ಮಂಡ್ಯ, ಮೈಸೂರಿಗೆ ಕೇಂದ್ರದ ಬರ ಅಧ್ಯಯನ ತಂಡ
ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಅಧ್ಯಯನಕ್ಕಾಗಿ ಕೇಂದ್ರದ ಅಧಿಕಾರಿಗಳು ಶುಕ್ರವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮೈಸೂರು. ನವೆಂಬರ್ 5 : ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯನ್ನು ಅಧ್ಯಯನಕ್ಕಾಗಿ ಕೇಂದ್ರದ ಅಧಿಕಾರಿಗಳು ಶುಕ್ರವಾರ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೈದ್ರಾಬಾದಿನ ಎಸ್.ಎಂ. ಕೂಲ್ಹಾತ್ಕರ್, ಕೇಂದ್ರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತರಾದ ಸತೀಶ್ ಕುಮಾರ್ ಕಾಂಬೋಜ್, ಕೇಂದ್ರ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕ ಎಸ್.ಎಸ್. ಮೀನಾ ಅವರುಗಳನ್ನೊಳಗೊಂಡ ತಂಡ ಮೈಸೂರು ತಾಲ್ಲೂಕು, ಹೆಚ್.ಡಿ.ಕೋಟೆ ತಾಲ್ಲೂಕು, ಹುಣಸೂರು ತಾಲ್ಲೂಕು ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಅಧ್ಯಯನ ನಡೆಸಿತು.
ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ಶಿವಯ್ಯ ಅವರ ಜಮೀನಿಗೆ ಭೇಟಿ ನೀಡಿದ ಅಧಿಕಾರಿಗಳು ಮಳೆ ಇಲ್ಲದೆ ಒಣ ಹೋಗಿರುವ ರಾಗಿ, ಅವರೆ, ತೊಗರಿ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.[ಬರ ಪರಿಹಾರಕ್ಕೆ ಮಾನದಂಡ ಬದಲಾವಣೆ ಅವಶ್ಯ: ಎಸ್.ಎಂ.ಕೃಷ್ಣ]
ಅಲ್ಲಿಂದ ಚಲ್ಲಹಳ್ಳಿ ಗ್ರಾಮಕ್ಕೆ ತೆರಳಿ ಕುಮಾರಸ್ವಾಮಿ ಬಿನ್ ಲೇ|| ಲಿಂಗಯ್ಯ ಅವರ ಜಮೀನಿಗೆ ಭೇಟಿ ನೀಡಿ ಹತ್ತಿ ಬೆಳೆ ನಷ್ಟದ ಬಗ್ಗೆ ಅವಲೋಕನ ಮಾಡಿದರು. ಮುಂದೆ ಬತ್ತಿ ಹೋಗಿರುವ ಜಯಪುರ ಕೆರೆ ವೀಕ್ಷಣೆ ಮಾಡಿದರು.
ಮಂಡ್ಯ ತಾಲ್ಲೂಕಿನ ಮದ್ದೂರು ಹುಂಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ಅಧಿಕಾರಿಗಳು ವೀಕ್ಷಿಸಿದರು. ಅಲ್ಲಿಂದ ಹೆಚ್.ಡಿ.ಕೋಟೆ ತಾಲ್ಲೂಕಿನ ಚಾಮಲಾಪುರ, ಆಲನಹಳ್ಳಿ, ಹುಣಸೂರು ತಾಲ್ಲೂಕಿನ ಹನುಮಂತಪುರ, ಧರ್ಮಪುರ, ಚಲ್ಲಹಳ್ಳಿ, ಬಿಳಿಕೆರೆ, ಪಿರಿಯಾಪಟ್ಟಣ ತಾಲ್ಲೂಕಿನ ಹಂಪಲಾಪುರ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಂದ ಮನವಿ ಸ್ವೀಕರಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ಡಿ.ರಂದೀಪ್ ಸರ್ಕಾರಿ ಅತಿಥಿಗೃಹದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿ 'ಬರ ಪರಿಹಾರ, ಕಾಮಗಾರಿ, ಕುಡಿಯುವ ನೀರಿನ ಪೂರೈಕೆ, ಮೇವು ಮುಂತಾದ ಉದ್ದೇಶಕ್ಕಾಗಿ ಜಿಲ್ಲೆಗೆ 99.61 ಕೋಟಿ ನೆರವು ಬೇಕಾಗುತ್ತದೆ ಎಂದರು.[3 ತಂಡದಿಂದ ಬರ ಅಧ್ಯಯನ, 15 ಜಿಲ್ಲೆಗಳಲ್ಲಿ ಪ್ರವಾಸ]
ಅಕ್ಟೋಬರ್ ಅಂತ್ಯದ ವೇಳೆಗೆ 750.4 ಎಂ.ಎಂ. ಮಳೆ ಆಗಬೇಕಿತ್ತು. ಆದರೆ 413.7 ಎಂ.ಎಂ. ಮಳೆಯಾಗಿ ತೀವ್ರ ಬರಗಾಲ ಉಂಟಾಗಿದೆ ಎಂದರು.
ಮಳೆ ಕೊರತೆಯಿಂದ 47425 ಹೆಕ್ಟೇರ್ ಪ್ರದೇಶದಲ್ಲಿ ಧಾನ್ಯ ಬಿತ್ತನೆಯಾಗಿಲ್ಲ. ಮಳೆ ಅಭಾವದಿಂದ 125342 ಹೆಕ್ಟೇರ್ ಪ್ರದೇಶ ಸಂಪೂರ್ಣ ಒಣಗಿದೆ. ಬೆಳೆ ಪರಿಹಾರ ನೀಡಲು 7953.21 ಲಕ್ಷ ರೂ. ಅನುದಾನ ಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಹೆಚ್.ಡಿ.ಕೋಟೆ, ನಂಜನಗೂಡು, ಹುಣಸೂರು ಹಾಗೂ ಮೈಸೂರು ತಾಲ್ಲೂಕುಗಳಲ್ಲಿ 266 ಟ್ರಿಪ್ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಇದಕ್ಕಾಗಿ ಜಿಲ್ಲೆಗೆ 8.61 ಕೋಟಿ ರೂ. ಅನುದಾನ ಬೇಕಾಗುತ್ತದೆ ಎಂದರು.[ಬರ ಅಧ್ಯಯನ ತಂಡದೆದುರು ಕಣ್ಣೀರಾದ ಅನ್ನದಾತ!]
ಬರ ಪರಿಹಾರ ಅನುದಾನದಡಿ ಎಲ್ಲಾ 7 ತಾಲ್ಲೂಕುಗಳಲ್ಲಿ ಕಾಮಗಾರಿ ಕೈಗೊಳ್ಳಲು 5.25 ಕೋಟಿ ರೂ., ಜಾನುವಾರುಗಳಿಗೆ ಮೇವು, ಔಷಧಿ ಒದಗಿಸಲು 5.93 ಕೋಟಿ ರೂ. ಬೇಕಾಗುತ್ತದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಅಧ್ಯಯನ ತಂಡ ಮುಖ್ಯಸ್ಥರು ಬರದ ವಾಸ್ತವ ಅರಿವಾಗಿದೆ. ನಾವು ನೋಡಿದ ಅಂಶಗಳನ್ನು ಕೇಂದ್ರ ಸರ್ಕಾರಕ್ಕೆ ವರದಿ ಮಾಡುತ್ತೇವೆ ಎಂದು ಹೇಳಿದರು.[ಸಿದ್ದರಾಮಯ್ಯ ಅವರಿಗೆ ನಾಲ್ಕು ಸಲಹೆ ನೀಡಿದ ಎಸ್ಸೆಂ ಕೃಷ್ಣ]
ಸಂಸದರಾದ ಆರ್. ಧೃವನಾರಾಯಣ್, ಶಾಸಕರಾದ ಜಿ.ಟಿ..ದೇವೇಗೌಡ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಬಿ.ಎಲ್. ಭೈರಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಶಿವಶಂಕರ್, ಅಪರ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಉಪವಿಭಾಗಾಧಿಕಾರಿ ಸಿ.ಎಲ್. ಆನಂದ, ಮತ್ತಿತರರು ಉಪಸ್ಥಿತರಿದ್ದರು.