ಉಪಚುನಾವಣೆ: 4 ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿಯಿಂದ ದೂರು
ನಾಲ್ವರು ಅಧಿಕಾರಿಗಳು ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಮೈಸೂರು, ಮಾರ್ಚ್ 19: ಗುಂಡ್ಲುಪೇಟೆ ಹಾಗೂ ನಂಜನಗೂಡು ಕ್ಷೇತ್ರಗಳ ಉಪ ಚುನಾವಣೆ ಕಾದಾಟ ಚುನಾವಣಾ ಆಯೋಗದ ಮೆಟ್ಟಿಲೇರಿದ. ನಾಲ್ವರು ಅಧಿಕಾರಿಗಳು ಸರಕಾರದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ವರ್ಗಾವಣೆ ಮಾಡಬೇಕು ಎಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ನಂಜನಗೂಡು ಹಾಗೂ ಗುಂಡ್ಲುಪೇಟೆ ಎರಡೂ ಕ್ಷೇತ್ರವನ್ನು ಗೆದ್ದೇ ಗೆಲ್ಲಬೇಕೆಂಬ ಹಠಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಬಿದ್ದಿವೆ. ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಇವೆರಡು ಪಕ್ಷಗಳ ನಾಯಕರು ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದುದ್ದಕ್ಕೂ ಅಡ್ಡಾಡುತ್ತಿದ್ದು, ಮತಯಾಚನೆ, ಚುನಾವಣಾ ಪ್ರಚಾರ ಸಭೆ, ಮನೆ ಮನೆ ಭೇಟಿ ಮೊದಲಾದವುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.[ನಂಜನಗೂಡು ಉಪಚುನಾವಣೆ: ಬ್ಯಾಂಕ್ ಖಾತೆಗಳ ಮೇಲೆ ಹದ್ದಿನ ಕಣ್ಣು]
ಯಾವೆಲ್ಲಾ ಅಧಿಕಾರಿಗಳು ವರ್ಗಾವಣೆ?
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸಪ್ಪ, ಆಹಾರ ಮತ್ತ ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ರಾಮೇಶ್ವರಪ್ಪ, ಗುಂಡ್ಲುಪೇಟೆ ತಾಲೂಕು ಇಒ ರೇವಣ್ಣ ಹಾಗೂ ಚಾಮರಾಜನಗರ ಎಇಇ ಶಿವಮಾದಯ್ಯರನ್ನು ವರ್ಗಾವಣೆ ಮಾಡುವಂತೆ ಬಿಜೆಪಿ ಚುನಾವನಾ ಆಯೋಗಕ್ಕೆ ಪತ್ರ ಬರೆದಿದೆ.
ಬಿಜೆಪಿಗೆ ಗೆಲುವು ಯಾಕೆ ಮುಖ್ಯ?
ಹಳೇ ಮೈಸೂರು ವಿಭಾಗದಲ್ಲಿ ಕಾಂಗ್ರೆಸ್ನದ್ದೇ ಪ್ರಾಬಲ್ಯವಿತ್ತು. ಕ್ರಮೇಣ ಜೆಡಿಎಸ್ ತನ್ನ ಅಧಿಪತ್ಯ ಸಾಧಿಸುವತ್ತ ಮುನ್ನುಗ್ಗಿತು. ಈ ನಡುವೆ ಬಿಜೆಪಿ ಕೂಡ ಇಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಮುಂದಾಗಿದೆ. ಒಂದೆಡೆ ಉತ್ತರಭಾರತದಲ್ಲಿ ತನ್ನ ಡಂಡಯಾತ್ರೆಯಲ್ಲಿ ಯಶಸ್ಸು ಗಳಿಸಿದ ಬಳಿಕ ಬಿಜೆಪಿಯ ರಾಜ್ಯ ನಾಯಕರು ಅದೇ ಯಶಸ್ಸಿನ ಗುಂಗಿನಲ್ಲಿದ್ದಾರೆ. ಉಪಚುನಾವಣೆಯಲ್ಲಿ ಒಂದು ವೇಳೆ ಬಿಜೆಪಿ ಗೆದ್ದು ಬಿಟ್ಟರೆ ಅದು ಕಾಂಗ್ರೆಸ್ಗೆ ಆಗುವ ಮುಖಭಂಗ ಜತೆಗೆ ಅದನ್ನೇ ದಾಳವನ್ನಾಗಿಟ್ಟುಕೊಂಡು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ನ ನೆಲಕಚ್ಚಿಸುವ ತಂತ್ರ ಬಿಜೆಪಿಯದ್ದಾಗಿದೆ.[ಮೈಸೂರಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ?: ಶೋಭಾ ಕರಂದ್ಲಾಜೆ]
ಮೈಸೂರಲ್ಲಿ ಬಿಎಸ್ವೈ ವಾಸ್ತವ್ಯ
ಹೇಗಾದರು ಮಾಡಿ ಎರಡೂ ಕ್ಷೇತ್ರಗಳಲ್ಲಿ ಹೇಗಾದರೂ ಮಾಡಿ ಗೆದ್ದೇ ತೀರಬೇಕೆಂಬ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೈಸೂರು ಭಾಗದಲ್ಲಿ ವಾಸ್ತವ್ಯ ಹೂಡಿ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರಸಭೆಗಳನ್ನು ನಡೆಸುತ್ತಿದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಟ್ಟರೆ ಅಧಿಕಾರಕ್ಕೆ ಬಂದಾಕ್ಷಣ ಗುಂಡ್ಲುಪೇಟೆ ತಾಲೂಕನ್ನು ದತ್ತು ತೆಗೆದುಕೊಳ್ಳುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎನ್ನುವ ಅರ್ಥದ ಮಾತುಗಳನ್ನೂ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸುಳಿವಿಲ್ಲ
ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ಉಪ ಚುನಾವಣಾ ಕ್ಷೇತ್ರಗಳತ್ತ ಸುಳಿದಿಲ್ಲ. ಹೀಗಾಗಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರು, ಪಕ್ಷದ ಮುಖಂಡರೊಂದಿಗೆ ಮತ ಯಾಚನೆ ಮಾಡುತ್ತಿದ್ದಾರೆ. ನಂಜನಗೂಡಿನಲ್ಲಿ ಶ್ರೀನಿವಾಸ್ ಪ್ರಸಾದ್ ರನ್ನು ಸೋಲಿಸಿ ಕಾಂಗ್ರೆಸ್ನ ಅಭ್ಯರ್ಥಿ ಕಳಲೆ ಕೇಶವಮೂರ್ತಿ ಗೆಲುವು ಸಾಧಿಸಿದರೆ, ನಂಜನಗೂಡಿನಲ್ಲಿ ದಿ.ಮಹದೇವಪ್ರಸಾದ್ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಗೆದ್ದೇ ಗೆಲ್ಲುತ್ತಾರೆಂದು ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಕಾರ್ಯಕರ್ತರ ವಿಶ್ವಾಸವಾಗಿದೆ.
ಸಿದ್ಧರಾಮಯ್ಯಗೆ ಪ್ರತಿಷ್ಠೆ ಪ್ರಶ್ನೆ
ಉಪ ಚುನಾವಣೆ ಗೆಲುವು ಕಾಂಗ್ರೆಸ್ಗೆ ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪ್ರತಿಷ್ಠೆಯಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನವೇ ಒಂದಷ್ಟು ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ಕ್ಷೇತ್ರದ ಮತದಾರರ ಸೆಳೆಯುವ ತಂತ್ರ ಮಾಡಿದ್ದಾರೆ. ಬೇರೆಲ್ಲೂ ಬಿಡುಗಡೆಯಾಗದ ಯೋಜನೆಗಳೆಲ್ಲವೂ ಇಲ್ಲಿ ಆಗಿದೆ. ಇದು ಚುನಾವಣಾ ಗಿಮಿಕ್ ಎನ್ನುವುದು ಪ್ರಜ್ಞಾವಂತ ಮತದಾರರಿಗೂ ಗೊತ್ತಿಲ್ಲದ ವಿಚಾರವೇನಲ್ಲ. ಆದರೂ ಎಲ್ಲವನ್ನೂ ಕುತೂಹಲದಿಂದಲೇ ನೋಡುತ್ತಿರುವ ಮತದಾರರು ಯಾರನ್ನು ಗೆಲ್ಲಿಸಬೇಕು ಎಂಬ ತೀರ್ಮಾನವನ್ನು ಆದಾಗಲೇ ಮಾಡಿಯಾಗಿದೆ. ಅದನ್ನು ಮತಯಂತ್ರದಲ್ಲಿ ಒತ್ತುವ ಮೂಲಕ ಹೊರಗೆಡವಲಿದ್ದಾರೆ. ಅಲ್ಲಿ ತನಕ ಕಾಯುವುದು ಅನಿವಾರ್ಯವಾಗಿದೆ.