ನಂಜನಗೂಡು: ಕೆರೆ ತುಂಬಿಸುವ ಯೋಜನೆಗೆ ಸಿಎಂ ಶಿಲಾನ್ಯಾಸ
ಮೈಸೂರು, ಡಿಸೆಂಬರ್.19 : ಜಿಲ್ಲೆಯ ನಂಜನಗೂಡು ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಹುರ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಶಿಲಾನ್ಯಾಸ ನೆರವೇರಿಸಿದರು.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಬಂದು ಮೂರೂವರೆ ವರ್ಷ ಆಯಿತು. ಆದರೆ, ನಮ್ಮ ಪ್ರತಿನಿಧಿಗಳು ಯಾರೂ ಈ ನನ್ನ ಗಮನಕ್ಕೆ ತಂದಿರಲಿಲ್ಲ. ಈ ಮೊದಲೇ ನನ್ನ ಗಮನಕ್ಕೆ ತಂದಿದ್ದರೆ ಈಗಾಗಲೇ ಈ ಕಾಮಗಾರಿ ಮುಗಿಸಿ ಕೆರೆಗಳಿಗೆ ನೀರು ಕೊಡುತ್ತಿದ್ದೆವು ಎಂದರು.
ಚಾಮರಾಜ ನಗರ ಮತ್ತು ಮೈಸೂರು ಜಿಲ್ಲೆಯ 100 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಬರಗಾಲ ಎದುರಿಸಲು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನಗೆ ಉದ್ಯೋಗ ಸಿಗುವಂತಾಗಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಬರ ಕುರಿತಂತೆ ಕೆಲಸ ಸಮರ್ಪಕವಾಗಿ ನಡೆಯುತ್ತಿದೆಯೇ ಎಂದು ಪರಿಶೀಲಿಸಲು ಸಚಿವ ಸಂಪುಟದ 4 ಉಪ ಸಮಿತಿಗಳನ್ನು ರಚಿಸಿದ್ದೇನೆ.
ಈ ಸಮಿತಿಗಳು ಪ್ರತಿ ಜಿಲ್ಲೆಗೂ ಭೇಟಿ ನೀಡಬೇಕು ಎಂದು ಸೂಚನೆಯನ್ನೂ ನೀಡಿದ್ದೇನೆ. ಸಚಿವರ ತಂಡಗಳು ಈಗಾಗಲೇ ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದೆ ಎಂದು ಹೇಳಿದರು.
ಭೀಕರ ಬರಗಾಲದಿಂದ ಈ ವರ್ಷ 25 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ನಿಯಮಗಳ ಪ್ರಕಾರ 4702 ಕೋಟಿ ರೂ. ಪರಿಹಾರ ಕೇಳಬಹುದು.
ಪ್ರವಾಹದಿಂದ 386 ಕೋಟಿ ರೂ.ನಷ್ಟು ನಷ್ಟವಾಗಿದೆ. ಕೇಂದ್ರಕ್ಕೆ ಈ ಪರಿಹಾರದ ಮೊತ್ತ ಕೇಳಿದ್ದೇವೆ. ಇದಲ್ಲದೆ, ರಾಜ್ಯ ಸರ್ಕಾರದಿಂದಲೂ ಬರ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಮಹದೇವಪ್ರಸಾದ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನ್, ಹಾಗೂ ಸ್ಥಳಿಯ ಶಾಸಕರು,ಸಂಸದರು ಉಪಸ್ಥಿತರಿದ್ದರು.