ಮೈಸೂರು ಬಂದ್ ಹಿಂಸಾಚಾರಕ್ಕೆ ತಿರುಗಿದ್ದು ಹೇಗೆ?
ಮೈಸೂರು, ಮಾರ್ಚ್, 14: ಶಾಂತಿಯಿಂದ ಇದ್ದ ಮೈಸೂರನ್ನು ಬಿಜೆಪಿ ಕಾರ್ಯಕರ್ತನ ಹತ್ಯೆ ಪ್ರಕರಣ ಗಲಭೆ, ಘರ್ಷಣೆಗೆ ತಿರುಗುವಂತೆ ಮಾಡಿತು. ಬಿಜೆಪಿ ಮತ್ತು ಸಂಘ ಪರಿವಾರ ಸೋಮವಾರ ಕರೆ ನೀಡಿದ್ದ ಬಂದ್ ಹಿಂಸಾಚಾರಕ್ಕೆ ತಿರುಗಿ ನಗರದಾದ್ಯಂತ ನಿಷೇಧಾಜ್ಞೆ [ಸಿಆರ್ ಪಿಸಿ 144 ಸೆಕ್ಷನ್] ಜಾರಿ ಮಾಡುವಂತ ಸ್ಥಿತಿ ನಿರ್ಮಾಣವಾಯಿತು.
ಒಂದೆಡೆ ಬಿಜೆಪಿ ಪ್ರತಿಭಟನೆ, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸುತ್ತಿದ್ದ ದೃಶ್ಯ, ಆಟೋ ಬೈಕ್ ಗಳಿಗೆ ಬೆಂಕಿ, ಬಸ್ ಮೇಲೆ ಕಲ್ಲು ತೂರಾಟ ಎಲ್ಲವೂ ನಡೆದುಹೋದವು. ನಮಗೂ ಗಲಭೆಗೂ ಸಂಬಂಧ ಇಲ್ಲ ಎಂದು ಬಿಜೆಪಿ ಸಮರ್ಥನೆ ನೀಡಿದರೆ, ಇದಕ್ಕೆಲ್ಲ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡಿತು.[ಬಿಜೆಪಿ ಕಾರ್ಯಕರ್ತನ ಹತ್ಯೆ ನಂತರ ಮೈಸೂರಲ್ಲಿ ಏನಾಯಿತು?]
ಬೆಳಗ್ಗೆ ತಟಸ್ಥವಾಗಿದ್ದ ಮೈಸೂರು ಮಧ್ಯಾಹ್ನದ ವೇಳೆಗೆ ಹೊತ್ತಿಕೊಂಡು ಉರಿಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಪ್ರಹಾರವನ್ನು ಮಾಡಿದರು. ಹತ್ಯೆಗೀಡಾಗಿದ್ದ ರಾಜು ಶವವನ್ನು ಮೈಸೂರು ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿರಿಸಲಾಗಿತ್ತು.
ಬಿಕೋ ಎನ್ನುತ್ತಿದ್ದ ಮೈಸೂರು
ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡ ಹಿನ್ನೆಲೆಯಲ್ಲಿ ಮೈಸೂರು ನಗರದ ಪ್ರಮುಖ ರಸ್ತೆಗಳು ಜನ ಸಂಚಾವಿಲ್ಲದೆ ಬಣಗುಡುತ್ತಿದ್ದವು.
ಹಿಂದೂ ಸಂಘಟನೆ ಪ್ರತಿಭಟನೆ
ರಾಜು ಹತ್ಯೆ ಖಂಡಿಸಿ ಬೀದಿಗಿಳಿದ ಹಿಂದೂ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದವು.
ಆಟೋಕ್ಕೆ ಬೆಂಕಿ
ಪ್ರತಿಭಟನೆ ವೇಳೆ ನಗರದ ವಿವಿಧೆಡೆ ಗುಂಪು ಗುಂಪಾಗಿ ಸಂಚರಿಸಿದ ಕಿಡಿಗೇಡಿಗಳು ಆಟೋ ಮತ್ತು ಬೈಕ್ ಗಳಿಗೆ ಬೆಂಕಿ ಇಟ್ಟರು.
ಸಂಸದ ಪ್ರತಾಪ್ ಸಿಂಹ
ಬಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹತ್ಯೆಗೀಡಾದ ರಾಜು ಕುಟುಂಬಕ್ಕೆ 25 ಲಕ್ಷ ರು.ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಒತ್ತಾಯ ಮಾಡಿದರು.
ಜನರ ಆಕ್ರೊಶ
ಕೆ ಆರ್ ಆಸ್ಪತ್ರೆಯ ಸಮೀಪ ಸೇರಿದ್ದ ಬಿಜೆಪಿ ಕಾರ್ಯಕರ್ತರು ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಭದ್ರತೆ
ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದ ಪೊಲೀಡಸರು ನಗರದ ವಿವಿಧೆಡೆ ಸಂಚರಿಸಿ ಶಾಂತಿ-ಸುವ್ಯವಸ್ಥೆ ಕಾಪಾಡಲು ಕ್ರಮ ತೆಗೆದುಕೊಂಡರು.
ಹಿಂದೂ ಸಂಘಟನೆಗಳ ಆಕ್ರೋಶ
ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು. ವಿವಾದಿತ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.