ಭೂ ಹಗರಣ ಸಂಬಂಧ ಸಿಐಡಿಯಿಂದ ಮುತ್ತಪ್ಪ ರೈ ವಿಚಾರಣೆ
ಬೆಂಗಳೂರು, ನವೆಂಬರ್ 15:ಮೈಸೂರಿನ ದಿವಂಗತ ಎಡ್ವಿನ್ ವಾನ್ ಇಂಗೆನ್ ಅವರಿಗೆ ಸೇರಿದ 500 ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಮಂಗಳವಾರ ಹಲವಾರು ಸಾಕ್ಷಿಗಳ ವಿಚಾರಣೆ ನಡೆಸಿದೆ.
ವಿಚಾರಣೆ ನಡೆಸಿದ ಸಾಕ್ಷಿಗಳಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕೂಡಾ ಸೇರಿದ್ದಾರೆ.
ಇಂಗೆನ್ ಆಸ್ತಿಯ ಒಂದು ಭಾಗವನ್ನು ಪ್ರಸಿದ್ಧ ರಿಯಲ್ ಎಸ್ಟೇಟ್ ಸಂಸ್ಥೆಯೊಂದಕ್ಕೆ ಮಾರಾಟ ಮಾಡಿದ ಸಂಬಂಧ ಚೆಕ್ ನಲ್ಲಿ ಪಡೆಯಲಾದ ನ್ಯಾಯಸಮ್ಮತ ಕಮಿಷನ್ ಗೆ ಸಂಬಂಧಿಸಿದಂತೆ ಮುತ್ತಪ್ಪ ರೈ ಅವರನ್ನು ಪ್ರಶ್ನಿಸಲಾಗಿದೆ.
ಈ ಹಿಂದೆ ಮಾರ್ಚ್ 2, 2013ರಲ್ಲಿ ಇಂಗನ್ ಮೈಸೂರು ಟರ್ಫ್ ಕ್ಲಬ್ ನ ಕುದುರೆ ತರಬೇತುದಾರ ಮೈಖೆಲ್ ಫ್ಲಾಯ್ಡ್ ಈಶ್ವರ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಅದಾದ ಮರುದಿನ ಇಂಗನ್ ತಮ್ಮ 101ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
ತಾನು ಇಂಗನ್ ದತ್ತು ಪುತ್ರ ಮತ್ತು ಅವರ ಆಸ್ತಿಗೆ ವಾರಸುದಾರ ಎಂದು ಈಶ್ವರ್ ಹೇಳಿಕೊಂಡು ಅವರ ಆಸ್ತಿ ಮಾರಾಟ ಮಾಡಿದ್ದರು. ಈ ಸಂಬಂಧ ದಾಖಲಾಗಿದ್ದ ಎಫ್ಐಆರ್ ರನ್ನು ಹೈಕೋರ್ಟ್ ಆಗಸ್ಟ್ 1ರಂದು ರದ್ದುಗೊಳಿಸಿತ್ತು.
ಇದರ ವಿರುದ್ಧ ಇಂಗನ್ ಸೋದರ ಸೊಸೆ ಸುಪ್ರಿಂ ಕೋರ್ಟಗ ನಲ್ಲಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್ ಕರ್ನಾಟಕ ಹೈಕೋರ್ಟ್ ತೀರ್ಮಾನವನ್ನು ರದ್ದುಗೊಳಿಸಿತ್ತು. ಮಾತ್ರವಲ್ಲ ಸಿಐಡಿಯಿಂದ ಈ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿತ್ತು. ಮತ್ತು 60 ದಿನಗಳಲ್ಲಿ ವರದಿ ಸಲ್ಲಿಸುವಂತೆಯೂ ಸೂಚಿಸಿತ್ತು.