ತುಂಬಿದ ಕಬಿನಿಗೆ ಸೆ.21ರಂದು ಸಿದ್ದರಾಮಯ್ಯ ಬಾಗಿನ
ಎಚ್.ಡಿ.ಕೋಟೆ, ಸೆಪ್ಟೆಂಬರ್ 19: ರಾಜ್ಯದ ಪ್ರಮುಖ ಜಲಾಶಯಗಳಲ್ಲೊಂದಾದ ತಾಲೂಕಿನ ಕಬಿನಿ ಜಲಾಶಯ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ 15,000 ಕ್ಯೂಸೆಕ್ ನೀರನ್ನು ನದಿಗೆ ಹೊರಬಿಡಲಾಗುತ್ತಿದೆ.
ಕೊಡಗಿನಲ್ಲಿ ಭಾರೀ ಮಳೆ, ಕಬಿನಿ ಜಲಾಶಯ ಬಹುತೇಕ ಭರ್ತಿ
ಕಬಿನಿ ಜಲಾಶಯವು ಭರ್ತಿಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆಪ್ಟೆಂಬರ್ 21 (ಗುರುವಾರ) ಜಲಾಶಯಕ್ಕೆ ಬಾಗಿನ ಅರ್ಪಿಸುವರು ಎಂದು ಸಂಸದ ಧ್ರವನಾರಾಯಣ್ ತಿಳಿಸಿದ್ದಾರೆ.
ಜಲಾಶಯದ ನೀರಿನ ಸ್ಥಿತಿಗತಿಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದ ಸಂದರ್ಭ ಮಾತನಾಡಿದ ಅವರು, ಕಳೆದ 3 ವರ್ಷಗಳಿಂದ ಜಲಾಶಯ ಭರ್ತಿಯಾಗದೆ ಎಲ್ಲರಲ್ಲೂ ಆತಂಕ ಉಂಟಾಗಿತ್ತು.
ಆದರೆ, ಈ ಸಾಲಿನಲ್ಲಿ ತಡವಾದರೂ ಜಲಾಶಯ ಭರ್ತಿಯಾಗುವ ಮೂಲಕ ಈ ಜಲಾನಯನ ಪ್ರದೇಶದ ರೈತರಲ್ಲಿ ಮತ್ತು ಜನ ಜಾನುವಾರುಗಳು, ಕೆರೆ ಕಟ್ಟೆಗಳಿಗೆ ನೀರಿನ ಸಮಸ್ಯೆ ಉದ್ಭವವಾಗುವುದಿಲ್ಲ ಎಂದು ಹೇಳಿದರು.
ಕಳೆದ 1 ವಾರದಿಂದ ಹಿಂಗಾರು ಮಳೆ ತಾಲೂಕು ಮತ್ತು ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮವಾಗಿ ಸುರಿಯುತ್ತಿರುವುದರಿಂದ ಜಲಾಶಯದ ಒಳಹರಿವಿನಲ್ಲಿ ಏರಿಕೆ ಕಂಡು ಬಂದಿದ್ದು, ಗರಿಷ್ಟ ಮಟ್ಟ 84 ಅಡಿಗಳಿಗೆ ನೀರು ಶೇಖರಣೆಯಾಗುತ್ತಿದ್ದಂತೆ ಜಲಾಶಯದ ಹಿತದೃಷ್ಠಿಯಿಂದ 83 ಅಡಿಗಳಿಗೆ ನೀರಿನ ಮಟ್ಟವನ್ನು ಸೀಮಿತಗೊಳಿಸಿ ಕಳೆದ ರಾತ್ರಿಯಿಂದ 10 ಸಾವಿರ ಕ್ಯೂಸೆಕ್ ನೀರನ್ನು 4 ಕ್ರಸ್ಟ್ ಗೇಟ್ ಮೂಲಕ ಹರಿಸಲಾಯಿತು.
ಆದರೆ, ಮಂಗಳವಾರ ಮಧ್ಯಾಹ್ನದಿಂದ 15,000 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು ಜಲಾಶಯದ ಮುಂಭಾಗದ ಬೀಚನಹಳ್ಳಿ ಮತ್ತು ಎನ್.ಬೇಗೂರು ಮುಖ್ಯ ರಸ್ತೆ ಸೇತುವೆ ಮುಳುಗಡೆಯಾಗುವ ಸಂಭವ ಹೆಚ್ಚಾಗಿರುವುದರಿಂದ ಯಾವುದೇ ವಾಹನಗಳು ಮತ್ತು ಸಾರ್ವಜನಿಕರನ್ನು ಸೇತುವೆಯ ಮೇಲೆ ಸಂಚರಿಸದಂತೆ ನಿಷೇಧ ಹೇರಲಾಗಿದೆ.
ವೈನಾಡು ಪ್ರದೇಶದಲ್ಲಿ ಮತ್ತಷ್ಟು ಮಳೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜಲಾಶಯಕ್ಕೆ ಒಳಹರಿವಿನಲ್ಲಿ 20 ಸಾವಿರ ಕ್ಯೂಸೆಕ್ ಅಧಿಕ ನೀರು ಹರಿದುಬರುತ್ತಿರುವುದರಿಂದ ನದಿಗೆ ಮತ್ತಷ್ಟು ನೀರು ಬಿಡುವ ಸಂಭವವಿದೆ.
ನದಿಯ ಸಮೀಪದಲ್ಲಿರುವ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಇಇ ಜಗದೇಶ್ ಸೂಚಿಸಿದರು.
ಜಲಾಶಯ ಭರ್ತಿಯಾಗಿ ಒಳಹರಿವಿನಲ್ಲಿ ಸತತ ಏರಿಕೆಯಾಗುತ್ತಿರುವುದರಿಂದ ಅಧಿಕಾರಿಗಳಾದ eಗದೀಶ್, ಕೃಷ್ಣಯ್ಯ,ರಮೇಶಬಾಬು , ನಾಗರಾಜು ಜಲಾಶದಲ್ಲಿ ಮೊಕ್ಕಾಂ ಹೂಡಿದ್ದಾರೆ.