ಮೈಸೂರು: ಅಮಾವಾಸ್ಯೆ ದಿನವೇ ಆಸ್ಪತ್ರೆಯಲ್ಲಿ ವಾಮಾಚಾರ
ಮೈಸೂರು, ಆಗಸ್ಟ್ 21 : ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಹೊಸೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಮಾವಾಸ್ಯೆ ದಿನವೇ ವಾಮಾಚಾರ ಮಾಡಲಾಗಿದ್ದು, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ.
ಮೈಸೂರಿನ ಸರಸ್ವತಿಪುರಂನ ಜನಕ್ಕೆ ಈಗ ವಾಮಾಚಾರದ ಭಯ
ಹೊಸೂರು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಡಿ.ಶರತ್ ಬಾಬು ಅವರ ಕಚೇರಿಯ ಮೇಜಿನ ಮೇಲೆ ನಿಂಬೆಹಣ್ಣು, ಅರಿಶಿಣ-ಕುಂಕುಮ ಹಾಗೂ ಮೊಟ್ಟೆ ಕಂಡುಬಂದಿದೆ. ಶನಿವಾರ ಕರ್ತವ್ಯ ಮುಗಿಸಿ ತೆರಳಿದ್ದ ಡಾ.ಶರತ್ ಅವರಿಗೆ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಬಂದಾಗ ಬೆಳಕಿಗೆ ಬಂದಿದೆ.
ಈ ಪ್ರಕರಣದಿಂದ ಆಸ್ಪತ್ರೆಯಲ್ಲಿ ಆತಂಕದ ವಾತಾವರಣ ಮನೆ ಮಾಡಿದ್ದು, ನಿರ್ಭಯದಿಂದ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಹಿಂದೇಟು ಹಾಕುವಂತಾಗಿದೆ. ಮತ್ತೊಂದೆಡೆ ರೋಗಿಗಳು ಭಯದಿಂದಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ
ದಿನದ 24 ತಾಸು ತೆರೆದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ರಾತ್ರಿ ಒಬ್ಬ ನರ್ಸ್ ಹಾಗೂ ಡಿ ಗ್ರೂಫ್ ನೌಕರ ಕರ್ತವ್ಯದಲ್ಲಿದ್ದರು. ಆದರೆ ಆ ವೇಳೆಯಲ್ಲೆ ಈ ಪ್ರಸಂಗ ನಡೆದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ವಾಮಾಚಾರವನ್ನು ಯಾರು? ಯಾರ ಮೇಲೆ ಮಾಡಿಸಿದ್ದಾರೆ ಎಂಬುದು ಮಾತ್ರ ಕುತೂಹಲಕಾರಿಯಾಗಿದೆ. ಘಟನೆ ಕುರಿತು ಟಿಹೆಚ್ ಓ ಹಾಗೂ ಡಿಹೆಚ್ ಓಗೆ ಮಾಹಿತಿ ನೀಡಿದ್ದು, ಈ ಸಂಬಂಧ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶರತ್ ಬಾಬು ಕೆ.ಆರ್.ನಗರ ಪೊಲೀಸರಿಗೆ ದೂರು ನೀಡಿದ್ದಾರೆ.
. ಘಟನೆಯ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಚೇತನ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.