ಮೈಸೂರು ದಸರಾ : ನಂದಿಧ್ವಜ ಪೂಜೆಯಲ್ಲಿ ಮತ್ತೆ ಗೊಂದಲ
ಮೈಸೂರು, ಅ 23: ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿ ಮೆರವಣೆಗೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ಕಳೆದ ವರ್ಷದ ದಸರಾ ಆಚರಣೆಯಲ್ಲೂ ಉಂಟಾಗಿದ್ದ ನಂದಿಧ್ವಜ ಪೂಜೆಯಲ್ಲಿನ ಗೊಂದಲ ಈ ವರ್ಷವೂ ಮುಂದುವರಿದಿದೆ.
ಬಲರಾಮ ದ್ವಾರದಲ್ಲಿರುವ ಕೋಟೆ ಆಂಜನೇಯ ದೇವಾಲಯಕ್ಕೆ ಎರಡು ನಂದಿಧ್ವಜ ಆಗಮಿಸಿದೆ. ಒಂದು ಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿಗೆ ಚಾಲನೆ ನೀಡುವುದು ಇಲ್ಲಿಯವರೆಗೆ ನಡೆದುಕೊಂಡು ಬಂದಿರುವ ಪದ್ದತಿ.
ಗೌರಿಶಂಕರ ಮತ್ತು ಗುರು ಮಲ್ಲೇಶ್ವರ ಮಠದಿಂದ ಎರಡು ನಂದಿಧ್ವಜ ಆಗಮಿಸಿದ್ದು, ಕಳೆದ ವರ್ಷದಂತೆ ಈ ವರ್ಷವೂ ನಂದಿಧ್ವಜ ಪೂಜೆಯಲ್ಲಿ ಗೊಂದಲ ಉಂಟಾಗಿದೆ. (ಮೈಸೂರು ಅರಮನೆ ಇತಿಹಾಸ)
ಕ್ರಿ.ಶ. 1640ರಲ್ಲಿ ಶ್ರೀರಂಗಪಟ್ಟಣದಲ್ಲಿ ಆರಂಭವಾದ ಜಂಬೂಸವಾರಿ ಸಾಂಪ್ರದಾಯಿಕ ಮೆರವಣಿಗೆಗೆ, ನಾಡಿನ ಮುಖ್ಯಮಂತ್ರಿಗಳು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಚಾಲನೆ ನೀಡುವುದು ಪದ್ದತಿ.
ಸುತ್ತೂರು ಮಠದಲ್ಲಿ ಶ್ರೀಗಳ ಆಶೀರ್ವಾದ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 12.07 ಗಂಟೆಯಿಂದ 12.21ರ ಮಹೂರ್ತದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಈ ಬಾರಿಯೂ ಅರ್ಜುನ ನಾಲ್ಕನೇ ಬಾರಿಗೆ 750 ಕೆಜಿ ತೂಕದ ಅಂಬಾರಿ ಹೊರಲಿದ್ದಾನೆ. ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅರಣ್ಯ ಇಲಾಖೆಯ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ.