ಶಿಮ್ಲಾ ಆಸ್ಪತ್ರೆಯಲ್ಲಿ ಪತ್ತೆಯಾದ ಮಹಿಳೆಗೆ ನೆರವು: ಎಚ್ಡಿಕೆ ಭರವಸೆ
Recommended Video
ಬೆಂಗಳೂರು, ಆಗಸ್ಟ್ 2 : ಶಿಮ್ಲಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೈಸೂರು ಮೂಲದ ಮಹಿಳೆಯನ್ನು ಇಂದು ಆರೋಗ್ಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ವಾಪಸ್ ಕರೆತಂದಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಮಹಿಳೆಗೆ ಚಿಕಿತ್ಸೆಗೆ ಹಾಗೂ ಉತ್ತಮ ರೀತಿಯಲ್ಲಿ ಬದುಕಲು ಅಗತ್ಯ ನೆರವು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ತಮ್ಮ ಮನೆ ಬಿದ್ದು ಹೋಗಿದ್ದು, ಮನೆ ಕಟ್ಟಿಸಿಕೊಡುವಂತೆ ಹಾಗೂ ತನ್ನ ಪತಿಯನ್ನು ಹುಡುಕಿಕೊಡುವಂತೆ ಮಹಿಳೆಯು ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಕುರಿತು ಮೈಸೂರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಸಿಎಂ ಮಾಸ್ಟರ್ ಪ್ಲ್ಯಾನ್
ಮಹಿಳೆಯನ್ನು ವಾಪಸ್ ಕರೆತರುವಲ್ಲಿ ಶ್ರಮಿಸಿದ ಅಧಿಕಾರಿಗಳ ತಂಡದಲ್ಲಿದ್ದ ಆರೋಗ್ಯ ಇಲಾಖೆ ಉಪನಿರ್ದೇಶಕ ರಾದ ಡಾ. ರಜನಿ, ಮೈಸೂರು ಜಿಲ್ಲೆಯ ಮಾನಸಿಕ ಆರೋಗ್ಯ ಅಧಿಕಾರಿ ಡಾ. ಮಂಜುಪ್ರಸಾದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೇ ಅಧಿಕಾರಿ ಮಂಜುಳಾ ಹಾಗೂ ಮಹಿಳಾ ಪೊಲೀಸ್ ನಗೀನಾ ಅವರನ್ನು ಅಭಿನಂದಿಸಿದರು.
ಸಚಿವ ಸಂಪುಟ ಸಭೆಯಲ್ಲೂ ಉತ್ತರ ಕರ್ನಾಟಕ ವಿಷಯ ಚರ್ಚೆ
ಮಹಿಳೆಗೆ ಸದ್ಯ ರಾಜ್ಯ ಮಹಿಳಾ ನಿಲಯದಲ್ಲಿ ಆಶ್ರಯ ನೀಡಿ ಚಿಕಿತ್ಸೆ ನೀಡಲಾಗುವುದು. ನಂತರ ಅವರ ಮನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಜೊತೆಗೆ ಮಹಿಳೆಯನ್ನು ಹಾಗೂ ಅಧಿಕಾರಿಗಳ ತಂಡವನ್ನು ಆಹ್ವಾನಿಸಿ ಸತ್ಕರಿಸಿದ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹಾಗೂ ಅವರ ಕನ್ನಡತಿ ಪತ್ನಿ ಸಾಧನಾ ಠಾಕೂರ್ ಅವರಿಗೆ ಕ್ರತಜ್ಞತೆ ಸಲ್ಲಿಸಿದರು.