ಮದುವೆ ಮನೆ ಸಂಭ್ರಮ ಮೂಡಿಸಿದ ರಂಗಾಯಣದ ಆವರಣ
ಮೈಸೂರು, ಜನವರಿ 11 :ಸೂರ್ಯ ನೆತ್ತಿಯ ಮೇಲೆ ಬಂದಿದ್ದ, ಮರದ ನೆರಳಿನಲ್ಲಿ ನಾಲ್ಕೈದು ಮಂದಿ ದೊಡ್ಡ ಕಟ್ಟಿಗೆಗಳನ್ನು ಜೋಡಿಸುತ್ತಿದ್ದರು. ಇನ್ನಿಬ್ಬರು ಮರದ ರಂಬೆಗಳಿಗೆ ಬಣ್ಣದ ವಸ್ತ್ರಗಳನ್ನು ಸುತ್ತುತ್ತಿದ್ದರು. ಕೆಲವರು ಸುಣ್ಣ-ಬಣ್ಣ ಬಳಿಯುವಲ್ಲಿ ನಿರತರಾಗಿದ್ದರು. ಒಂದು ಗುಂಪು ಶಾಮಿಯಾನ ಹಾಕುವುದರಲ್ಲಿ ತಲ್ಲೀನವಾಗಿತ್ತು.
ಹೌದು, ರಂಗಾಯಣದ ಆವರಣದಲ್ಲೀಗ ಮದುವೆ ಮನೆಯ ಸಂಭ್ರಮ. ಜ.12ರಿಂದ 18ರವರೆಗೆ ನಡೆಯಲಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಕಲ ಸಿದ್ಧತೆಗಳು ಎಲ್ಲಾ ವೇದಿಕೆಗಳಲ್ಲಿ ನಡೆಯುತ್ತಿದೆ. ರಂಗಾಯಣದ ಆವರಣದಲ್ಲಿ ನಾಟಕಗಳ ಪ್ರದರ್ಶನ ಅಲ್ಲದೇ ಜಾನಪದ ಕಲೆಗಳ ಪ್ರದರ್ಶನ, ವಿಚಾರ ಸಂಕಿರಣ, ಪುಸ್ತಕ ಹಾಗೂ ಆಹಾರ ಮೇಳ ಜನರನ್ನು ಆಕರ್ಷಿಸಲಿವೆ.
'ಲಿಂಗ ಸಮಾನತೆ' ಶೀರ್ಷಿಕೆ ಅಡಿಯಲ್ಲಿ ಈ ಬಾರಿ ಏಳು ದಿನ ನಾಟಕೋತ್ಸವ ಹಮ್ಮಿಕೊಳ್ಳಲಾಗಿದ್ದು, ಭೂಮಿಗೀತ , ಕಿರು ರಂಗಮಂದಿರ ಹಾಗೂ ಕಲಾ ಮಂದಿರದಲ್ಲಿ ಟಿಕೆಟ್ ಕೊಂಡು ನಾಟಕ ವೀಕ್ಷಿಸಬಹುದು. ಕಿರು ರಂಗಮಂದಿರದಲ್ಲಿ ನಿತ್ಯ ಸಂಜೆ 6ಕ್ಕೆ, ಭೂಮಿಗೀತದಲ್ಲಿ ಸಂಜೆ 6.30ಕ್ಕೆ, ವನರಂಗದಲ್ಲಿ ಸಂಜೆ 7ಕ್ಕೆ, ಕಲಾಮಂದಿರದಲ್ಲಿ ರಾತ್ರಿ 8ಕ್ಕೆ ವಿವಿಧ ಭಾಷೆಯ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಿಂದರಿಜೋಗಿ ಆವರಣದಲ್ಲಿ ಪ್ರತಿ ದಿನ ಸಂಜೆ 5.30ಕ್ಕೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ವಿವಿಧ ರಾಜ್ಯಗಳ ನೃತ್ಯ ಪ್ರದರ್ಶನ ಮೇಳೈಸಲಿದೆ.