ಮೈಸೂರು: ಕೇಂದ್ರ ಬಜೆಟ್ ಶ್ರೀಸಾಮಾನ್ಯನ ನಿರೀಕ್ಷೆಗಳೇನು…?
ಮೈಸೂರು, ಜನವರಿ 31: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ದೇಶದಲ್ಲಿ ನೋಟ್ ಬ್ಯಾನ್ ಆದೇಶ ಹೊರಡಿಸಿದ ಬಳಿಕ ಕೇಂದ್ರ ಸರ್ಕಾರ ಮೊದಲ ಬಜೆಟ್ ಫೆ. 1ರಂದು ಮಂಡನೆ ಮಾಡುತ್ತಿದ್ದು, ಜನಸಾಮಾನ್ಯರು ಸೇರಿದಂತೆ ದೇಶದ ಜನರು ಅಪಾರ ನಿರೀಕ್ಷೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ಅನೇಕ ಜನರು ನೋಟು ಬದಲಾವಣೆಯಿಂದ ಅಪಾರ ಪ್ರಮಾಣದಲ್ಲಿ ಸರಕಾರ ಕಪ್ಪುಹಣವನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ ಅದನ್ನು ಬಜೆಟ್ ಮೂಲಕ ಸದುಪಯೋಗ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.[ಜೇಟ್ಲಿ ಬಜೆಟ್ 2017 : ತೆರಿಗೆದಾರರ 10 ನಿರೀಕ್ಷೆಗಳು]
ಅದರಲ್ಲೂ ಈ ಬಾರಿ ರೈಲ್ವೆ ಹಾಗೂ ಕೇಂದ್ರ ಬಜೆಟ್ ಒಟ್ಟಿಗೆ ಮಂಡನೆಯಾಗುತ್ತಿದ್ದು ಮೈಸೂರಿನ ಜನರನ್ನು ಬಜೆಟ್ ಕುರಿತು ಒನ್ ಇಂಡಿಯಾ ಮಾತನಾಡಿಸಿದಾಗ ಅವರ ನಿರೀಕ್ಷೆಗಳ ಪಟ್ಟಿಯೇನು ಎಂಬುದರ ಮಾಹಿತಿ ಇಲ್ಲಿದೆ...
ಮಧ್ಯಮ ವರ್ಗದವರಿಗೆ ಉಪಯುಕ್ತ ಬಜೆಟ್ ಬೇಕು
ಈ ವರ್ಷದ ಕೇಂದ್ರ ಬಜೆಟ್ ನಲ್ಲಿ ಬಡವರಿಗೆ, ಮಧ್ಯಮ ವರ್ಗ, ಮೆಟ್ರೋ, ಅರೆ ನಗರ ಪ್ರದೇಶಗಳಲ್ಲಿನ ಜನರಿಗೆ ಹಾಗೀ ಮಧ್ಯಮ ವರ್ಗ ಮತ್ತು ಬಡವರಿಗಾಗಿ ಹಲವಾರು ವಿಧಗಳಲ್ಲಿ ಪ್ರಯೋಜನಕಾರಿ ಯೋಜನೆಗಳನ್ನು ಮಂಡಿಸಿದರೆ ಒಳಿತು. ಇನ್ನು ಆದಾಯ ತೆರಿಗೆಯ ಕನಿಷ್ಠ ಮಿತಿ ಮಧ್ಯಮ ವರ್ಗದವರಿಗೆ ಇದರ ಉಪಯೋಗ ಹೆಚ್ಚಾಗಲಿದೆ. ಈ ರೀತಿಯಾದ ಬಜೆಟ್ ನಮಗೆ ಸಿಗಲಿ ಎನ್ನುತ್ತಾರೆ ಕೇಂದ್ರ ಸರಕಾರಿ ನೌಕರರಾದ ಪವನ್.
ಮೈಸೂರಿನ- ಹೊರರಾಜ್ಯಗಳಿಗೂ ರೈಲು ಬೇಕು
ಮೈಸೂರಿನ ಬಹು ದಿನಗಳ ಕಾಲದ ಬೇಡಿಕೆಯಾದ ಮೈಸೂರು- ಕೇರಳ ರೈಲು, ಮೈಸೂರು - ಮಡಿಕೇರಿ, ಮೈಸೂರು -ಚೆನ್ನೈ ಮಾರ್ಗದ ರೈಲು ಸಂಪರ್ಕ ಲಭ್ಯವಾಗಬೇಕು ಎಂಬುದು ಇಲ್ಲಿನ ಸಾರ್ವಜನಿಕರ ಕೂಗು. ಇದು ಎಂದು ಈಡೇರುತ್ತದೋ ಕಾದುನೋಡಬೇಕಿದೆ.
ಜಿಎಸ್ಟಿ ಮೇಲೆ ಹೆಚ್ಚಿನ ನಿರೀಕ್ಷೆ…
ಸೇವಾ ತೆರಿಗೆಯು ಈ ಎರಡು ಹಂತಗಳಲ್ಲಿ ಒಂದಕ್ಕೆ ಸಮೀಪ ಇದ್ದರೆ ತೆರಿಗೆ ವ್ಯವಸ್ಥೆಯನ್ನು ಜಿಎಸ್ ಟಿಗೆ ಪರಿವರ್ತಿಸುವುದು ಸುಗಮವಾಗುತ್ತದೆ. ರಫ್ತಿಗೆ ಪ್ರೋತ್ಸಾಹಧನ ನೀಡಬೇಕು ಎಂಬುದು ಕೈಗಾರಿಕಾ ವಲಯದ ದೊಡ್ಡ ಬೇಡಿಕೆಯಾಗಿದೆ. ಹೂಡಿಕೆಪರ ಭಾವನೆಗಳನ್ನು ಉದ್ದೀಪಿಸುವಲ್ಲಿ ಬಜೆಟ್ ಗಮನಹರಿಸಬಹುದು ಎಂಬುದು ಬಿಜೆಪಿ ಮುಖಂಡರ ಮಾತು.
ಡಿಜಿಟಲ್ ಇಂಡಿಯಾದತ್ತ ಗಮನ ಹರಿಸಲಿ…
ಕೇಂದ್ರ ಸರಕಾರ ಬಹು ನಿರೀಕ್ಷಿತ ಡಿಜಿಟಲ್ ಇಂಡಿಯಾದತ್ತ ಗಮನ ಹರಿಸಬೇಕು. ಹಾಗೆಯೇ ಅದರಲ್ಲಿನ ಹೊಸ ಯೋಜನೆಗಳನ್ನು ರೂಪಿಸುವತ್ತ ಕೇಂದ್ರ ಮುಂದಾಗುತ್ತದೆಂಬ ನಿರೀಕ್ಷೆಯಲ್ಲಿದ್ದಾಳೆ ವಿದ್ಯಾರ್ಥಿನಿ ಪ್ರಿಯದರ್ಶಿನಿ. ಅಷ್ಟೇ ಅಲ್ಲದೇ ಕೇಂದ್ರ ಸರಕಾರ ನೋಟು ರದ್ದತಿಯಿಂದ ಕಷ್ಟಕ್ಕೆ ಸಿಲುಕಿರುವ ಬ್ಯಾಂಕುಗಳಿಗೆ ಹಣ ಪೂರೈಕೆಯಾಗುವತ್ತ ಗಮನ ಹರಿಸಿದಲ್ಲಿ ಒಳಿತು ಎಂಬುದು ಜನಸಾಮಾನ್ಯರ ಬೇಡಿಕೆ.
ಕಾತುರರಾದ ಜನತೆ
ಈ ಬಾರಿಯ ಬಜೆಟ್ ನಾನಾ ಕಾರಣಕ್ಕೆ ಕುತೂಹಲ ಮತ್ತು ನಿರೀಕ್ಷೆಯ ಭಾರ ಹೊತ್ತಿರುವುದು ನಿಜ. ನೋಟು ರದ್ದತಿ ಪರಿಣಾಮ ಮತ್ತು ಜಿಎಸ್'ಟಿ ಜಾರಿಯಂಥ ದೊಡ್ಡ ಸವಾಲನ್ನು ಎದುರಿಗಿಟ್ಟುಕೊಂಡಿರುವ ಕೇಂದ್ರ ಸರಕಾರ, ಮೊದಲ ಬಾರಿಗೆ ರೈಲ್ವೆ ಮತ್ತು ಸಾಮಾನ್ಯ ಬಜೆಟ್'ಗಳನ್ನು ಒಟ್ಟಿಗೇ ಮಂಡಿಸಲಿದೆ. ಜನಸಾಮಾನ್ಯರಿಗೆ ತೆರಿಗೆ ವಿನಾಯಿತಿ ಮತ್ತಿತರ ಘೋಷಣೆ ಆಗಬಹುದು ಎಂಬ ನಿರೀಕ್ಷೆ ಇದೆ. ಇನ್ನು ಎಲ್ಲರ ಚಿತ್ತ ನೆಟ್ಟಿರೋದು ಮಾತ್ರ ನಾಳಿನ ಬಜೆಟ್ ನತ್ತ. ಕಾದುನೋಡೋಣ ಅಷ್ಟೇ...