ಚಾಮುಂಡಿ ಬೆಟ್ಟದ ಉಳಿವಿಗಾಗಿ ಮೇಣದ ಬತ್ತಿ ಮೆರವಣಿಗೆ
ಮೈಸೂರು, ಜೂನ್ 15: 'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ಇನ್ನಷ್ಟು ಜನ ಬೆಂಬಲ ಪಡೆಯುವ ನಿಟ್ಟಿನಲ್ಲಿ ಜೂನ್ 18ರಂದು ಮೇಣದ ಬತ್ತಿ ಹಿಡಿದು ಮೆರವಣಿಗೆ ನಡೆಸಲು ಲೆಟ್ಸ್ ಡೂ ಇಟ್ ಮೈಸೂರು, ಅರಿವು ಹಾಗೂ ಇನ್ನಿತರ ಸಮಾನ ಮನಸ್ಕ ಸಂಘಟನೆಗಳು ಮುಂದಾಗಿದೆ.
ಅಭಿವೃದ್ಧಿ ಕಾರ್ಯದ ಹೆಸರಲ್ಲಿ ಚಾಮುಂಡಿಬೆಟ್ಟದಲ್ಲಿ ಮಾಲ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿರುವ ಸರ್ಕಾರದ ವಿರುದ್ಧ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ಸೇರಿದಂತೆ ಹಲವಾರು ಗಣ್ಯರು ತೀವ್ರವಾಗಿ ವಿರೋಧಿಸಿದ್ದರು.[ಕಾಮಗಾರಿ ನಿಲ್ಲಿಸಿ ಚಾಮುಂಡಿ ಬೆಟ್ಟ ಉಳಿಸಿ]
'ಚಾಮುಂಡಿ ಬೆಟ್ಟ ಉಳಿಸಿ' ಹೋರಾಟಕ್ಕೆ ಯದುವಂಶದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರಮೋದಾ ದೇವಿ ಒಡೆಯರ್ ಸಹ ಬೆಂಬಲ ಸೂಚಿಸಿದ್ದರು. ['ತಿರುಪತಿ ಮಾದರಿಯಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ']
ಅರಿವು ಸಂಸ್ಥೆ ನಾಲ್ಕೈದು ದಿನಗಳಿಂದ ವಿಭಿನ್ನ ರೀತಿಯ ಪ್ರತಿಭಟನೆ ಹಮ್ಮಿಕೊಂಡಿತ್ತು. ಲೆಟ್ಸ್ ಡೂ ಇಟ್ ಮೈಸೂರು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರ ಈ ಕೂಡಲೇ ತನ್ನ ಅಭಿವೃದ್ಧಿ ಕಾರ್ಯಗಳನ್ನು ಹಿಂಪಡೆಯುವ ಮೂಲಕ 'ಚಾಮುಂಡಿ ಬೆಟ್ಟವನ್ನು ಉಳಿಸಬೇಕು' ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಈಗ ಮೈಸೂರು ಗ್ರಾಹಕರ ಪರಿಷತ್ ಕೂಡಾ ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಜೂನ್ 18ರಂದು ಸಂಜೆ 6.30 ಕ್ಕೆ ಕೋಟೆ ಆಂಜನೇಯ ಸ್ವಾಮಿ ದೇಗುಲದಿಂದ ಶ್ರೀಹರ್ಷ ರಸ್ತೆ, ಸಬ್ ಅರ್ಬನ್ ಬಸ್ ನಿಲ್ದಾಣ, ಗಾಂಧಿ ಚೌಕ ಸುತ್ತಿಕೊಂಡು ಪುನಃ ಆರಂಭದ ಸ್ಥಳಕ್ಕೆ ಮೆರವಣಿಗೆ ಬರಲಾಗುವುದು.
ಮೈಸೂರಿನ ಹೆಮ್ಮೆಯ ಸಂಕೇತವಾದ ಧಾರ್ಮಿಕ ಕೇಂದ್ರವಾದ ಚಾಮುಂಡಿ ಬೆಟ್ಟದಲ್ಲಿ ಕಾಮಗಾರಿ ನಡೆಸಲು ಸರ್ಕಾರ ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದು ತಪ್ಪು, ಪಾರಂಪರಿಕ ತಾಣ ಸಂರಕ್ಷಣೆ ಮಾಡುವ ಇಲಾಖೆಯಾಗಲಿ, ಅರಣ್ಯ ಇಲಾಖೆ ಅನುಮತಿಯಾಗಲಿ ಇದಕ್ಕೆ ಪಡೆದಿಲ್ಲ ಎಂದು ಮೈಸೂರು ಗ್ರಾಹಕ ಪರಿಷತ್ ನ ಸದಸ್ಯ ಡಾ. ಭಾಮಿ ಶೆಣೈ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಷ್ಟ್ರೀಯ ಹಸಿರು ಪ್ರಾಧಿಕಾರ, ಚೆನ್ನೈ ಹಾಗೂ ಹೈಕೋರ್ಟ್ ನಲ್ಲಿ ಸರ್ಕಾರದ ವಿರುದ್ಧ ದಾವೆ ಹೂಡಲಾಗುವುದು ಎಂದರು.