ನಾಗರಹೊಳೆಯ ಕಾಡಂಚಿನ ಜನರ ನಿದ್ದೆಗೆಡಿಸಿದ ವ್ಯಾಘ್ರ
ಮೈಸೂರು, ಆಗಸ್ಟ್ 25:ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಜನರಿಗೆ ಹುಲಿಯದ್ದೇ ಚಿಂತೆಯಾಗಿದೆ. ಯಾವಾಗ ಬಂದು ದಾಳಿ ಮಾಡಿ ಬಿಡುತ್ತದೆಯೋ ಎಂಬ ಭಯ ಅವರನ್ನು ಕಾಡತೊಡಗಿದೆ.
ಈಗಾಗಲೇ ಅರಣ್ಯ ಇಲಾಖೆ ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಸುತ್ತಿದ್ದರೂ ಚಳ್ಳೆಹಣ್ಣು ತಿನ್ನಿಸುತ್ತಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡಿ ತನ್ನ ಇರುವನ್ನು ತೋರ್ಪಡಿಸುತ್ತಿದ್ದು ಇದರಿಂದ ರೈತರು ಭಯದಲ್ಲಿ ಬದುಕುವಂತಾಗಿದೆ.
ಮಂಗಳೂರು ಹೊರವಲಯದ ಕಿನ್ನಿಗೋಳಿಯಲ್ಲಿ ಹುಲಿ ಪ್ರತ್ಯಕ್ಷ ?
ಹುಲಿ ಅಡ್ಡಾಡಿರುವುದಕ್ಕೆ ಹೆಜ್ಜೆಗುರುತುಗಳಿವೆ. ಜತೆಗೆ ಕಟ್ಟಿ ಹಾಕಿದ ದನದ ಮೇಲೆ ದಾಳಿಯೂ ಮಾಡಿದೆ. ಹೀಗಿದ್ದರೂ ಅದು ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಗೆ ಸಿಕ್ಕಿ ಬೀಳದಿರುವುದು ಅಚ್ಚರಿಗೆ ಕಾರಣವಾಗಿದೆ.
ಕಾಡಂಚಿನ ಕೆ.ಜೆ.ಹೆಬ್ಬನಕುಪ್ಪೆಯಲ್ಲಿಯೇ ಅಡ್ಡಾಡುತ್ತಿರುವ ಹುಲಿ ಆಗಾಗ್ಗೆ ತನ್ನ ಕ್ರೌರ್ಯತೆ ಮೆರೆಯುತ್ತಿದೆ. ಇಲ್ಲಿನ ತರಗನ್ ಎಂಬುವರ ತೋಟದಲ್ಲಿ ಬೀಡು ಬಿಟ್ಟಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಕಾರಣ ಈ ತೋಟದಲ್ಲಿ ಕಾಡು ಬೆಳೆದಿದ್ದು ಅವರು ತೋಟವನ್ನು ಸ್ವಚ್ಛವಾಗಿಟ್ಟು ಕೊಳ್ಳದ ಕಾರಣದಿಂದ ಕಾರ್ಯಾಚರಣೆ ನಡೆಸುವುದು ಕಷ್ಟವಾಗಿ ಪರಿಣಮಿಸಿದೆ.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಕಳೆದೊಂದು ವಾರದ ಹಿಂದೆ ತರಗನ್ ಹಾಗೂ ಸಿ.ಎ.ಮುತ್ತಣ್ಣನವರ ಎಸ್ಟೇಟ್ ನಲ್ಲಿ ಹುಲಿ ಕಾಣಿಸಿಕೊಂಡಿತ್ತು. ಹೀಗಾಗಿ ಅದರ ಸೆರೆಗೆ ಅರಣ್ಯ ಇಲಾಖೆ ಭೀಮ, ಅಭಿಮನ್ಯು, ದ್ರೋಣ, ಗಣೇಶ, ಬಲರಾಮ ಮೊದಲಾದ ಸಾಕಾನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿತ್ತು.
ಕಾರ್ಯಾಚರಣೆ ಆರಂಭವಾಗಿ ಸುಮಾರು 10 ದಿನಗಳೇ ಆಗಿವೆ. ಹುಲಿ ಮಾತ್ರ ಸಿಗುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಸಿಸಿ ಕ್ಯಾಮರಾ ಹಾಗೂ ದ್ರೋಣ್ ಕ್ಯಾಮೆರಾವನ್ನು ಕೂಡ ಬಳಕೆ ಮಾಡಲಾಗಿದೆ. ಆದರೂ ಅದು ಪತ್ತೆಯಾಗುತ್ತಿಲ್ಲ. ಇನ್ನೊಂದೆಡೆ ಕಳೆದ ಕೆಲ ದಿನಗಳ ಹಿಂದೆ ಬೋನ್ ಇರಿಸಿ ಬೋನ್ ನೊಳಗೆ ಮೇಕೆಯೊಂದನ್ನು ಕಟ್ಟಿ ಹಾಕಿ ಕಾಯುತ್ತಿದ್ದರೂ ಅದು ಬೋನಿನತ್ತ ಸುಳಿಯುತ್ತಿಲ್ಲ. ಆದರೂ ಅರಣ್ಯ ಇಲಾಖೆ ತನ್ನ ಕಾರ್ಯಾಚರಣೆಯನ್ನು ಮುಂದುವರೆಸುತ್ತಲೇ ಇದೆ.
ಇದೆಲ್ಲದರ ನಡುವೆ ಟಿ.ಎಂ.ಕಾವೇರಪ್ಪ ಎಂಬುವರಿಗೆ ಸೇರಿದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದೆ. ದಾಳಿಯ ವೇಳೆ ಪ್ರಾಣಭಯದಿಂದ ಹಸು ಕಿರುಚಿದ್ದು ತಕ್ಷಣ ಹತ್ತಿರದಲ್ಲಿದ್ದ ಕಾವೇರಪ್ಪ, ಚಂದ್ರಶೇಖರ್ ಹಾಗೂ ಮೋಹನ್ ಎಂಬುವರು ಓಡಿ ಬಂದಿದ್ದರಿಂದ ಗಾಬರಿಗೊಂಡ ಹುಲಿ ಅಲ್ಲಿಂದ ಹಸುವನ್ನು ಬಿಟ್ಟು ಓಡಿ ಹೋಗಿದೆ. ಹಸುವಿಗೆ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ.
ಇದೀಗ ಮತ್ತೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಹುಲಿ ಸೆರೆ ಸಿಗುವ ತನಕ ಈ ವ್ಯಾಪ್ತಿಯ ಜನ ಭಯದಲ್ಲೇ ಬದುಕುವಂತಾಗಿದೆ. ಜಾನುವಾರುಗಳನ್ನು ಹೊರಗೆ ಬಿಡಲು, ಮಕ್ಕಳು ಶಾಲೆಗೆ ತೆರಳಲು, ರೈತರು ಜಮೀನಿನಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ಒಟ್ಟಾರೆ ನಾಗರಹೊಳೆ ಕಾಡಂಚಿನಲ್ಲಿ ಉಪಟಳ ನೀಡುತ್ತಿರುವ ಹುಲಿಯನ್ನು ಸೆರೆಹಿಡಿಯುವ ತನಕ ಪ್ರಾಣ ಭಯ ಈ ಭಾಗದ ಜನರನ್ನು ಕಾಡುತ್ತಲೇ ಇರುತ್ತದೆ ಎನ್ನುವುದಂತು ಸತ್ಯ.