ಮೈಸೂರು: ಬರಿಗೈನಲ್ಲೇ ಒಳಚರಂಡಿ ಸ್ವಚ್ಛಗೊಳಿಸಿದ ಪೌರಕಾರ್ಮಿಕ
ಮೈಸೂರು, ಸೆಪ್ಟೆಂಬರ್ 6: ಇತ್ತೀಚೆಗಷ್ಟೇ ಮೈಸೂರಿನಲ್ಲಿ ಮ್ಯಾನ್ ಹೋಲ್ ಗೆ ಇಳಿಸಿ ಪೌರಕಾರ್ಮಿಕರಿಂದ ಸ್ವಚ್ಛಗೊಳಿಸಿದ ಪ್ರಕರಣ ನಡೆದ ಬೆನ್ನಲ್ಲಿಯೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರಿನಲ್ಲಿ ಪೌರಕಾರ್ಮಿಕನ ಮ್ಯಾನ್ ಹೋಲಿಗಿಳಿಸಿದ ಗ್ರಾಪಂ ಅಧ್ಯಕ್ಷೆ!
ಪೌರ ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಭದ್ರತೆಯ ವ್ಯವಸ್ಥೆ ಕಲ್ಪಿಸದೆ ಒಳಚರಂಡಿಯನ್ನು ಬರಿಗೈನಿಂದಲೇ ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಲೇ ಇದೆ. ಇದು ಅಮಾನವೀಯತೆಯ ಜ್ವಲಂತ ನಿದರ್ಶನವಾಗಿದ್ದು, ಸಾಂಸ್ಕೃತಿಕ ನಗರಿಯ ಜನತೆಯನ್ನು ತಲೆ ತಗ್ಗಿಸುವಂತೆ ಮಾಡಿದೆ.
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಜೆ.ಪಿ.ನಗರದ ಅಕ್ಕಮಹಾದೇವಿ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸುರಿದ ಮಳೆಯಿಂದಾಗಿ ತುಂಬಿಕೊಂಡಿದ್ದ ಒಳಚರಂಡಿಯನ್ನು ಸ್ವಚ್ಛಗೊಳಿಸಲು ಪೌರಕಾರ್ಮಿಕ ಶ್ರೀನಿವಾಸ್ ಎನ್ನುವರನ್ನು ಚರಂಡಿಗೆ ಇಳಿಸಲಾಗಿದೆ.
ಆದರೆ ಅವರಿಗೆ ಯಾವುದೇ ಮುಂಜಾಗ್ರತವಾಗಿ ಗ್ಲೌಸ್ ಏನನ್ನೂ ನೀಡದೇ ಪೌರಕಾರ್ಮಿಕ ಶ್ರೀನಿವಾಸ್ ಅವರನ್ನು ಒಳಚರಂಡಿಗೆ ಇಳಿಸಲಾಗಿದೆ.
ಕಾರ್ಪೋರೇಶನ್ ಇನ್ಸಪೆಕ್ಟರ್ ಶಿವಕುಮಾರ್ ಎಂಬವರು ಒಳಚರಂಡಿ ಸ್ವಚ್ಛಗೊಳಿಸಲು ಹೇಳಿದ್ದು, ಶ್ರೀನಿವಾಸ್ ಅವರಿಗೆ ಪಾಲಿಕೆಯ ವತಿಯಿಂದ ಆರೋಗ್ಯದ ಹಿತದೃಷ್ಟಿಯಿಂದ ಯಾವುದೇ ಕಾಳಜಿ ವಹಿಸುವಂಥಹ ಸಾಮಗ್ರಿಗಳನ್ನು ನೀಡಿಲ್ಲ.
ಅವರೂ ಎಲ್ಲರಂತೆ ಮನುಷ್ಯರು. ಮಾನವೀಯ ನೆಲೆಯಲ್ಲಾದರೂ ಅವರಿಗೆ ಕೈಗೆ ಧರಿಸಲು ಗ್ಲೌಸ್ ಗಳನ್ನು ನೀಡಬಹುದಾಗಿತ್ತು ಎಂಬ ಮಾತುಗಳು ಕೇಳಿ ಬಂದಿದೆ.
ಈ ಹಿಂದೆ ಚಾಮುಂಡಿ ಬೆಟ್ಟದ ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರಿದ ಮ್ಯಾನ್ ಹೋಲ್ ನಲ್ಲಿ ಪೌರಕಾರ್ಮಿಕನೋರ್ವನನ್ನು ಇಳಿಸಿ ಸ್ವಚ್ಛಗೊಳಿಸಲಾಗಿತ್ತು. ಆ ಘಟನೆ ಮಾಸುವ ಮುನ್ನವೇ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಇಂಥಹ ಅಮಾನವೀಯ ಘಟನೆ ನಡೆದಿರುವುದು ವಿಪರ್ಯಾಸ.