ಕೈ ಐಕಾನ್ ಸಿದ್ದರಾಮಯ್ಯರನ್ನು ಆತಂಕಕ್ಕೆ ದೂಡಿದೆ ಪರಮೇಶ್ವರ್ ಸೋಲು!
ಮೈಸೂರು, ಏಪ್ರಿಲ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಎಲ್ಲ ಹನ್ನೊಂದು ವಿಧಾನಸಭಾ ಕ್ಷೇತ್ರಗಳು ಈ ಬಾರಿ ಮುಖ್ಯ ಪಾತ್ರವನ್ನು ವಹಿಸುತ್ತಿದ್ದು, ಇಲ್ಲಿನ ಒಂದೊಂದು ಕ್ಷೇತ್ರ ಒಂದೊಂದು ರೀತಿಯಲ್ಲಿ ರಾಜ್ಯದ ಗಮನ ಸೆಳೆಯುವುದರೊಂದಿಗೆ ಭಾರೀ ಕುತೂಹಲವನ್ನು ಕೆರಳಿಸಿರುವುದಂತೂ ಸತ್ಯ.
ಇಲ್ಲಿ ಈ ಬಾರಿ ಜೆಡಿಎಸ್ ಮತ್ತು ಬಿಜೆಪಿಯು ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿರುವುದರಿಂದಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಅಷ್ಟೇ ಅಲ್ಲ, ನಾನು ಪ್ರಚಾರಕ್ಕೆ ಹೋಗದಿದ್ದರೂ ಮತದಾರರು ಮತ ಹಾಕುತ್ತಾರೆ ಎಂಬ ಸಂಪೂರ್ಣ ವಿಶ್ವಾಸವೂ ಇಲ್ಲದಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಇದರಿಂದಾಗಿಯೇ ಸಿದ್ದರಾಮಯ್ಯ ತವರು ಜಿಲ್ಲೆಗೆ ಅದರಲ್ಲೂ ತಮ್ಮ ಪುತ್ರ ಸ್ಪರ್ಧಿಸಲಿರುವ ವರುಣಾ ವಿಧಾಸಭಾ ಕ್ಷೇತ್ರ ಮತ್ತು ತಾವೇ ಸ್ಪರ್ಧಿಸಲಿರುವ ಚಾಮುಂಡೇಶ್ವರಿ ಕ್ಷೇತ್ರದತ್ತ ಹೆಚ್ಚಿನ ನಿಗಾ ವಹಿಸುತ್ತಿದ್ದು, ಈಗಾಗಲೇ ವಾರಗಟ್ಟಲೆ ಪ್ರಚಾರ ನಡೆಸಿದ್ದಾರೆ.
ಇಷ್ಟಕ್ಕೂ ಸಿದ್ದರಾಮಯ್ಯ ಚುನಾವಣೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಈ ಸಲದ ಗೆಲುವು, ಸೋಲು ಎಲ್ಲವೂ ಅವರ ತಲೆಗೆ ಬೀಳುವುದಂತೂ ಸತ್ಯ. ಇದುವರೆಗೆ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಚುನಾವಣೆಗೆ ಹೋದರೂ ಸಾಮೂಹಿಕ ನಾಯಕತ್ವ ಎಂಬ ಮಂತ್ರವನ್ನು ಜಪಿಸುತ್ತಿದ್ದರು. ಆದರೆ ಈ ಬಾರಿಯ ಪರಿಸ್ಥಿತಿ ಹಾಗಿಲ್ಲ.
ಕರ್ನಾಟಕ ಕಾಂಗ್ರೆಸ್ ಗೆ ಸಿದ್ದರಾಮಯ್ಯ ಐಕಾನ್
ಸಿದ್ದರಾಮಯ್ಯ ಅವರು ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಘೋಷಣೆ ಮಾಡುವ ಮೂಲಕ ಸಾರಥ್ಯವನ್ನು ತಾವೇ ವಹಿಸಿಕೊಂಡಿದ್ದು, ಇತರೆ ನಾಯಕರು ಅವರಿಗೆ ಸಾಥ್ ನೀಡುವುದು ಅನಿವಾರ್ಯವಾಗಿದೆ. ಹಾಗೆ ನೋಡಿದರೆ ಕರ್ನಾಟಕ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐಕಾನ್. ಬಹುಶಃ ಅವರಿಲ್ಲದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಅಪೂರ್ಣವೇ. ಹೀಗಾಗಿ ಅವರು ಕೇವಲ ತವರು ಕ್ಷೇತ್ರದಲ್ಲಷ್ಟೇ ಪ್ರಚಾರ ಮಾಡಿಕೊಂಡು ಕುಳಿತುಕೊಳ್ಳುವ ಹಾಗಿಲ್ಲ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದಾದ್ಯಂತ ಓಡಾಡಲೇ ಬೇಕಾಗಿದೆ. ಈಗಾಗಲೇ ಕಾಂಗ್ರೆಸ್ ನ ಸಾರಥಿ ಎಂಬಂತೆ ಬಿಂಬಿತ ಆಗಿರುವುದರಿಂದ ಕೈ ಕಾರ್ಯಕರ್ತರು ತಮ್ಮ ಊರಿನ ಸಮಾವೇಶಕ್ಕೆ ಮುಖ್ಯಮಂತ್ರಿ ಬರಲೇ ಬೇಕು ಎಂದು ಬಯಸುತ್ತಿದ್ದಾರೆ.
ಚುನಾವಣೆ ಹತ್ತಿರ ಇರುವಾಗ ಮಾಡುವ ತಂತ್ರಗಳೇ ಬೇರೆ
ಮಂದಿನ ಒಂದೊಂದು ದಿನವೂ ರಾಜಕೀಯ ಪಕ್ಷಗಳಿಗೆ, ನಾಯಕರಿಗೆ ಬಹು ನಿರ್ಣಾಯಕವಾಗಿದ್ದು, ಮತದಾರರನ್ನು ಮೇಲಿಂದ ಮೇಲೆ ಎಚ್ಚರಿಸುತ್ತಲೇ ಇರಬೇಕಾದ ಅನಿವಾರ್ಯ ಇದ್ದೇ ಇದೆ. ಏಕೆಂದರೆ, ಎಲ್ಲ ಪಕ್ಷದ ನಾಯಕರು ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳಲು ಒಂದಲ್ಲ ಒಂದು ತಂತ್ರವನ್ನು ಅನುಸರಿಸುತ್ತಿದ್ದು, ಅದಕ್ಕೆ ಮರುಳಾಗಿ ಮತದಾರ ಮತದಾನದ ವೇಳೆಗೆ ಕನಿಕರ ತೋರಿ ಬಿಟ್ಟರೆ ಅದರ ಪರಿಣಾಮ ಬೇರೆಯದ್ದೇ ಆಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈಗ ರಾಜಕೀಯ ನಾಯಕರು ಎಷ್ಟೇ ಪ್ರಚಾರ ನಡೆಸಿದರೂ ಚುನಾವಣೆ ಹತ್ತಿರ ಬರುವಾಗ ಮಾಡುವ ತಂತ್ರಗಳೇ ಹೆಚ್ಚಿನ ಫಲ ನೀಡುವುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಆ ನಿಟ್ಟಿನಲ್ಲೇ ಸಿದ್ದರಾಮಯ್ಯ ಅವರು ಕೂಡ ಕಾರ್ಯೋನ್ಮುಖರಾಗಿದ್ದಾರೆ.
ಪರಮೇಶ್ವರ್ ಸೋಲಿನ ಪಾಠ ಕಣ್ಣೆದುರು ಇದೆ
2013ರ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಕೊರಟಗೆರೆಯಲ್ಲಿ ಅನುಭವಿಸಿದ ಸೋಲು ಎಲ್ಲರ ಜ್ಞಾಪಕದಲ್ಲಿರಬಹುದು. ಅವರು ರಾಜ್ಯದಾದ್ಯಂತ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸುವುದರಲ್ಲೇ ಮಗ್ನರಾಗಿ, ತಾವು ಸ್ಪರ್ಧಿಸುವ ಕ್ಷೇತ್ರದತ್ತ ಉದಾಸೀನ ತೋರಿದ್ದರು. ಅದರ ಪರಿಣಾಮ ಸೋಲು ಕಾಣಬೇಕಾಯಿತು. ಈ ಪಾಠ ಸಿದ್ದರಾಮಯ್ಯ ಅವರನ್ನು ಎಚ್ಚರಿಸುತ್ತಲೇ ಇದೆ.
ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಿರುವ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಲೇ ಬೇಕಾದ ಅನಿವಾರ್ಯ ಎದುರಾಗಿದ್ದು, ಈ ವೇಳೆ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಲು ಸಮಯದ ಅಭಾವ ಆದರೂ ಅಚ್ಚರಿ ಪಡಬೇಕಾಗಿಲ್ಲ. ಇವೆಲ್ಲವನ್ನು ಸೂಕ್ಷ್ಮವಾಗಿ ಅರಿತಿರುವ ಅವರು ಈಗಾಗಲೇ ಒಂದು ಮಟ್ಟಿಗಿನ ಪ್ರಚಾರವನ್ನು ಕ್ಷೇತ್ರದಲ್ಲಿ ಮುಗಿಸಿ ಬಂದಿದ್ದಾರೆ.
ರಾಜ್ಯದಾದ್ಯಂತ ಪ್ರಚಾರಕ್ಕೆ ತೆರಳಲೇಬೇಕು
ಇನ್ನು ರಾಜ್ಯದಾದ್ಯಂತ ಪ್ರಮುಖ ಕ್ಷೇತ್ರಗಳಿಗೆ ಕಾಂಗ್ರೆಸ್ ನ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಬೇಕಾಗಿದೆ. ಅವರ ವರ್ಚಸ್ಸು ಮತದಾರರನ್ನು ಸೆಳೆಯಲಿರುವುದರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮತವನ್ನು ಕೇಳಲೇಬೇಕಾಗಿದೆ. ಆ ಒತ್ತಡದಲ್ಲಿ ತಮ್ಮ ಕ್ಷೇತ್ರವನ್ನು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಒಟ್ಟಾರೆ ಈ ಬಾರಿ ಚುನಾವಣೆ ಅವರಿಗೊಂದು ಅಗ್ನಿಪರೀಕ್ಷೆ ಎನ್ನುವುದಂತೂ ಸತ್ಯ.