ಹಳೇ ಮೈಸೂರಿನಲ್ಲಿಯೂ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಮೈಸೂರು, ಸೆಪ್ಟೆಂಬರ್ 12 : ಬೆಂಗಳೂರಿನಲ್ಲಿ ತಮಿಳುನಾಡು ವಿರುದ್ಧ ಆಕ್ರೋಶ ಹೆಚ್ಚಾಗಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ಬೆನ್ನಲ್ಲೇ ಹಳೇ ಮೈಸೂರು ವಿಭಾಗದಲ್ಲಿಯೂ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದ್ದು, ಮೈಸೂರಿನಲ್ಲಿ ತಮಿಳುನಾಡಿನ ವ್ಯಕ್ತಿಗಳಿಗೆ ಸೇರಿದ ವ್ಯಾಪಾರ ಮಳಿಗೆಗಳಿಗೆ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.
ಮೈಸೂರಿನ ಚಾಮುಂಡಿಪುರದ ಎಲೆತೋಟದ ಬಳಿ ತಮಿಳುನಾಡು ನೋಂದಣಿಯ ಕ್ವಾಲಿಸ್ ಕಾರಿಗೆ ಬೆಂಕಿ ಹಚ್ಚಿರುವ ಬೆನ್ನಲ್ಲೇ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಯ್ಯಾಜಿರಾವ್ ರಸ್ತೆಯಲ್ಲಿರುವ ತಮಿಳುನಾಡಿನ ವ್ಯಕ್ತಿಯ ಮಾಲೀಕತ್ವದಲ್ಲಿರುವ ಸೆಂದಿಲ್ ಟೆಕ್ಸ್ಟೈಲ್ಸ್ನ್ನು ಮುಚ್ಚಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮದ್ದೂರಿನಲ್ಲಿ ಪ್ರಯಾಣಿಕರನ್ನು ಸಾಗಿಸುತ್ತಿದ್ದ ಆಂಬುಲೆನ್ಸ್ ಹಾಗೂ ಕಾರಿನ ಮೇಲೆ ಉದ್ರಿಕ್ತ ಯುವಕರು ಸೋಮವಾರ ಸಂಜೆ ದಾಳಿ ನಡೆಸಿದ್ದಾರೆ. ಸೈರನ್ ಮಾಡಿಕೊಂಡು ಬೆಂಗಳೂರಿನಿಂದ ಮಂಡ್ಯಕ್ಕೆ ತೆರಳುತ್ತಿದ್ದ ಖಾಸಗಿ ಆಂಬುಲೆನ್ಸ್ ಅಡ್ಡಗಟ್ಟಿದ ಯುವಕರು, ವಾಹನವನ್ನು ಪರಿಶೀಲಿಸಿದಾಗ ಒಳಗೆ ಯಾವುದೇ ರೋಗಿಯು ಇಲ್ಲದ್ದು ಕಂಡು ರೊಚ್ಚಿಗೆದ್ದಿದ್ದಾರೆ.
ಹಣ ಪಡೆದು ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದನ್ನು ತಿಳಿದ ಗುಂಪು ಚಾಲಕ ಹಾಗೂ ಪ್ರಯಾಣಿಕರಿಗೆ ಧರ್ಮದೇಟು ನೀಡಿದರು. ಅಲ್ಲದೆ, ಆಂಬುಲೆನ್ಸ್ ವಾಹನದ ಗಾಜುಗಳನ್ನು ಒಡೆದು ಪುಡಿಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಮಾಧಾನಪಡಿಸಿ, ತಮಿಳಿಗರನ್ನು ರಕ್ಷಿಸಿ ಕರೆದೊಯ್ದರು.
ಗಜ್ಜಲಗೆರೆ ಸುತ್ತ ನಿಷೇಧಾಜ್ಞೆ ಜಾರಿ
ಎರಡು ವಾಹನಗಳಿಗೆ ಬೆಂಕಿ ಹಚ್ಚಿರುವ ಹಿನ್ನೆಲೆಯಲ್ಲಿ ಗೆಜ್ಜಲಗೆರೆ ವ್ಯಾಪ್ತಿಯ ಒಂದು ಕಿ.ಮೀ. ಸುತ್ತ ಸೆ.15ರವರೆಗೆ ನಿಷೇಧಾಜ್ಞೆ ಹೊರಡಿಸಿ ಉಪ ವಿಭಾಗಾಧಿಕಾರಿ ಅರುಳ್ಕುಮಾರ್ ಆದೇಶ ಹೊರಡಿಸಿದ್ದಾರೆ. ಪಟ್ಟಣದ ಕಲ್ಲೊಡ್ಡಿ ತಮಿಳರ ಕಾಲೋನಿ ಸೇರಿದಂತೆ ತಮಿಳರು ವಾಸ ಮಾಡುವ ಬಡಾವಣೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ರೈತ ಹೋರಾಟಗಾರರ ಬಂಧನ ಬಿಡುಗಡೆ
ಮಂಡ್ಯದ ಕೆ.ಆರ್.ಪೇಟೆಯಲ್ಲಿ ಸೆ.20ರವರೆಗೂ ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಸುಪ್ರಿಂಕೋರ್ಟ್ ನೀಡಿದ ನಿರ್ದೇಶನದ ವಿರುದ್ಧ ಪ್ರತಿಭಟಿಸಿ ಮಿನಿ ವಿಧಾನಸೌಧಕ್ಕೆ ಬೀಗ ಹಾಕಲು ಯತ್ನಿಸಿದ 54 ರೈತ ಹೋರಾಟಗಾರರನ್ನು ಪಟ್ಟಣ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.
ಕಾನೂನು ಭಂಗ ಮಾಡಿ ಜೈಲ್ ಭರೋ
ಹೇಮಾವತಿ ನೀರನ್ನು ಬಸಿದು ತಮಿಳುನಾಡಿಗೆ ಬಿಡುತ್ತಿರುವುದರ ವಿರುದ್ಧ ಕಾನೂನು ಭಂಗ ಮಾಡಿ ಜೈಲ್ ಭರೋ ನಡೆಸುವುದಾಗಿ ರೈತ ಹೋರಾಟಗಾರೊಂದಿಗೆ ಮಿನಿ ವಿಧಾನಸೌಧಕ್ಕೆ ಬೀಗ ಹಾಕಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಚಳವಳಿನಿರತರನ್ನು ಬಂಧಿಸಿ, ಬಿಡುಗಡೆ ಮಾಡಿದರು.
ಕೆಆರ್ಎಸ್ ಚಲೋ ಬೈಕ್ ರ್ಯಾಲಿ
30 ಪುರುಷರು ಮತ್ತು 24 ಮಹಿಳಾ ಹೋರಾಟಗಾರರು ಸೇರಿದಂತೆ ಒಟ್ಟು 54 ಜನ ಪ್ರತಿಭಟನಾಕಾರರು ರೈತಸಂಘದ ಜೈಲ್ ಬರೋ ಕೆರೆಯ ಮೇರೆಗೆ ಬಂಧನಕ್ಕೊಳಗಾಗಿ ಬಿಡುಗಡೆಯಾಗಿದ್ದಾರೆ.
ಎರಡು ಲಾರಿ ಬೆಂಕಿಗಾಹುತಿ
ಮದ್ದೂರಿನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ತಾಲೂಕಿನಾದ್ಯಂತ ಪ್ರತಿಭಟನೆಯ ಕಿಚ್ಚು ಹೆಚ್ಚಿದೆ. ಕೊಪ್ಪ ಗ್ರಾಮದ ಎನ್ಎಸ್ಎಲ್ ಕಾರ್ಖಾನೆ ಎದುರು ನಿಲ್ಲಿಸಿದ್ದ ತಮಿಳುನಾಡು ಮೂಲದ ಎರಡು ಲಾರಿಗಳು ಹಾಗೂ ಗೆಜ್ಜಲಗೆರೆ ಬಳಿ ಮಿನಿ ಜೀಪಿಗೆ ಬೆಂಕಿ ಹಚ್ಚಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದನೆ
ಗೆಜ್ಜಲಗೆರೆ ಬಳಿ ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭ ತಮಿಳುನಾಡಿಗೆ ಸೇರಿದ ಮಿನಿ ಜೀಪಿನ ಚಾಲಕ ಗ್ರಾಮಸ್ಥರೊಂದಿಗೆ ಹೆದ್ದಾರಿ ತಡೆ ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಪರಿಣಾಮ ಯುವಕರು ರೊಚ್ಚಿಗೆದ್ದು, ಮಿನಿ ಜೀಪಿಗೆ ಬೆಂಕಿ ಹಚ್ಚಿದ್ದಾರೆ.