ಶ್ರೀರಾಮ ಸಕ್ಕರೆ ಕಾರ್ಖಾನೆ ನೌಕರರಿಗೆ ವೇತನ ಮಂಜೂರಿಗೆ ಸೂಚನೆ
ಮೈಸೂರು, ಜುಲೈ 18: ಸೂಕ್ತ ದಾಖಲೆಗಳನ್ನು ನೀಡಿದಲ್ಲಿ, ಅವನ್ನು ಪರಿಶೀಲಿಸಿ ಸಂಕಷ್ಟದಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆಗೆ ಸಾಲ ಮಂಜೂರು ಮಾಡಿ ಸಹಕಾರ ನೀಡುವುದಾಗಿ ಮೈಸೂರಿನ ವಿವಿಧ ಬ್ಯಾಂಕುಗಳು ಭರವಸೆ ನೀಡಿದವು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಖಾನೆಯ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ರಂದೀಪ್ ಅವರ ಅಧ್ಯಕ್ಷತೆಯಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ಇಂದು (ಜುಲೈ 18) ಏರ್ಪಡಿಸಿದ್ದ ಔಪಚಾರಿಕ ಸಭೆಯಲ್ಲಿ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ಸಾಲ ನೀಡುವ ಭರವಸೆ ನೀಡಿದರು.
ಮೈಸೂರಿನ ಬೇಕರಿಯೊಂದರ ಕೇಕ್ ನಲ್ಲಿ ಹುಳು
ಕೆ.ಆರ್.ನಗರ ತಾಲ್ಲೂಕು ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆ ಕಳೆದ 5 ವರ್ಷಗಳಿಂದಲೂ ಸ್ಥಗಿತಗೊಂಡಿದೆ. ಕಾರ್ಖಾನೆಯನ್ನು ಮತ್ತೆ ಆರಂಭಿಸುವ ಸಂಬಂಧ 4 ಬಾರಿ ಟೆಂಡರ್ ಕರೆದಿದ್ದರೂ ಯಾರೂ ಮುಂದೆ ಬಂದಿಲ್ಲ. ಕಾರ್ಖಾನೆಯ 296 ನೌಕರರು ಮತ್ತು ಅವರನ್ನೇ ನಂಬಿಕೊಂಡ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಅವರಿಗೆ ಬಾಕಿ ವೇತನ ಪಾವತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶೀರಾಮ ಸಕ್ಕರೆ ಕಾರ್ಖಾನೆಗೆ ಸಾಲ ನೀಡಿ ಎಂದು ಜಿಲ್ಲಾಧಿಕಾರಿ ರಂದೀಪ್ ಅವರು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರನ್ನು ಸಭೆಯಲ್ಲಿ ಕೋರಿದರು.
ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಉಮೇಶ್ ಮಾತನಾಡಿ, ಕಾರ್ಮಿಕರ ವೇತನ ಬಾಕಿ ಹಾಗೂ ಕಾನೂನುಬದ್ಧ ಸೌಲಭ್ಯಗಳ ಬಾಬ್ತು 2014ರ ಮಾರ್ಚ್ ನಿಂದ 2015ರ ನವೆಂಬರ್ ವರೆಗೆ ಕಟ್ ಆಫ್ ಡೇಟ್ ಪಕಾರ 14.70 ಕೋಟಿ ರೂ. (14,69,95,892 ರೂ.) ಪರಿಹಾರ ನೀಡಬೇಕಿದೆ. 2015ರ ಡಿ.1ರಿಂದ ಜು.17ರವರೆಗೆ 5 ಕೋಟಿ ರೂ. ಬಾಕಿಯಾಗಿದೆ. ಅದಕ್ಕಾಗಿ ಒಟ್ಟು 20 ಕೋಟಿ ರೂ. ಸಾಲದ ಅಗತ್ಯವಿದೆ ಎಂದು ಕಾರ್ಖಾನೆಯ ನೌಕರರ ಪರವಾಗಿ ಸಭೆಯಲ್ಲಿ ಪ್ರಸ್ತಾಪ ಮಂಡಿಸಿದರು.
ನೌಕರರ ಸಂಘದ ಕೋರಿಕೆ ಮತ್ತು ಕಾರ್ಖಾನೆಯ ಆರ್ಥಿಕ ಸ್ಥಿತಿ ಪರಿಶೀಲಿಸಿ ಕಾರ್ಮಿಕ ಇಲಾಖೆ, ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ನೌಕರರ ಸಂಘದ ನಡುವೆ ಮೆಮೋರೆಂಡಮ್ ಆಫ್ ಸೆಟಲ್ ಮೆಂಟ್ ನಲ್ಲಿ ಕಟ್ ಆಫ್ ದಿನ 2014ರ ಮಾರ್ಚ್ ನಿಂದ 2015ರ ನವೆಂಬರ್ ವರೆಗೆ 14,69,95,892 ರೂ. ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಾರ್ಖಾನೆಯು ಒಟ್ಟು 123.16 ಎಕರೆ ಜಮೀನು ಹೊಂದಿದೆ. ಅದರಲ್ಲಿ 50 ಎಕರೆಯನ್ನು ಬ್ಯಾಂಕಿಗೆ ಒತ್ತೆ ಇಟ್ಟು, ಸರ್ಕಾರದ ಗ್ಯಾರಂಟಿಯೊಂದಿಗೆ ಮೈಸೂರು ಜಿಲ್ಲೆಯ ಬ್ಯಾಂಕುಗಳಲ್ಲಿ ಒಟ್ಟು 20 ಕೋಟಿ ರೂ. ಸಾಲ ಪಡೆಯುವಂತೆ ಸಭೆಯಲ್ಲಿ ಕೋರಲಾಯಿತು.