ಪ್ರಸಾದ ಸ್ವೀಕರಿಸದೆ ಬಚಾವಾದ ಸಾಲೂರು ಮಠದ ಶ್ರೀಗಳು
ಮೈಸೂರು, ಡಿಸೆಂಬರ್ 15 : ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮಲೆಮಹದೇಶ್ವರಬೆಟ್ಟದ ಸಾಲೂರು ಮಠಾಧೀಶರಾದ ಶ್ರೀ ಗುರುಸ್ವಾಮಿ ಪ್ರಸಾದ ಸ್ವೀಕರಿಸದೆ ಅದೃಷ್ಟವಶಾತ್ ಪಾರಾಗಿದ್ದಾರೆ.
ಸುಳವಾಡಿ ಕಿಚ್ಚುಗುತ್ತಿ ದೇವಸ್ಥಾನವು ಮಾರ್ಟಳ್ಳಿ ಸಮೀಪ ಕಾಡಂಚಿನಲ್ಲಿದ್ದು, ಸುತ್ತಮುತ್ತಲಿನ ಅನೇಕ ಗ್ರಾಮಸ್ಥರು ಈ ದೇವಸ್ಥಾನಕ್ಕೆಆಗಮಿಸುತ್ತಾರೆ.
ದೇವಸ್ಥಾನ ನಿರ್ವಹಣೆಗೆ ಟ್ರಸ್ಟ್ವೊಂದನ್ನೂ ಕೂಡ ರಚಿಸಿಕೊಳ್ಳಲಾಗಿದ್ದು, ದೇವಾಲಯವು ಅಭಿವೃದ್ಧಿ ಹೊಂದುತ್ತಿದೆ. ಈ ದೇವಸ್ಥಾನಕ್ಕೆ ಗೋಪುರ ನಿರ್ಮಿಸಬೇಕೆಂಬ ಉದ್ದೇಶದಿಂದ ನಿನ್ನೆ ಶಂಕು ಸ್ಥಾಪನೆ ಸಮಾರಂಭ ಏರ್ಪಡಿಸಲಾಗಿತ್ತು.
ಚಾಮರಾಜನಗರ : ಶುಕ್ರವಾರದ ದುರಂತ, ಪ್ರಸಾದ ಸೇವಿಸಿ 11 ಸಾವು
ಸಾಲೂರು ಶ್ರೀಗಳು ಅದೃಷ್ಟವಶಾತ್ ಬಚಾವ್
ಸುಳವಾಡಿ ಕಿಚ್ಚುಗುತ್ತಿ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭ ನೆರವೇರಿಸಿದ ಸಾಲೂರು ಮಠಾಧೀಶರಾದ ಶ್ರೀ ಗುರುಸ್ವಾಮಿ ಅವರಿಗಾಗಿದ್ದ ಆಯಾಸವೇ ಪ್ರಾಣ ಉಳಿಸಿದೆ.
ಪೂಜೆ ನೆರವೇರಿಸಿದ ಅವರು ಸುಸ್ತಿನ ಕಾರಣದಿಂದ ಟೊಮೊಟೋ ಬಾತ್ ಪ್ರಸಾದ ಸೇವಿಸದೇ ಇದ್ದುದರಿಂದ ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಾಮಂಗಳಾರತಿ ಮುಗಿಯುತ್ತಿದ್ದಂತೆಯೇ ಗುರುಸ್ವಾಮಿ ಅವರಿಗೆ ಟೊಮೊಟೋ ಬಾತ್ ಮತ್ತು ಪಂಚಾಮೃತ ನೀಡಲಾಗಿದೆ. ಆದರೆ ಅವರು ನನಗೆ ಯಾಕೋ ಸುಸ್ತಾಗ್ತಿದೆ. ಆಮೇಲೆ ತಿಂತೀನಿ' ಎಂದು ಹೇಳಿ ಸ್ವಲ್ಪ ಪಂಚಾಮೃತವನ್ನು ಮಾತ್ರ ಬಾಯಿಗೆ ಹಾಕಿಕೊಂಡು ಹೊರಟು ಹೋದರು ಎಂದು ಸ್ಥಳದಲ್ಲಿದ್ದ ವ್ಯಕ್ತಿಯೋರ್ವರು ತಿಳಿಸಿದ್ದಾರೆ.
ಗೋಪುರ ನಿರ್ಮಾಣದ ಸಮಾರಂಭ
ಗೋಪುರ ನಿರ್ಮಾಣದ ಸಮಾರಂಭವನ್ನು ಮಲೆಮಹದೇಶ್ವರಬೆಟ್ಟದ ಸಾಲೂರು ಮಠಾಧೀಶರಾದ ಶ್ರೀ ಗುರುಸ್ವಾಮಿ ಅವರು ನೆರವೇರಿಸಿದರು. ಸಮಾರಂಭಕ್ಕೆ ಮಾರ್ಟಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಾವಿತ್ರಿ ಬಾಯಿ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರೂ ಆಗಮಿಸಿದ್ದರು.
ಪ್ರಸಾದ ವಿನಿಯೋಗಕ್ಕಾಗಿ ಒಂದೂವರೆ ಕ್ವಿಂಟಾಲ್ ಅಕ್ಕಿ ಉಪಯೋಗಿಸಿ ಟೊಮೊಟೋ ಬಾತ್ ಮತ್ತು ಪಂಚಾಮೃತ ಸಿದ್ಧಪಡಿಸಲಾಗಿತ್ತು.
ಇದೇ ವೇಳೆ ಸಾಲೂರು ಮಠಾಧೀಶರಾದ ಗುರು ಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದ ನಂತರ ಮಹಾಮಂಗಳಾರತಿ ಮಾಡಿ ಬೆಳಿಗ್ಗೆ ಸುಮಾರು 9.30ರಲ್ಲಿ ಟೊಮೊಟೋ ಬಾತ್ ಮತ್ತು ಪಂಚಾಮೃತ ಪ್ರಸಾದ ವಿನಿಯೋಗಿಸಲಾಯಿತು.
ಅಪ್ಪ ಹೋದರು..ಅಮ್ಮನನ್ನಾದರೂ ಉಳಿಸಿಕೊಡಿ...ಮಕ್ಕಳ ಗೋಳು
150 ಮಂದಿ ಭಕ್ತರು
ಸುಮಾರು 150 ಮಂದಿ ಭಕ್ತರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. 80ಕ್ಕೂ ಹೆಚ್ಚು ಮಂದಿ ಭಕ್ತರು ಟೊಮೊಟೋ ಬಾತ್ ಪ್ರಸಾದವನ್ನು ಸ್ವೀಕರಿಸಿದರು. ಟೊಮೊಟೋ ಬಾತ್ ಸೇವಿಸಿದ ಕೆಲ ನಿಮಿಷಗಳಲ್ಲೇ ಕಣ್ಣು ಮತ್ತು ಹೊಟ್ಟೆ ಉರಿ, ವಾಂತಿ-ಬೇಧಿ ಕಾಣಿಸಿಕೊಂಡಿದೆ.
ಪ್ರಸಾದ ಸಿದ್ಧಪಡಿಸಿದ ಬಾಣಸಿಗನ ಪುತ್ರಿ 12 ವರ್ಷದ ಅನಿತಾ ದೇವಸ್ಥಾನದ ಮುಂಭಾಗದಲ್ಲೇ ಕುಸಿದು ಬಿದ್ದಿದ್ದಾಳೆ. ದನ ಮೇಯಿಸುತ್ತಿದ್ದ ಅಣ್ಣಯ್ಯಪ್ಪ ದೇವಸ್ಥಾನಕ್ಕೆ ಬಂದು ಪ್ರಸಾದ ಸ್ವೀಕರಿಸಿ ತೆರಳಿದವನು ಅನತಿ ದೂರದಲ್ಲೇ ಪ್ರಜ್ಞಾಹೀನನಾಗಿ ಬಿದ್ದಿದ್ದ. ಅನಿತಾಳನ್ನು ರಾಮಾಪುರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಆಕೆ ಅಸು ನೀಗಿದ್ದಳು. ಅಣ್ಣಯ್ಯಪ್ಪ ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಮೃತನಾದ.
ದೇಗುಲದ ಪ್ರಸಾದ ತಯಾರಿಸಿದ ಅಡುಗೆಯವನಿಗೆ ಮೊದಲೇ ಅನುಮಾನ ಬಂದಿತ್ತು!
ತಮಿಳುನಾಡಿನ ಓಂ ಶಕ್ತಿ ದೇವಸ್ಥಾನ
ತಮಿಳುನಾಡಿನ ಓಂ ಶಕ್ತಿ ದೇವಸ್ಥಾನಕ್ಕೆ ಮಾಲೆ ಹಾಕಿದ್ದ ಮಾಲಾಧಾರಿಗಳು ದೇವಸ್ಥಾನದ ಬಳಿಯೇ ತೀವ್ರವಾಗಿ ಅಸ್ವಸ್ಥಗೊಂಡು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯತ್ತ ಧಾವಿಸಿದರು. ಮಧ್ಯಾಹ್ನದ ವೇಳೆಗೆ ವಿಷ ಪ್ರಸಾದ ಸೇವಿಸಿದ್ದ ನೂರಾರು ಭಕ್ತರು ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಜಮಾಯಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆತಂಕಕ್ಕೊಳಗಾಗಿ ಆರೋಗ್ಯ ಇಲಾಖಾಧಿಕಾರಿಗಳು ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಅದಾಗಲೇ ಇಬ್ಬರು ಮೃತ ಪಟ್ಟರು.
108 ಆಂಬುಲೆನ್ಸ್ಗೆ ಕರೆಯ ಮೇಲೆ ಕರೆ ಹೋಗುತ್ತಿದ್ದಂತೆಯೇ ಚಾಮರಾಜನಗರ ಜಿಲ್ಲೆಯ ಎಲ್ಲಾ ಆಂಬುಲೆನ್ಸ್ಗಳೂ ಕಾಮಗೆರೆಯತ್ತ ದೌಡಾಯಿಸಿದವು ಎಂದು ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದರು ಪ್ರತ್ಯಕ್ಷದರ್ಶಿ ಮಣಿ.