಳುವ ರಸ್ತೆಗಳ ಅಭಿವೃದ್ದಿಗೆ ನಿರ್ಲಕ್ಷ್ಯ ವಹಿಸಿರುವ ಗುತ್ತಿಗೆದಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಿ ಈ ರಸ್ತೆಗಳ ಅಭಿವೃದ್ದಿ ಮತ್ತು ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.