ನಂಜನಗೂಡು ಉಪಚುನಾವಣೆಗೆ 'ಕೈ'ಗೆ ಅಭ್ಯರ್ಥಿ ಸಿಕ್ಕಿ ಬಿಟ್ರಾ?
ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಹುಡುಕಾಟದಲ್ಲಿ ತೊಡಗಿದೆ. ಮತ್ತೊಂದು ಕಡೆ ಜೆಡಿಎಸ್ ಮುಖಂಡ ಕಳಲೆ ಕೇಶವಮೂರ್ತಿ ಅವರಿಗೆ ಗಾಳ ಹಾಕಿದೆ ಎಂದು ತಿಳಿದು ಬಂದಿದೆ.
ಮೈಸೂರು, ಜನವರಿ. 17 : ನಂಜನಗೂಡು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ ಎನ್ನುವುದು ಖಚಿತವಾಗಿದೆ. ಆದರೆ, ಕಾಂಗ್ರೆಸ್ ನಲ್ಲಿ ಮಾತ್ರ ಇನ್ನೂ ಕೂಡ ಗೊಂದಲ ಮುಂದುವರೆದಿದೆ.
ಡಾ.ಹೆಚ್.ಎಸ್.ಮಹದೇವಪ್ಪರಾಗಲೀ, ಅವರ ಪುತ್ರ ಸುನೀಲ್ ಬೋಸ್ ಆಗಲೀ ಕಣಕ್ಕಿಳಿಯಲು ಮುಂದಾಗುತ್ತಿಲ್ಲ. ಸದ್ಯದ ಮಟ್ಟಿಗೆ ಶ್ರೀನಿವಾಸಪ್ರಸಾದ್ ಅವರ ಎದುರು ನಿಂತು ಚುನಾವಣೆ ಎದುರಿಸಲು ಕೆಲವು ನಾಯಕರು ಹಿಂದೇಟು ಹಾಕುತ್ತಿದ್ದಾರೆ.
ಇದೊಂದು ರೀತಿಯಲ್ಲಿ ಕಾಂಗ್ರೆಸ್ ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಒಂದು ಕಡೆ ಪ್ರತಿಷ್ಠೆ ಮತ್ತೊಂದು ಕಡೆ ಗೆದ್ದೇ ತೀರಬೇಕೆನ್ನುವ ಹಠದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆಬಿಸಿಯಾಗಿರುವುದಂತು ಸತ್ಯ.[ಗರಿಗೇದರಿದ ನಂಜನಗೂಡು ಉಪಚುನಾವಣಾ ರಣಕಣ]
ಈಗಿನ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಅಂತಹ ನಾಯಕರ ಕೊರತೆಯಿದೆ ಹಾಗಾಗಿಯೇ ಅನ್ಯ ಮಾರ್ಗವಿಲ್ಲದೆ ಇದೀಗ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪೈಪೋಟಿ ನೀಡಿದ್ದ ಜೆಡಿಎಸ್ ಪಕ್ಷದ ಮುಖಂಡ ಕಳಲೆ ಕೇಶವಮೂರ್ತಿ ಅವರಿಗೆ ಗಾಳ ಹಾಕಲಾಗಿದೆ.
ಅವರನ್ನು ಕಾಂಗ್ರೆಸ್ ತಮ್ಮ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಮುಂದಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ನ ಹಲವು ನಾಯಕರು ಸೇರಿದಂತೆ ಮುಖ್ಯಮಂತ್ರಿಗಳ ಆಪ್ತ ಸಲಹೆಗಾರ ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರು ನಂಜನಗೂಡು ಕ್ಷೇತ್ರದಲ್ಲಿ ಈಗಾಗಲೇ ಸಮೀಕ್ಷೆ ಮಾಡಿದ್ದಾರೆ.
ಹಿಂದುಳಿದವರ ಮತ್ತು ವೀರಶೈವರ ಮತಗಳು ಹೆಚ್ಚಿರುವ ಕಾರಣ ಅದನ್ನು ಸೆಳೆಯುವ ಸಲುವಾಗಿ ಹಿಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತಗಳನ್ನು ಪರಿಶೀಲಿಸಿ ಅದರಲ್ಲಿ ಹೆಚ್ಚಿನ ಮತ ಪಡೆದಿದ್ದ ಜೆಡಿಎಸ್ ನ ಕಳಲೆ ಕೇಶವಮೂರ್ತಿ ಅವರನ್ನೇ ಕಾಂಗ್ರೆಸ್ ಗೆ ಸೇರ್ಪಡೆಗೊಳಿಸಿ ಬಳಿಕ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಶ್ರೀನಿವಾಸ ಪ್ರಸಾದ್ ವಿರುದ್ಧ ಸ್ಪರ್ಧಿಸಲು ಕೇಶವಮೂರ್ತಿ ಅವರು ಕೂಡ ಒಪ್ಪಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕ್ಷೇತ್ರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಕೇಶವಮೂರ್ತಿ ಬಗ್ಗೆ ಅಸಮಾಧಾನವಿದ್ದು ಅವರ ಮನವೊಲಿಸುವ ಪ್ರಯತ್ನ ಮಾಡಲಾಗಿದೆ.
ಮತ್ತೊಂದೆಡೆ ಬಿಜೆಪಿಯ ಕೆಲವು ನಾಯಕರ ಬೆಂಬಲವೂ ಕೇಶವಮೂರ್ತಿ ಅವರಿಗೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ತಳಮಟ್ಟದಿಂದ ಸಂಘಟನೆ ಮಾಡಿ ಪಕ್ಷವನ್ನು ಬೆಳೆಸಿದ್ದ ನಾಯಕರಿಗೆ ದಿಢೀರ್ ಮತ್ತೊಂದು ಪಕ್ಷದಿಂದ ಬಂದು ಸ್ಪರ್ಧಿಸಿ ಗೆಲುವು ಪಡೆಯುವ ನಾಯಕರ ವಿರುದ್ಧ ಅಸಮಾಧಾನವೂ ಇದೆ.
ಇದನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ಸಮರ್ಪಕವಾಗಿ ಮಾಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ಕೇಶವಮೂರ್ತಿ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ತಲಾಸೆಯಲ್ಲಿದ್ದ ಕಾಂಗ್ರೆಸ್ ಗೆ ನಾಯಕ ಸಿಕ್ಕಿದ್ದು ಮುಂದಿನ ಬೆಳವಣಿಗೆಯನ್ನು ಕಾದು ನೋಡಬೇಕಿದೆ.