ಮೈಸೂರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ?: ಶೋಭಾ ಕರಂದ್ಲಾಜೆ
ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಜಯಲಕ್ಷ್ಮೀಪುರಂನಲ್ಲಿರುವ ನಿವಾಸಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಚುನಾವಣೆ ಕುರಿತು ಚರ್ಚೆ ನಡೆಸಿದರು.
ಮೈಸೂರು, ಮಾರ್ಚ್18 : ಏಪ್ರಿಲ್ 9 ರಂದು ನಡೆಯಲಿರುವ ನಂಜನಗೂಡು ಉಪಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ನಂಜನಗೂಡು ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ ಪ್ರಸಾದ್ ಅವರ ಜಯಲಕ್ಷ್ಮೀಪುರಂನಲ್ಲಿರುವ ನಿವಾಸಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಚಿವರಾದ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿದ್ದು, ಚುನಾವಣೆ ಕುರಿತು ಚರ್ಚೆ ನಡೆಸಿದರು.[ಮಾಜಿ ಸಂಸದ ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ?]
ಈ ಸಂದರ್ಭ ಬಿಜೆಪಿ ನಗರಾಧ್ಯಕ್ಷ ಮಂಜುನಾಥ್ ನಗರಪಾಲಿಕೆ ಸದಸ್ಯರಾದ ನಂದೀಶ್ ಪ್ರೀತಂ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಎರಡು ಕ್ಷೇತ್ರದಲ್ಲಿಯೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಮಾಡಿದ್ದಾರೆ ಎಂದು ಜನ ಕಾಂಗ್ರೆಸ್ ಗೆ ಮತ ಹಾಕುತ್ತಾರೆ.ಮೈಸೂರಿಗೆ ನೀವೇನು ಮಾಡಿದ್ದೀರಿ ಎನ್ನುವ ಕುರಿತು ಚರ್ಚೆಗೆ ಬನ್ನಿ. ನಾನು ಉಸ್ತುವಾರಿಯಾಗಿದ್ದಾಗ ಮಾಡಿದ ಕೆಲಸದಷ್ಟು ನೀವು ಕೆಲಸ ಮಾಡಿಲ್ಲ ಎಂದು ಹರಿಹಾಯ್ದರು. ಇಡೀ ಸಚಿವ ಸಂಪುಟವೇ ಪ್ರಚಾರಕ್ಕೆ ಬರುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಇಲ್ಲೇ ಪ್ರಚಾರ ಮಾಡುತ್ತಾರೆ. ಒಂದೆರಡು ದಿನ ಹೊರಗೆ ಹೋಗುವುದನ್ನು ಬಿಟ್ಟರೆ ಚುನಾವಣೆ ಮುಗಿಯುವವರೆಗೂ ಯಡಿಯೂರಪ್ಪ ಇಲ್ಲೆ ಇರುತ್ತಾರೆ ಎಂದರು.[ಉಪಚುನಾವಣೆ ಗೆದ್ದು ತಕ್ಕ ಉತ್ತರ ನೀಡುತ್ತೇವೆ: ಡಾ.ಜಿ.ಪರಮೇಶ್ವರ್]
ಮಾಧ್ಯಮಗಳೊಂದಿಗೆ ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸ್ ಪ್ರಸಾದ್ರನ್ನು ಸಂಪುಟದಿಂದ ಕೈಬಿಟ್ಟಿರುವುದು ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತಾಗಿದೆ. ತಾವೇ ತೋಡಿದ್ದ ಹಳ್ಳಕ್ಕೆ ತಾವೇ ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು. ಈ ಉಪಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆ ದಿಕ್ಸೂಚಿಯಾಗಲಿದೆ. ಎರಡು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.