ಬಂಡೀಪುರ ಅರಣ್ಯ: ತಿಂಗಳಲ್ಲಿ ನಾಲ್ಕು ಹುಲಿ ಸಾವು
ಗುಂಡ್ಲುಪೇಟೆ, ಫೆಬ್ರವರಿ 05: ರಾಷ್ಟ್ರೀಯ ಉದ್ಯಾನ ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಾವು ಮೇಲಿಂದ ಮೇಲೆ ನಡೆಯುತ್ತಿದ್ದು ಜನ ಅರಣ್ಯ ಇಲಾಖೆಯತ್ತ ಸಂಶಯದಿಂದ ನೋಡುವಂತಾಗಿದೆ.
ಬಂಡೀಪುರದ ಮದ್ದೂರು ಅರಣ್ಯ ವಲಯದ ಹೊಂಗಳ್ಳಿ ಬೀಟ್ ನಲ್ಲಿ ಇದೀಗ ನಾಲ್ಕು ವರ್ಷದ ಗಂಡು ಹುಲಿಯ ಕಳೇಬರ ಪತ್ತೆಯಾಗಿದೆ. ಕಳೆದ ಕೆಲವು ಸಮಯಗಳಿಂದ ಹುಲಿಗಳ ಸಾವಿನ ಸಂಖ್ಯೆ ಏರುತ್ತಲೇ ಸಾಗುತ್ತಿದೆ.
ಬಂಡೀಪುರದಲ್ಲಿ ಒಂದೇ ದಿನ ಎರಡು ಹುಲಿ, ಹೆಣ್ಣಾನೆ ಕಳೇಬರ ಪತ್ತೆ
ಇದೀಗ ಹುಲಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದನ್ನು ನೋಡಿದ ಅರಣ್ಯ ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಡಾ.ನಾಗರಾಜು ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಬಳಿಕ ದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು.
ಸ್ಥಳಕ್ಕೆ ಸಿಎಫ್ಓ ಅಂಬಾಡಿಮಾಧವ್, ಎಸಿಎಫ್ ರವಿಕುಮಾರ್, ಆರ್ಎಫ್ಓ ಶೈಲೇಂದ್ರಕುಮಾರ್ ಅವರು ಭೇಟಿ ನೀಡಿದ್ದರು. ಹುಲಿಯ ಸಾವಿಗೆ ಕಾದಾಟ ಕಾರಣವಾಗಿರಬಹುದೆಂದು ಅನುಮಾನ ವ್ಯಕ್ತವಾಗಿದೆ.
ಈಗಾಗಲೇ ಬಂಡೀಪುರ ಅರಣ್ಯದಲ್ಲಿ ಹುಲಿಗಳ ಸಂಖ್ಯೆಗಳು ಹೆಚ್ಚಿರುವ ಕಾರಣ ಒಂದನ್ನೊಂದು ಎದುರಾದಾಗ ಕಾದಾಡಿ ಮೃತಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಕಳೆದ ಎರಡು ತಿಂಗಳಿನಿಂದೀಚೆಗೆ ಸುಮಾರು ನಾಲ್ಕು ಹುಲಿಗಳು ಸಾವನ್ನಪ್ಪಿರುವುದನ್ನು ಸ್ಮರಿಸಬಹುದಾಗಿದೆ.
ಹೆಚ್ಚಿನ ಸಂದರ್ಭದಲ್ಲಿ ಹುಲಿಗಳ ಮೃತದೇಹ ಅವು ಸತ್ತು ಕೆಲವು ದಿನಗಳಾದ ಬಳಿಕ ಸಿಗುತ್ತಿದ್ದು, ಅಷ್ಟರಲ್ಲೇ ದೇಹ ಕೊಳೆತು ಹೋಗಿರುತ್ತದೆ. ಹೀಗಾಗಿ ಅದು ಹೇಗೆ ಸತ್ತಿರಬಹುದು ಎಂಬುದನ್ನು ಮೇಲ್ನೋಟಕ್ಕೆ ಹೇಳುವುದು ಕಷ್ಟವಾಗುತ್ತಿದೆ. ಹುಲಿ ಮಾತ್ರವಲ್ಲದೆ ಆನೆಗಳ ಸಾವು ಕೂಡ ಬಂಡೀಪುರ ಅರಣ್ಯದಲ್ಲಿ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ.