ಏ.13ರಂದು ಮತ ಎಣಿಕೆ, ನಂಜನಗೂಡಿನಾದ್ಯಂತ ನಿಷೇದಾಜ್ಞೆ ಜಾರಿ
ಇದೇ ಏಪ್ರಿಲ್ 13ರಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವುದುರಿಂದ ಏಪ್ರಿಲ್ 13ರಂದು ರಂದು ಬೆಳಿಗ್ಗೆ 6 ಗಂಟೆಯಿಂದ ಏ.14 ಬೆಳಿಗ್ಗೆ 6 ಗಂಟೆಯವರೆಗೆ ಸಿಆರ್ ಪಿಸಿ ನಿಷೇದಾಜ್ಞೆ ಜಾರಿ.
ಮೈಸೂರು, ಏಪ್ರಿಲ್. 12 : ಇದೇ ಏಪ್ರಿಲ್ 13ರಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ನಡೆಯುತ್ತಿರುವುದುರಿಂದ ಯಾವುದೇ ಅನಾಹುತಗಳಿಗೆ ಎಡೆಮಾಡಿಕೊಡದಿರಲು ಮೈಸೂರು ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದೆ.
ಗೆದ್ದ ಅಭ್ಯರ್ಥಿಗಳು ಮತ್ತು ಸೋತ ಅಭ್ಯರ್ಥಿಗಳ ಪರ ಇರುವ ಬೆಂಬಲಿಗರು ಘರ್ಷಣೆಗೆ ಇಳಿಯುವ ಸಾಧ್ಯತೆ ಇರುವುದರಿಂದ ಮುಂಜಾಗೃತ ಕ್ರಮವಾಗಿ ಏಪ್ರಿಲ್ 13ರಂದು ರಂದು ಬೆಳಿಗ್ಗೆ 6 ಗಂಟೆಯಿಂದ ಏ.14 ಬೆಳಿಗ್ಗೆ 6 ಗಂಟೆಯವರೆಗೆ ಸಿಆರ್ ಪಿಸಿ ಸೆಕ್ಷನ್ 144ರ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಿ. ರಂದೀಪ್ ಅವರು ಆದೇಶ ಹೊರಡಿಸಿದ್ದಾರೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ 5 ಜನರಿಗಿಂತ ಹೆಚ್ಚು ಗುಂಪುಗೂಡುವುದನ್ನು ನಿಷೇಧಿಸಿದೆ.
ಮತ ಎಣಿಕೆ ಎಲ್ಲಿ?
ಏಪ್ರಿಲ್ 13ರಂದು ನಂಜನಗೂಡು ತಾಲ್ಲೂಕಿನ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಡಿಗ್ರಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.
ಭಂಗ ತರುವಂತಹ ಕೃತ್ಯಗಳ ನಿಷೇಧ
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು, ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲೀ ಹಾಗೂ ಸಾರ್ವಜನಿಕರ ಗಾಂಭೀರ್ಯ ಮತ್ತು ನೈತಿಕತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಿದೆ.[ನಂಜನಗೂಡಲ್ಲಿ ಬೆಟ್ಟಿಂಗ್ ಜೋರು, ನಾವು ಗೆಲ್ಬೇಕು ಅಂತಾರೆ ಜನರು!]
ಶುಭ ಸಮಾರಂಭಗಳಿಗೆ ನಿಷೇಧವಿಲ್ಲ
ಈ ಆದೇಶವುಶುಭ ಸಮಾರಂಭಗಳಿಗೆ, ಧಾರ್ಮಿಕ ಮತ್ತು ಶವ ಸಂಸ್ಕಾರಗಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳುವವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯೋತ್ಸವಕ್ಕೆ ಬ್ರೇಕ್
ಯಾವುದೇ ಅಭ್ಯರ್ಥಿಯು ಗೆದ್ದಲ್ಲಿ ಯಾವುದೇ ವಿಜಯೋತ್ಸವದ ಬ್ಯಾನರ್ಗಳನ್ನು, ಬಿತ್ತಿಪತ್ರಗಳನ್ನು ಹಾಗೂ ಫ್ಲೆಕ್ಸ್ ಬೋರ್ಡ್ಗಳನ್ನು ಅಳವಡಿಸುವುದನ್ನು ಕಡ್ಡಾಯವಾಗಿ ನಿಷೇಧೀಸಿಲಾಗಿದೆ. ಮಾಡಿದ್ದಲ್ಲಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.