'ಯಡಿಯೂರಪ್ಪ ಪಾಪದ ಕೆಲಸ ಇನ್ನೊಂದು ಜನ್ಮ ತಾಳಿದರೂ ಕಳೆಯಲ್ಲ'
ಮೈಸೂರು, ಮಾರ್ಚ್. 12 : ಧರ್ಮದ ಕುರಿತು ಮಾತನಾಡಲು ಯಡಿಯೂರಪ್ಪ ಧರ್ಮಾಧಿಕಾರಿಯೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಎಸ್ ವೈ ವಿರುದ್ಧ ಕಿಡಿಕಾರಿದರು.
ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಬಳಿಕ, ಬಿಎಸ್ ಯಡಿಯೂರಪ್ಪನವರು ಅಧರ್ಮದ ಕುರಿತು ನೀಡಿದ ಹೇಳಿಕೆ ಕುರಿತಂತೆ ಮಾಧ್ಯಮಗಳೊಂದಿಗೆ ಖಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಡಿಯೂರಪ್ಪ ಮಾಡಿದ ಪಾಪದ ಕೆಲಸ ಇನ್ನೊಂದು ಜನ್ಮ ತಾಳಿದರೂ ಕಳೆಯಲ್ಲ. ಅವರೇನು ಧರ್ಮಾಧಿಕಾರಿಯೇ ಎಂದು ಪ್ರಶ್ನಿಸಿದರು.
ಚುನಾವಣೆ ಸಂದರ್ಭ ಬಜೆಟ್ ಮಂಡಿಸುತ್ತಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಜೆಟ್ ವಿಷಯವಾಗಿ ಬಿಜೆಪಿ ತಕರಾರು ತೆಗೆಯುತ್ತಿದೆ.
ಅದಕ್ಕೇನಾದರೂ ಕಾಮನ್ ಸೆನ್ಸ್ ಇದೆಯಾ. 5 ರಾಜ್ಯಗಳ ಚುನಾವಣೆ ಇದ್ದಾಗ ಕೇಂದ್ರ ಸರ್ಕಾರ ಬಜೆಟ್ ಮಂಡಿಸಬಹುದು. ಆದರೆ, ಉಪಚುನಾವಣೆ ಇದ್ದಾಗ ನಾವು ಬಜೆಟ್ ಮಂಡಿಸಬಾರದ ಎಂದು ತಿರುಗೇಟು ನೀಡಿದರು.
ಈ ಸಂದರ್ಭ ನಂಜನಗೂಡು ಕಾಂಗ್ರೆಸ್ಅಭ್ಯರ್ಥಿ ಕಳಲೆ ಕೇಶವಮೂರ್ತಿ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಮುಖ್ಯಮಂತ್ರಿಗಳ ಜೊತೆಗಿದ್ದರು.