ಮೈತ್ರಿಪಕ್ಷದ ನಾಯಕರಲ್ಲಿ ನಡುಕ, ಬಿಜೆಪಿ ನಾಯಕರಿಗೆ ಪುಳಕ..!
ಮೈಸೂರು, ಸೆಪ್ಟೆಂಬರ್ 12 : ವಿಧಾನಸಭಾ ಚುನಾವಣೆ ನಡೆದು ಯಾವ ಪಕ್ಷಕ್ಕೂ ಮ್ಯಾಜಿಕ್ ಸಂಖ್ಯೆ ಬಾರದ ಕಾರಣ ಸದ್ಯಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸೇರಿ ಸರ್ಕಾರ ರಚಿಸಿದ್ದರೂ ಭದ್ರವಾಗಿ ತಳವೂರಿ ರಾಜ್ಯದಲ್ಲಿ ಆಡಳಿತ ನಡೆಸುತ್ತವೆ ಎಂಬ ಯಾವ ನಂಬಿಕೆಯೂ ಇಲ್ಲಿ ತನಕವೂ ಉಳಿದಿಲ್ಲ.
ಮೇಲಿಂದ ಮೇಲೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳು ಜನತೆಯಲ್ಲಿ ಅಸಹ್ಯ ಹುಟ್ಟಿಸುತ್ತಿದ್ದರೆ, ಆಡಳಿತ ಪಕ್ಷಗಳಲ್ಲಿ ನಡುಕವನ್ನೂ, ವಿರೋಧ ಪಕ್ಷದಲ್ಲಿ ಪುಳಕವನ್ನು ಸೃಷ್ಠಿ ಮಾಡಿದೆ. ನಾಯಕರು ಇದಕ್ಕೆ ತಕ್ಕಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳಿದಂತೆ ಕೇಳುತ್ತೇವೆ: ರಮೇಶ್ ಜಾರಕಿಹೊಳಿ
ಪ್ರತಿ ದಿನವೂ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳು, ಅದಕ್ಕೆ ತಕ್ಕಂತೆ ನಾಯಕರು ನಡೆದುಕೊಳ್ಳುವ ನಡವಳಿಕೆಗಳು ಹಲವು ಸಂಶಯಗಳನ್ನು ಹುಟ್ಟುಹಾಕುತ್ತಿವೆ. ಸದ್ಯ, ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರದ ನೇತೃತ್ವ ವಹಿಸಿದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸುವುದಕ್ಕಿಂತಲೂ ಸರ್ಕಾರವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಕಾಂಗ್ರೆಸ್ ಮುಂದೆ 4 ಬೇಡಿಕೆ ಇಟ್ಟ ಜಾರಕಿಹೊಳಿ ಸಹೋದರರು!
2018ರ ಚುನಾವಣೆಗೆ ಮುನ್ನ ಪ್ರಬಲ ವಿರೋಧಿಗಳಾಗಿದ್ದ ಕಾಂಗ್ರೆಸ್ ನಾಯಕರೇ ಚುನಾವಣೆ ನಂತರ ನಿಮಗೆ ನಾವು ಸಾಥ್ ನೀಡುತ್ತೇವೆ ಎಂದು ಕುಮಾರಸ್ವಾಮಿ ಬಳಿಗೆ ಬಂದಾಗ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ ಅನುಭವ ಕುಮಾರಸ್ವಾಮಿ ಅವರಿಗೆ ಆಗಿತ್ತು. ಆದರೆ, ಈಗ ಏನಾಗುತ್ತಿದೆ? ಎಂಬುದು ರಾಜ್ಯದ ಜನರ ಮುಂದಿದೆ.....
ಚುಟುವಟಿಕೆ ಕೇಂದ್ರ ಬಿಂದುವಾದ ಯಡಿಯೂರಪ್ಪ 'ಧವಳಗಿರಿ' ನಿವಾಸ
ಕುಮಾರಸ್ವಾಮಿ ಕನಸಾಗಿತ್ತು
2018ರ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟ ಪ್ರಮುಖ ನಾಯಕರ ಪೈಕಿ ಕುಮಾರಸ್ವಾಮಿ ಒಬ್ಬರಾಗಿದ್ದರು. ಫಲಿತಾಂಶದ ವೇಳೆ ತಮ್ಮ ಪಕ್ಷ ಕೇವಲ 37 ಸ್ಥಾನಕ್ಕೆ ಜಾರಿದಾಗ ತಮ್ಮ ಕನಸು ನನಸಾಗಲ್ಲ ಎಂಬುದು ಖಾತರಿಯಾಗಿತ್ತು. 104 ಸ್ಥಾನ ಪಡೆದ ಬಿಜೆಪಿ ದೊಡ್ಡ ಸ್ಥಾನವಾಗಿ ಹೊರ ಹೊಮ್ಮಿದರೂ ಖುಷಿಪಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಇನ್ನು ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದರೂ ಕೇವಲ 78 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿತ್ತು.
ಜೆಡಿಎಸ್ಗೆ ಸಿಕ್ಕಿತು ಬೆಂಬಲ
ಚುನಾವಣೆ ಫಲಿತಾಂಶದ ಬಳಿಕ ಮುಂದಿನ ಅವಧಿಗೂ ನಾನೇ ಮುಖ್ಯಮಂತ್ರಿ ಎಂದು ಬೀಗುತ್ತಿದ್ದ ಸಿದ್ದರಾಮಯ್ಯ ಅವರ ಜಂಘಾಬಲವೇ ಹುದುಗಿಹೋಗಿತ್ತು. ತಮ್ಮ ಪಕ್ಷದಲ್ಲೇ ಇದ್ದ ಕೆಲವು ನಾಯಕರಿಗೆ ಈ ಬೆಳವಣಿಗೆಯ ಅಗತ್ಯತೆಯಿತ್ತು.
ಕೆಲವರಿಗೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಬೇಕಿರಲಿಲ್ಲ. ಜತೆಗೆ ಈ ಹಿಂದೆ ಸಿದ್ದರಾಮಯ್ಯ ಅವರೇ ಪಕ್ಷದ ಐಕಾನ್ ಆಗಿದ್ದರು. ಅಂಥ ಸಿದ್ದರಾಮಯ್ಯ ಅವರನ್ನು ತುಳಿದು ಮೂಲೆಗೆ ಸೇರಿಸಲು ರಾಜ್ಯದ ಅತಂತ್ರ ಫಲಿತಾಂಶವೂ ಸಹಾಯಕ್ಕೆ ಬಂದಿತ್ತು. ಆಗಲೇ ಸಿದ್ದರಾಮಯ್ಯನ ವಿರೋಧಿ ಬಣಗಳು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದು ಉರುಳಿಸಲು ತಂತ್ರ ಮಾಡಿದ್ದರು. ಅದುವೇ ಜೆಡಿಎಸ್ಗೆ ಭೇಷರತ್ ಬೆಂಬಲ ನೀಡುವುದು.
ಹೈಕಮಾಂಡ್ ತೀರ್ಮಾನ
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಯಾರನ್ನು ಸಿದ್ದರಾಮಯ್ಯ ವಿರೋಧಿಸಿಕೊಂಡು ಬಂದಿದ್ದರೋ? ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದಿದ್ದರೋ ಅವರಿಗೆ ಸಿಎಂ ಆಗಲು ಆಹ್ವಾನವನ್ನು ಕಾಂಗ್ರೆಸ್ನ ನಾಯಕರು ನೀಡಿ ಬಿಟ್ಟಿದ್ದರು. ಅವತ್ತಿನ ಮಟ್ಟಿಗೆ ಸಿದ್ದರಾಮಯ್ಯ ಮೂಕಪ್ರೇಕ್ಷರಾಗಿದ್ದರು.
ಆದರೆ ಸಿದ್ದರಾಮಯ್ಯ ವಿರೋಧಿಗಳಿಗೆ ಮಾತ್ರ ಅದು ಯುದ್ಧ ಗೆದ್ದಷ್ಟೇ ಸಂಭ್ರಮದ ಕ್ಷಣವಾಗಿತ್ತು. ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್ನಿಂದ ದೂರ ಮಾಡಲು ಇದೊಂದು ನಿರ್ಧಾರವಷ್ಟೆ ಸಾಕಾಗಿತ್ತು.
ಈ ನಡುವೆ ಅತಿ ಹೆಚ್ಚು ಸ್ಥಾನ ಪಡೆದ ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಹಠಕ್ಕೆ ಬಿದ್ದು ಸಿಎಂ ಆಗಿ ಮ್ಯಾಜಿಕ್ ಸಂಖ್ಯೆಯಿಲ್ಲದೆ ಅಧಿವೇಶನದಲ್ಲಿ ಸದ್ದಿಲ್ಲದೆ ಎದ್ದು ಹೋಗಿದ್ದು ಇತಿಹಾಸ. ಆದರೆ ಹೋಗುವ ಮುನ್ನ ಜೆಡಿಎಸ್ನಿಂದಲೇ ಕಾಂಗ್ರೆಸ್ ಪಕ್ಷ ನಾಶವಾಗುತ್ತದೆ ಎಂದು ಭವಿಷ್ಯ ನುಡಿದ್ದರು. ಅದು ಏಕೋ ಈಗ ನಿಜವಾದಂತೆ ಗೋಚರಿಸುತ್ತಿದೆ.
ಕಾಂಗ್ರೆಸ್ನಲ್ಲಿ ಅಸಮಾಧಾನ
ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದು ನಾಲ್ಕು ತಿಂಗಳಾಗುತ್ತಾ ಬಂದಿದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಒದ್ದಾಡುತ್ತಿದ್ದಾರೆ.
ಜತೆಗೆ ಯಾವುದೇ ಯೋಜನೆ ತಂದರೂ ಅದು ಕುಮಾರಸ್ವಾಮಿಯನ್ನು ಬಿಂಬಿಸುತ್ತಿದೆ ಹೊರತು ಬೆಂಬಲ ನೀಡಿದ ಕಾಂಗ್ರೆಸ್ ಗೌಣವಾಗುತ್ತಿದೆ. ಇದು ಕಾಂಗ್ರೆಸ್ನ ಕೆಲವು ಅತೃಪ್ತ ನಾಯಕರ ಇರಿಸು ಮುರಿಸಿಗೆ ಕಾರಣವಾಗಿದೆ. ಜತೆಗೆ ಸಚಿವ ಸ್ಥಾನದ ಆಕಾಂಕ್ಷಿಗಳು ಕೂಡ ಒಳಗಿನಿಂದಲೇ ಕತ್ತಿ ಮಸೆಯುತ್ತಿದ್ದಾರೆ.
ಇದೆಲ್ಲದರ ನಡುವೆ ಎಚ್.ಡಿ.ಕುಮಾರಸ್ವಾಮಿ ಅವರ ಮಾತಿಗೆ ಕಾಂಗ್ರೆಸ್ನ ಹೈಕಮಾಂಡ್ ಮಣೆಹಾಕುತ್ತಿದ್ದು, ಸ್ವತಃ ಕೈ ಮುಖಂಡರನ್ನೇ ಹೈಕಮಾಂಡ್ ದೂರ ಇಡುತ್ತಿದೆ. ಇದು ಹೀಗೆ ಮುಂದುವರೆದರೆ ಭವಿಷ್ಯದಲ್ಲಿ ಕಾಂಗ್ರೆಸ್ಗೆ ಉಳಿಗಾಲವಿಲ್ಲ ಎಂಬ ಸತ್ಯವೂ ನಿಷ್ಠಾವಂತ ಕಾಂಗ್ರೆಸ್ ಮುಖಂಡರನ್ನು ಕಾಡುತ್ತಿದೆ.
ಕಾಲವೇ ಉತ್ತರ ಹೇಳಬೇಕು
ಇಷ್ಟಕ್ಕೂ ಜೆಡಿಎಸ್ಗೆ ಮಣೆ ಹಾಕಿರುವುದು ಸಿದ್ದರಾಮಯ್ಯ ಬಣದ ಶಾಸಕರಿಗೆ ಸುತರಾಂ ಇಷ್ಟವಿಲ್ಲ. ಆದರೆ ಅನಿವಾರ್ಯತೆ ಅವರನ್ನು ತೆಪ್ಪಗಿರುವಂತೆ ಮಾಡಿದೆ. ಈಗ ಸಿದ್ದರಾಮಯ್ಯ ಅವರು ಯುರೋಪ್ಗೆ ಪ್ರವಾಸ ತೆರಳಿದ್ದಾರೆ.
ಅವರಿಲ್ಲದ ಈ ಸಮಯದಲ್ಲಿ ಜಾರಕಿಹೊಳಿ ಸಹೋದರರು ದಾಳಗಳನ್ನು ಉರುಳಿಸಿ ಬಿಡುತ್ತಿದ್ದಾರೆ. ಅದರ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಮುಂದೇನಾಗುತ್ತೆ ಎಂಬುದನ್ನು ಕಾಲವೇ ಹೇಳಬೇಕಾಗಿದೆ.