ಹುಣಸೂರಿನಲ್ಲಿ ನಾಲ್ವರ ಗಡಿಪಾರು, ಷರತ್ತು ಬದ್ಧ ಈದ್ ಆಚರಣೆ
ಮೈಸೂರು, ಡಿಸೆಂಬರ್ 10 : ಹುಣಸೂರಿನಲ್ಲಿ ಹನುಮ ಜಯಂತಿ ಹಾಗೂ ಈದ್ ಮಿಲಾದ್ ಆಚರಣೆ ಸಂಬಂಧ ನಾಲ್ವರನ್ನು ಗಡಿಪಾರು ಮಾಡಿ, ಷರತ್ತು ಬದ್ಧ ಹಬ್ಬ ಆಚರಣೆಗೆ ಅನುಮತಿ ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ತಿಳಿಸಿದರು.
ಹುಣಸೂರಿನ ಡಿವೈಎಸ್ ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿ.ಡಿ.ಚನ್ನಣ್ಣನವರ್ ಹನುಮಂತ ಜಯಂತಿ ಹಾಗೂ ಈದ್ ಮಿಲಾದ್ ಅಂಗವಾಗಿ ಹುಣಸೂರು ತಾಲೂಕಿನಲ್ಲಿ ನಾಲ್ವರನ್ನು ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಡಿ.12 ರಂದು ಹನುಮ ಜಯಂತೋತ್ಸವ ಆಚರಿಸಲು ಅನುವು ಮಾಡಿ ಕೊಡಲಾಗುವುದು. ಜೊತೆಗೆ, ಡಿ. 13 ರಂದು ಮುಸ್ಲಿಂ ಬಾಂಧವರು ಸೌಹಾರ್ದತೆಯಿಂದ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದರು. ಇನ್ನೂ ಈ ಹಿಂದಿನ ಅಧಿಕಾರಿಗಳು ಕೈಗೊಂಡ ತೀರ್ಮಾನಕ್ಕೆ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.[ಪಾಕ್ ಪರ ಘೋಷಣೆ : ಬೆಳಗಾವಿಯಲ್ಲಿ ಆತಂಕಮಯ ವಾತಾವರಣ]
ಎರಡು ಧರ್ಮಗಳ ಪ್ರಮುಖ ಮುಂಡರನ್ನ ಕರೆದು ಮೆರವಣಿಗೆ ಸೇರಿದಂತೆ ಪ್ರಮುಖ ಕಾರ್ಯಕ್ರಮದ ಬಗ್ಗೆ ಚರ್ಚೆ ಮಾಡುವುದಾಗಿಯೂ ತಿಳಿಸಿದರು. ಅಲ್ಲದೆ, ಶಾಂತಿ ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಇಬ್ಬರು ಎಎಸ್.ಪಿ. 8 ಮಂದಿ ಡಿವೈಎಸ್ಪಿ, 15 ಮಂದಿ ಇನ್ಸಪೆಕ್ಟರ್, 50 ಮಂದಿ ಸಬ್ ಇನ್ಸಪೆಕ್ಟರ್, 100 ಮಂದಿ ಸಹಾಯಕ ಸಬ್ ಇನ್ಸಪೆಕ್ಟರ್ ಗಳು, 1500ಪೊಲೀಸ್ ಸಿಬ್ಬಂದಿ, 8 ತುಕಡಿಯ 200 ಮಂದಿ ಪೊಲೀಸ್ ಸಿಬ್ಬಂದಿ, 300 ಮಂದಿ ಡಿ.ಆರ್ ಪೊಲೀಸ್, ಗೃಹ ರಕ್ಷಕ ಪಡೆ, 150 ಮಂದಿ ಮಫ್ತಿ ಪೊಲೀಸರು ಸೇರಿದಂತೆ ಆರ್.ಪಿ.ಎಫ್ ಪಡೆಯೊಟ್ಟಿಗೆ 500 ಸಿಸಿಟಿವಿ ಕ್ಯಾಮೆರಾದ ಜೊತೆಯಲ್ಲಿ ಪೊಲೀಸರ ವಿಡಿಯೋ ಕ್ಯಾಮರಾಗಳು ಕಣ್ಗಾವಲಿರಲಿದೆ ಎಂದು ಮಾಹಿತಿ ನೀಡಿದರು.
ಯಾವುದೇ ರೀತಿಯ ಶಾಂತಿ ಕದಡುವಂತ ಮಾತುಗಳಿಗೆ ಕಿವಿ ಕೊಡಬಾರದು. ಯಾರದರೂ ಶಾಂತಿ ಭಂಗ ಮಾಡಲು ಯತ್ನಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.[ಈದ್ ಮಿಲಾದ್ : ಡಿಸೆಂಬರ್ 13ರಂದು ಸರಕಾರಿ ರಜಾ]
ಕಳೆದ ವರ್ಷ ನಡೆದಿತ್ತು ಕೋಮುಗಲಭೆ..!
ಹುಣಸೂರು ಪಟ್ಟಣದಲ್ಲಿ ಕಳೆದ ವರ್ಷ ಅದ್ದೂರಿ ಹನುಮಂತ ಜಯಂತಿ ಆಚರಿಸಲಾಗಿತ್ತು. ಈ ಸಂಬಂಧ ಪಟ್ಟಣದಲ್ಲೆಡೆ ಹನುಮ ಧ್ವಜ ಹಾರಿಸಲಾಗಿತ್ತು. ಅಂದೇ ಈದ್ ಮಿಲಾದ್ ಆಚರಣೆ ಸಂಬಂಧ ಮುಸ್ಲೀಮರು ಮೆರವಣಿಗೆ ನಡೆಸಲು ಉದ್ದೇಶಿಸಿ, ಹಿಂದೂ ಮನೆಗಳ ಮೇಲೆ ಹಸಿರು ಬಾವುಟ ಹಾರಿಸಿದ್ದೇ ಈ ಗಲಭೆಗೆ ಕಾರಣ ಎಂಬುದು ಆರೋಪ. ದಲಿತರೇ ಹೆಚ್ಚಾಗಿ ವಾಸಿಸುವ ಪಟ್ಟಣದ ಸರಸ್ವತಿಪುರಂನ ಕೆಲ ಮನೆಗಳ ಮೇಲೆ ಹಸಿರು ಬಾವುಟ ಹಾರಿಸಲಾಗಿತ್ತು. ಇದನ್ನು ಪ್ರಶ್ನಿಸಿದಾಗ ಗಲಭೆ ಶುರುವಾಗಿದೆ. ಇದು ಬಳಿಕ ಇಡೀ ಪಟ್ಟಣವನ್ನೇ ವ್ಯಾಪಿಸಿದೆ.[ರಾಗಿಗುಡ್ಡ ಹನುಮಜಯಂತಿ ಉತ್ಸವಕ್ಕೆ ಸ್ವಾಗತ]
ಅರಸು ಪ್ರತಿಮೆ ಬಳಿ ಹಾರಿಸಿದ್ದ ಹಸಿರು ಧ್ವಜವನ್ನು ಮಹಾದೇವ ಎಂಬಾತ ಇಳಿಸಲು ಮುಂದಾದಾಗ ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಲಾಗಿದೆ. ದಾಳಿಯಿಂದ ತೀವ್ರ ಗಾಯಗೊಂಡ ಮಹಾದೇವನಿಗೆ ಗಂಭೀರ ಗಾಯಗಳಾಗಿತ್ತು ಕೂಡ. ಇನ್ನು ಕಳೆದ ಕೆಲವು ದಿನಗಳ ಕೆಳಗೂ ಸಹ ಉಭಯ ಕೋಮುಗಳ ನಡುವೆ ಘರ್ಷಣೆ ಕೂಡ ನಡೆದಿದ್ದು, ಇದು ಮಾಸುವ ಮುನ್ನವೇ ಮತ್ತೆ ಘಟನೆ ಮರುಕಳಿಸದಂತೆ ಖಾಕಿ ಪಡೆ ಈ ನಿರ್ಧಾರಕ್ಕೆ ಮುಂದಾಗಿದೆ.