ಮೈಸೂರು ಮೇಯರ್ ಚುನಾವಣೆ: ಬಿಜೆಪಿ-ಜೆಡಿಎಸ್ ದೋಸ್ತಿಗೆ 2ನೇ ಗೆಲುವು
ಮೈಸೂರು, ಜನವರಿ 24: ಮುಖ್ಯಮಂತ್ರಿ ತವರು ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಕಾಂಗ್ರೆಸ್ ಕೈತಪ್ಪಿದೆ. ಹುಣಸೂರಿನ ನಂತರ ಬಿಜೆಪಿ ಮತ್ತು ಜೆಡಿಎಸ್ ನ ಎರಡನೇ ಪ್ರಯೋಗ ಯಶಸ್ವಿಯಾಗಿದ್ದು ಮೈಸೂರಿನಲ್ಲೂ ಮೇಯರ್ ಸ್ಥಾನದಿಂದ ಕಾಂಗ್ರೆಸ್ ವಂಚಿತವಾಗಿದೆ.
ಇಂದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತರಾಗಿ ಕಣಕ್ಕಿಳಿದಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅಚ್ಚರಿಯ ಗೆಲುವು ಸಾಧಿಸಿದ್ದಾರೆ.
ಮೈಸೂರು ಮೇಯರ್ ಚುನಾವಣೆ: ಸ್ವಪಕ್ಷದಲ್ಲೇ ಶುರುವಾಯ್ತು ಲಾಬಿ
ಇದರಿಂದ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಮುಖಭಂಗಕ್ಕೀಡಾಗಿದ್ದಾರೆ.
ಮೀಸಲಾತಿ ರಾಜಕೀಯ
ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಈ ಬಾರಿ ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ವರ್ಗದ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ನಲ್ಲಿ ಮಾತ್ರ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆಯರಿದ್ದರು. ಹೀಗಾಗಿ ಮೇಯರ್ ಸ್ಥಾನ ಕೈಪಾಲಾಗುವುದು ಬಹುತೇಕ ಖಚಿತವಾಗಿತ್ತು.
ಕಾಂಗ್ರೆಸ್ ನಲ್ಲಿದ್ದ ಕಮಲಾ ಉದಯ್ ಹಾಗೂ ಭಾಗ್ಯವತಿ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಇವರ ಪೈಕಿ ಕಾಂಗ್ರೆಸ್ ಹೈಕಮಾಂಡ್ ಕಮಲ ಅವರನ್ನು ಮೇಯರ್ ಮಾಡಲು ಹೊರಟಿತ್ತು.
(ಚಿತ್ರ: ಕಮಲಾ ಉದಯ್)
ಬಂಡಾಯವೆದ್ದ ಭಾಗ್ಯವತಿ
ಕಾಂಗ್ರೆಸ್ ಹೈಕಮಾಂಡ್ ನ ಈ ತೀರ್ಮಾನದ ವಿರುದ್ಧ ಭಾಗ್ಯವತಿ ಬಂಡಾಯವೆದ್ದಿದ್ದರು. ಮತ್ತು ಇವರಿಗೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಬೆಂಬಲ ಘೋಷಿಸಿದ್ದವು.
ಬಿಜೆಪಿ, ಜೆಡಿಎಸ್ ಪಕ್ಷಗಳ ಈ ನಿಲುವು ಖಂಡಿಸಿ ಮೈಸೂರು ಪಾಲಿಕೆ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯನ್ನೂ ನಡೆಸಿದರು. ಧಿಕ್ಕಾರ, ಘೋಷಣೆ ಕೂಗಿ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಹಿಂಬಾಗಿಲ ನಾಮಪತ್ರ
ಇಂದು ನಾಮಪತ್ರ ಸಲ್ಲಿಕೆ ವೇಳೆ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯೆ ಮೇಯರ್ ಸ್ಥಾನದ ಆಕಾಂಕ್ಷಿ ಭಾಗ್ಯವತಿ ಜೆಡಿಎಸ್ ನಾಯಕರ ಜೊತೆ ಪ್ರತ್ಯಕ್ಷರಾಗಿದ್ದರು.
ಪಾಲಿಕೆಗೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ. ಮಹೇಶ್ ಜತೆ ಹಿಂಬಾಗಿಲಿನಿಂದ ಬಂದ ಭಾಗ್ಯವತಿ ಜೆಡಿಎಸ್-ಬಿಜೆಪಿ ಬೆಂಬಲಿತವಾಗಿ ಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.
ಹಳಿತಪ್ಪಿದ ಲೆಕ್ಕಾಚಾರ
65 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ 20, ಜೆಡಿಎಸ್ 20, ಬಿಜೆಪಿ 15, ಎಸ್ಡಿಪಿಐ 2, ಪಕ್ಷೇತರ 8 ಸದಸ್ಯರು ಇದ್ದಾರೆ. ಇದರ ಜತೆ ಶಾಸಕರು ಮತ್ತು ಸಂಸದರ ಮತ ಸೇರಿ 74 ಮತಗಳು ಇವೆ.
ಕಳೆದ ನಾಲ್ಕು ವರ್ಷ ಮೈಸೂರಿನಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಆಡಳಿತ ಇತ್ತು. ಆದರೆ ಈ ಬಾರಿ ಮೀಸಲು ಪ್ರಕಾರ ಜೆಡಿಎಸ್ - ಬಿಜೆಪಿಯಲ್ಲಿ ಅರ್ಹ ಸದಸ್ಯರು ಇಲ್ಲದ ಕಾರಣ ಕಾಂಗ್ರೆಸ್ ಗೆ ಮೇಯರ್ ಪಟ್ಟ ಸಿಗುವುದು ಅನಿವಾರ್ಯವಾಗಿತ್ತು.
ಆದರೆ ಮೀಸಲಾತಿಗೆ ಪ್ರತಿ ತಂತ್ರ ಹೂಡಿದ ಜೆಡಿಎಸ್- ಬಿಜೆಪಿ ತಿರುಗೇಟು ನೀಡಿ ಮೈಸೂರು ಮಹಾ ನಗರ ಪಾಲಿಕೆಯ ಕೊನೆ ಅವಧಿಯ ಆಡಳಿತ ಹಿಡಿಯುವ ಸಿದ್ದರಾಮಯ್ಯ ಯೋಜನೆಯನ್ನು ಮಣ್ಣುಪಾಲು ಮಾಡಿವೆ.
ಕೋರಂ ತಂತ್ರ ವಿಫಲ
ಪಾಲಿಕೆ ಚುನಾವಣೆಯಲ್ಲಿ ಭಾಗ್ಯವತಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದರ ನಡುವೆಯೇ ಪ್ರಾದೇಶಿಕ ಆಯುಕ್ತ ಶಿವಯೋಗಿ ಬಿ. ಕಳಸದ್ ಚುನಾವಣಾ ಪ್ರಕ್ರಿಯೆ ಆರಂಭಿಸಿದ್ದರು. ಈ ಸಂದರ್ಭ ಕಾಂಗ್ರೆಸ್ ಚುನಾವಣೆ ಮುಂದೂಡಲು ಕೋರಂ ನೆಪ ಮುಂದಿಟ್ಟಿತು.
ಆದರೆ ಕೋರಂ ಕೊರತೆ ಸಾಬೀತುಗೊಳಿಸಲು ಕಾಂಗ್ರೆಸ್ ವಿಫಲವಾಗಿತ್ತು. ಸಭೆ ನಡೆಸುವಷ್ಟು ಕೋರಂ ಇದೆ ಎಂದು ಚುನಾವಣಾ ಆಯುಕ್ತ ಕಳಸದ್ ಪ್ರಕ್ರಿಯೆ ಮುಂದುವರಿಸಿದರು. ಇದರಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸಿದ್ದಲ್ಲದೆ ಸರ್ವ ತಂತ್ರಗಳೂ ಬುಡಮೇಲಾಗಿ ಮೇಯರ್ ಸ್ಥಾನವನ್ನೂ ಕಳೆದುಕೊಂಡು ತೀವ್ರ ಮುಖಭಂಗ ಅನುಭವಿಸಿತು.