KSOU ವಿವಾದ ಪರಿಹಾರಕ್ಕೆ ಸಿದ್ದರಾಮಯ್ಯ ಮುಂದಾಗಲಿ : ಪ್ರತಾಪ್ ಸಿಂಹ
ಮೈಸೂರು, ಸೆಪ್ಟೆಂಬರ್ 12: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ನವೀಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಳ್ಳಬೇಕಾಗಿದೆ. ಏಕೆಂದರೆ ಈ ವಿವಿಗೆ ಸಂಬಂಧಿಸಿದಂತೆ ಕಾಯ್ದೆ ರೂಪಿತವಾಗಿರುವುದು ರಾಜ್ಯ ವಿಧಾನಸಭೆಯಿಂದಲೇ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಕೆಎಸ್ ಓಯು ನಕಲಿ ಅಂಕಪಟ್ಟಿ ಹಗರಣ : 850 ವಿದ್ಯಾರ್ಥಿ ಸ್ಥಿತಿ ಅಧೋಗತಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಕ್ತ ವಿವಿಯಿಂದ ನಿಯಮಾವಳಿಯನ್ನು ಉಲ್ಲಂಘಿಸಿ ದುಬೈ, ಸಿಂಗಾಪುರ್ ದೇಶಗಳೊಂದಿಗೆ ವಿವಿಧ ಕೋರ್ಸ್ ಗಳಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅದನ್ನು ರದ್ದುಪಡಿಸಿ ಪ್ರಮಾಣ ಪತ್ರ ಸಲ್ಲಿಸುವಂತೆ ಯುಜಿಸಿ ಸೂಚನೆ ನೀಡಿದರೆ, ಅದರ ವಿರುದ್ಧವೇ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕಿಡಿಕಾರಿದರು.
ನಾನು, ಹಿಂದೆ ಇದ್ದ ಮುಕ್ತವಿವಿ ಉಪಕುಲಪತಿ ಪೊ.ಎಂ.ಜಿ.ಕೃಷ್ಣನ್ ಅವರೊಡನೆ ಯುಜಿಸಿಗೆ ತೆರಳಿ ವಾಸ್ತವ ಸಂಗತಿ ತಿಳಿಸಿದ್ದೆ. ಈಗಿನ ಕುಲಪತಿ ಡಾ.ಡಿ.ಶಿವಲಿಂಗಯ್ಯ ಅವರೊಡನೆ ಕೂಡ ಹೊಸದಿಲ್ಲಿಗೆ ಹೋಗಿದ್ದೆ. ಈಗ ರಾಜ್ಯ ಸರ್ಕಾರ ಈ ಬಗ್ಗೆ ಗಂಭೀರ ಗಮನ ಹರಿಸಬೇಕು. ಕೇಂದ್ರ ಸರ್ಕಾರದ ಸಚಿವರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು. ಆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಅತಂತ್ರ ಸ್ಥಿತಿಯನ್ನು ಕೊನೆಗಾಣಿಸಬೇಕು. ಇಲ್ಲಿ ಪಕ್ಷಗಳ ಚೌಕಟ್ಟು ಮೀರಿ ಎಲ್ಲರೂ ಶ್ರಮಿಸಬೇಕು ಎಂದು ಆಗ್ರಹಿಸಿದರು.
'ಪಂಡಿತ್ ದೀನ್ ದಯಾಳ್ ಜನ್ಮ ಶತಾಬ್ಧಿ ಹಿನ್ನೆಲೆಯಲ್ಲಿ ಪಧಾನಿ ಮೋದಿ ಅವರ ಭಾಷಣ ವೀಕ್ಷಣೆ ಕಡ್ಡಾಯವನ್ನು ಹಿಂದುತ್ವ ಹೇರುವಿಕೆಯ ಹುನ್ನಾರ ಎಂದಿರುವ ಮುಖ್ಯ ಮಂತ್ರಿಗಳಿಗೆ ಹಿಂದುತ್ವ ಪರಿಕಲ್ಪನೆಯ ಅರಿವಿಲ್ಲ. ದೀನ್ ದಯಾಳ್ ಅವರು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಇದು ದೇವನೊಬ್ಬ ನಾಮ ಹಲವು ಎಂಬ ತತ್ವವಾಗಿದೆ. ಅಂದರೆ ಹಿಂದುತ್ವದಲ್ಲಿ ಆಸ್ತಿಕ, ನಾಸ್ತಿಕ ಎಲ್ಲರೂ ಇದ್ದಾರೆ ಎಂಬುದನ್ನು ಅವರು ಅರಿಯಬೇಕಿದೆ' ಎಂದರು.