ಮಳೆಗಾಗಿ ಸಿದ್ದು ಪ್ರಾರ್ಥನೆ.. ಮೈಸೂರಿನಲ್ಲಿ ವರುಣನ ಸಿಂಚನ
ಮೈಸೂರು: ಮುಂಗಾರು ಮಳೆ ಈ ಬಾರಿ ಸಮರ್ಪಕವಾಗಿ ಆಗದೆ ಬರ ಕಾಣಿಸಿಕೊಂಡಿದೆ. ಆದರೆ ಮುಂದೆ ಹಿಂಗಾರು ಮಳೆಯಾದರೂ ಚೆನ್ನಾಗಿ ಆಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.[ಜಿಟಿಜಿಟಿ ಮಳೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿದ್ದರಾಮಯ್ಯ]
ದಸರಾ ಹಬ್ಬದ ಹಿನ್ನಲೆಯಲ್ಲಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶ್ರೀ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬರಗಾಲವಿದ್ದರೂ ನಾಡಹಬ್ಬ ನಡೆಸುವುದು ಅನಿವಾರ್ಯವಾಗಿದೆ. ಹತ್ತು ದಿನಗಳ ಹಿಂದೆ ದಸರಾ ಆರಂಭವಾದ ದಿನ ಚಾಮುಂಡಿಬೆಟ್ಟದಲ್ಲಿ ದಸರಾಗೆ ಚಾಲನೆ ನೀಡುವಾಗಲೂ ಮಳೆಯಾಗಿ ಸುಭೀಕ್ಷೆಯಾಗಲಿ ಎಂದು ಪ್ರಾರ್ಥಿಸಿದ್ದೆ ಇವತ್ತು ಕೂಡ ಮಳೆಗಾಗಿ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುವುದಾಗಿ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಾದ್ಯತಂಡಗಳ ಮೂಲಕ ಬರಮಾಡಿ ಕೊಳ್ಳಲಾಯಿತು. ಬಳಿಕ ಮುಖ್ಯಮಂತ್ರಿಗಳು ಕೆಲಕಾಲ ಸುತ್ತೂರು ಶ್ರೀಗಳಾದ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಕೆಲಕಾಲ ಉಭಯ ಕುಶಲೋಪರಿ ನಡೆಸಿದರು.[ಐತಿಹಾಸಿಕ ಮೈಸೂರು ದಸರಾ ನಡೆದು ಬಂದ ಹಾದಿ]
ಇದೇ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸಚಿವರಾದ ಮಹದೇವಪ್ರಸಾದ್, ತನ್ವೀರ್ ಸೇಠ್, ರಮಾನಾಥ್ ರೈ ಸೇರಿದಂತೆ ಹಲವು ಮುಖಂಡರು ಜೊತೆಗಿದ್ದರು. ಮುಖ್ಯಮಂತ್ರಿಗಳು ಸೇರಿದಂತೆ ಸಚಿವರು ಮಠದಲ್ಲಿಯೇ ಬೆಳಗ್ಗಿನ ಉಪಹಾರವನ್ನು ಸೇವಿಸಿ ಬಳಿಕ ತೆರಳಿದರು.
ಸುತ್ತೂರು ಮಠದಿಂದ ದಸರಾ ದಿನ ಬೆಳಗ್ಗಿನ ಉಪಹಾರಕ್ಕೆ ಗಣ್ಯರು, ಮಾಧ್ಯಮದವರು ಸೇರಿದಂತೆ ಹಲವರನ್ನು ಆಹ್ವಾನಿಸುವುದು ಬಹಳಷ್ಟು ವರ್ಷಗಳ ಹಿಂದಿನಿಂದಲೂ ನಡೆದು ಬಂದಿದೆ. ಅದರಂತೆ ಈ ಬಾರಿಯೂ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನದ ವೇಳೆಯಲ್ಲಿ ಯದುವೀರ್ ಅವರು ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಾಲಯದ ಬಳಿ ಶಮಿ ಪೂಜೆ ನೆರವೇರಿಸಿದರು. ಇದೇ ಸಂದರ್ಭ ವರುಣನ ಸಿಂಚನ ಎಲ್ಲರ ಗಮನ ಸೆಳೆಯಿತಲ್ಲದೆ, ಶುಭಸೂಚನೆ ಎಂಬ ಮಾತುಗಳು ಕೇಳಿಬರುತ್ತಿವೆ.