ಒಂದು ದಿನಕ್ಕೂ ದಲಿತರ ಮನೆಯಲ್ಲಿ ಊಟ ಮಾಡದ ಸಿದ್ದರಾಮಯ್ಯ: ಬಿಎಸ್ ವೈ
ಮೈಸೂರು, ಜೂನ್ 11: ಸಿಎಂ ಸಿದ್ದರಾಮಯ್ಯ ಒಂದೇ ಒಂದು ದಿನವು ದಲಿತರ ಮನೆಯಲ್ಲಿ ಊಟ ಮಾಡದೆ ನನ್ನನ್ನು ಟೀಕೆ ಮಾಡೋದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗೆ ಟಾಂಗ್ ನೀಡಿದರು.
ಇಲ್ಲಿ ಜನಸಂಪರ್ಕ ಸಭೆಯಲ್ಲಿ ಯಡಿಯೂರಪ್ಪ ಭಾಗವಹಿಸಿದರು. ದಲಿತರ ಕಾಲೋನಿಗೆ ಭೇಟಿ ನೀಡಿದ ಯಡಿಯೂರಪ್ಪ ಕುರಿಮಂಡಿ ಕೆಸರೆಯಲ್ಲಿರುವ ಎನ್.ಆರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿಯವರ ಮನೆಯಲ್ಲಿ ಬೆಳಗಿನ ಉಪಾಹಾರ ಸೇವಿಸಿದರು.
ಪ್ರಧಾನಿ ಮೋದಿ ಕೊಲೆಯಾಗ್ತಾರೆ ಎಂದ ಮಹಿಳೆ ವಿರುದ್ಧ ಪೊಲೀಸರಿಗೆ ದೂರು
ಆತಿಥ್ಯ ನೀಡಿದ ನರಸಿಂಹ ಮೂರ್ತಿ ದಂಪತಿಗೆ ಧನ್ಯವಾದ ಹೇಳಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬರಪ್ರವಾಸ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ. ಇಂದು ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ. ದಲಿತರ ಕಾಲೋನಿಗಳಿಗೆ ಭೇಟಿ ನೀಡಲಿದ್ದೇನೆ ಎಂದು ಅವರು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು 150 ಸ್ಥಾನ ಗೆಲ್ಲುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಜನಸಂಪರ್ಕ ಸಭೆಯಲ್ಲಿ ದೀನದಲಿತರ ಸ್ಥಿತಿ ಗತಿ ಅರಿಯುವ ಪ್ರಯತ್ನ ಮಾಡಿದ್ದೇನೆ. ಅವರ ಕಷ್ಟಕ್ಕೆ ಸ್ಪಂದಿಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.
'ನೋಟು ನಿಷೇಧ ಮಾಡಿದ ಮೋದಿಯಿಂದ 3 ಲಕ್ಷ ಕೋಟಿ ನಷ್ಟ'
ಇನ್ನೂ ಗುಡಿಸಲಲ್ಲಿ ವಾಸವಿರುವ ದಲಿತರು
ಈ ಭಾಗದ ಜನರಿಗೆ ಡೆಂಗ್ಯೂ ಜ್ವರ ಇದ್ದರೂ ಸಿಎಂ ಕಷ್ಟ ಆಲಿಸುತ್ತಿಲ್ಲ. ನಿಮ್ಮ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದಕ್ಕೆ ಆಗುತ್ತಿಲ್ಲ ಅಂದರೆ ನಿಮ್ಮ ಆಡಳಿತ ವೈಖರಿ ಎಂಥದ್ದು ಅನ್ನೋದು ಜನರಿಗೆ ತಿಳಿದಿದೆ. ದಲಿತ ಸಮುದಾಯದ ನಾಯಕರಿಗೆ ಅಪಮಾನ ಮಾಡಿದ್ದು ಕಾಂಗ್ರೆಸ್ ನವರು. ಅರವತ್ತು ವರ್ಷ ಕಾಂಗ್ರೆಸ್ ದೇಶ ಆಳಿದರೂ ದಲಿತರು ಇನ್ನೂ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ ಎಂದರು.
ಅಂಬೇಡ್ಕರ್ ಗೆ ಭಾರತ ರತ್ನ ನೀಡಿದ್ದು ಬಿಜೆಪಿ ಸಮ್ಮಿಶ್ರ ಸರಕಾರ
ಡಾ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಿದ್ದು ಬಿಜೆಪಿ ಸಮ್ಮಿಶ್ರ ಸರಕಾರ. ಬಾಬಾ ಜಗಜೀವನ್ ರಾಮ್, ಮಹಾತ್ಮಗಾಂಧಿ ಅಂತಹ ಮಹನೀಯರ ಹೆಸರು ಹೇಳಲು ಕಾಂಗ್ರೆಸ್ ನಾಯಕರಿಗೆ ಯೋಗ್ಯತೆ ಇಲ್ಲ. ಭಾರತೀಯ ಜನತಾ ಪಾರ್ಟಿಯನ್ನು ಅನೇಕ ದಲಿತ ಮುಖಂಡರು ಸೇರಲಿದ್ದಾರೆ ಎಂಬ ಮಾಹಿತಿ ನೀಡಿದರು.
ದಲಿತ ಮಹಿಳೆಯರ ಏಳ್ಗೆಗೆ ಶ್ರಮಿಸುತ್ತಿರುವ ಮೋದಿ
ಸ್ಲಂ ಹಾಗೂ ದಲಿತ ಮೊಹಲ್ಲಾ ಗಳಿಗೆ ಉದ್ಯೋಗ ಹಾಗೂ ಉತ್ತಮ ಜೀವನ ಸಿಗುವಂತೆ ಮಾಡುವುದೇ ನಮ್ಮ ಗುರಿ. ಕೇಂದ್ರ ಸರಕಾರ ಬಡವರ ಏಳ್ಗೆಗೆ ಶ್ರಮಿಸುತ್ತಿದೆ. ನರೆಂದ್ರ ಮೋದಿ ದಲಿತ ಮಹಿಳೆಯರ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತನ್ನಿ ಎಂದರು.
ಬಿಜೆಪಿ ನಾಯಕರು, ಮುಖಂಡರು, ಕಾರ್ಯಕರ್ತರು ಭಾಗಿ
ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಎಸ್.ಎ ರಾಮದಾಸ್, ಎಂ. ಶಿವಣ್ಣ, ಸಂಸದ ಪ್ರತಾಪ್ ಸಿಂಹ, ಕೆ.ಶಿವರಾಮು ಹಾಗೂ ಸ್ಥಳೀಯ ಬಿಜೆಪಿ ಮುಖಂಡರು, ನೂರಾರು ಬಿಜೆಪಿ ಕಾರ್ಯಕರ್ತರು ಸಹ ಯಡಿಯೂರಪ್ಪ ಅವರ ಜತೆಗೆ ಇದ್ದರು.