ಗೆಜ್ಜಗಳ್ಳಿಯಲ್ಲಿ ಗುದ್ದಲಿ ಪೂಜೆ ಗಲಾಟೆ, ಯತೀಂದ್ರ ಎದುರೇ ಡಿಶುಂಡಿಶುಂ
ಮೈಸೂರು, ಫೆಬ್ರವರಿ 19 : 15 ಲಕ್ಷ ರುಪಾಯಿ ವೆಚ್ಚದ ಕಾಮಗಾರಿ ಉದ್ಘಾಟನೆಗೆ ತೆರಳಿದ್ದ ಯತೀಂದ್ರ ಅವರಿಗೆ ಜೆಡಿಎಸ್ ಕಾರ್ಯಕರ್ತರು ಘೇರಾವ್ ಹಾಕಿ, ಘೋಷಣೆಗಳನ್ನು ಕೂಗಿದ ಘಟನೆ ಮೈಸೂರಿನ ಗೆಜ್ಜಗಳ್ಳಿಯಲ್ಲಿ ನಡೆದಿದೆ.
ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಗೆಜ್ಜಗಳ್ಳಿಯಲ್ಲಿ ಭಾನುವಾರ ಯತೀಂದ್ರ ಕಾಮಗಾರಿಯೊಂದಕ್ಕೆ ಗುದ್ದಲಿ ಪೂಜೆ ನೆರವೇರಿಸಲು ತೆರಳಿದ್ದರು. ಈ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಚುನಾವಣಾ ಸಂದರ್ಭದಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ನೀವೇಕೆ ಮಾಡಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಯತೀಂದ್ರ ಅವರನ್ನು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯಗಿಂತ ಮೋದಿ ಒಳ್ಳೆಯವರು ಎಂದ ಜಿಟಿ ದೇವೇಗೌಡ
ಈ ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಜೆಡಿಎಸ್ ನವರು ಯತೀಂದ್ರ ಅವರಿಗೆ ಗುದ್ದಲಿಪೂಜೆ ನಡೆಸದಂತೆ ಘೇರಾವ್ ಹಾಕಿದ್ದಾರೆ. ಜೆಡಿಎಸ್ ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಇದ್ದ ಕಾರಣಕ್ಕೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಚಿತ್ರಗಳು : ವಿಕಾಸ ಪರ್ವ ಯಾತ್ರೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ
ಜೆಡಿಎಸ್ ನ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕ್ರಮದ ವಿರುದ್ಧವೂ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಡಾ. ಯತೀಂದ್ರ ಗುದ್ದಲಿ ಪೂಜೆಯನ್ನು ಮಾಡದೆ ತೆರಳಿದ್ದಾರೆ. ವಿಧಾನಸಭೆ ಚುನಾವಣೆಗೆ ಮುನ್ನವೇ ಚಾಮುಂಡೇಶ್ವರಿ ಕ್ಷೇತ್ರ ರಣರಂಗವಾಗುತ್ತಿದೆ.