ಐಯ್ಯರ್ ಅಮಾನತು: ಕಾಂಗ್ರೆಸ್ ಗುಣ ಬಿಜೆಪಿಗಿಲ್ಲ ಎಂದ ಸಿದ್ದರಾಮಯ್ಯ
ಮೈಸೂರು, ಡಿಸೆಂಬರ್ 08 : ಪ್ರಧಾನಿಯವರನ್ನು ನೀಚ ಎಂದು ಟೀಕಿಸಿದ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಅದು ಕಾಂಗ್ರೆಸ್ ಸಂಸ್ಕೃತಿ. ಇಂತಹ ಕ್ರಮವನ್ನು ಬಿಜೆಪಿಯಿಂದ ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಮೈಸೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಭಾಷೆ ಗಮನಿಸಿದ್ದೇನೆ. ನಾಲಿಗೆ ಸಂಸ್ಕೃತಿ ಹೇಳುತ್ತದೆ. ಆಚಾರವಿಲ್ಲದ ನಾಲಿಗೆ ಎಂದು ದಾಸರೇ ಹೇಳಿದ್ದಾರೆ. ನಮಗೆ ನಮ್ಮದೇ ಆದ ಸಂಸ್ಕೃತಿ, ಸಂಸ್ಕಾರ ಇದೆ ಎಂದು ಬಿಜೆಪಿಯವರು ಹೇಳುತ್ತಾರೆ. ಇದುವೇ ಏನು ಅವರ ಸಂಸ್ಕೃತಿ. ಕೋಮುವಾದಿ ಪಕ್ಷದಿಂದ ಏನೂ ನಿರೀಕ್ಷೆ ಮಾಡಬಾರದು. ಎಂದರು.
ಪ್ರಧಾನಿ ವಿರುದ್ಧ 'ನೀಚ' ಪದಬಳಕೆ, ಕ್ಷಮೆ ಕೋರಿದ ಮಣಿಶಂಕರ್ ಅಯ್ಯರ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿಯೇ ಬರುವುದಿಲ್ಲ. ನಾನು ಸಹ ಸಮೀಕ್ಷೆ ಮಾಡಿಸುತ್ತಿದ್ದೇನೆ. ಈಗಾಗಲೇ ಮಾಡಿಸಿರುವ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಎರಡನೇ ಹಂತದ ಸಮೀಕ್ಷಾ ವರದಿ ಜನವರಿಯಲ್ಲಿ ಕೈ ಸೇರಲಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬುದು ಯಡಿಯೂರಪ್ಪ ಅವರ ಭ್ರಮೆ.
ನಮ್ಮದು ಪಿಕ್ ಪಾಕೆಟ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ ಮಾಡುತ್ತಾರೆ. ನಾವು ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ ಸೇರಿದಂತೆ ಎಲ್ಲ ಭಾಗ್ಯ ಯೋಜನೆಗಳನ್ನು ನಿಲ್ಲಿಸುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳುತ್ತಾರೆ. ಹಾಗಾದರೆ ಇವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಸಿನಿಂದ ಮಣಿಶಂಕರ್ ಅಯ್ಯರ್ ಅಮಾನತು
ಕುಮಾರಸ್ವಾಮಿ, ದೇವೇಗೌಡರು ನನ್ನ ಬಗ್ಗೆ ಮೃದು ಧೋರಣೆ ತೋರಿಸುವುದೇನೂ ಬೇಡ. ರಾಜ್ಯದ ಜನತೆಗೆ ನಾವು ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಸತ್ಯ ಹೇಳಿದರೆ ಸಾಕು.ಹುಣಸೂರಿನಲ್ಲಿ ಹನುಮ ಜಯಂತಿ ಮಾಡಬಾರದು ಎಂದು ಮೈಸೂರು ಜಿಲ್ಲಾಡಳಿತ ಹೇಳಿರಲಿಲ್ಲ. ನಿಗಧಿ ಮಾಡಿದ ಮಾರ್ಗದಲ್ಲಿ ಮೆರವಣಿಗೆ ಹೋಗಬೇಕಿತ್ತು. ಜನಪ್ರತಿನಿಧಿಗಳೇ ಕಾನೂನು ಉಲ್ಲಂಘಿಸಿದರೆ ಹೇಗೆ ಎಂದರು.
ಹಳ್ಳಿ ಹಳ್ಳಿಗಳಲ್ಲಿ ಹನುಮದೇವರ ದೇಗುಲಗಳಿವೆ. ಎಲ್ಲರೂ ಹೋಗಿ ಪೂಜೆ ಮಾಡುತ್ತಾರೆ. ಹಬ್ಬ ಹರಿದಿನಗಳನ್ನು ಬಿಜೆಪಿಯವರು ಮಾತ್ರ ಆಚರಿಸುವರೇ? ಎಲ್ಲರೂ ಆಚರಿಸುತ್ತಾರೆ. ಹುಣಸೂರಿನಲ್ಲಿ ಮೆರವಣಿಗೆ ಮಾಡಬೇಡಿ ಎಂದು ಜಿಲ್ಲಾಡಳಿತ ಹೇಳಿರಲಿಲ್ಲ. ಆದರೂ ಬಿಜೆಪಿಯವರು ಅಲ್ಲಿ ಉದ್ದೇಶಪೂರ್ವಕವಾಗಿ ಗಲಾಟೆ ಮಾಡಿಸಿದ್ದಾರೆ. ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.