ಚಿಕ್ಕಮ್ಮದೇವಿಗೆ ಬಾಗಿನ ಅರ್ಪಿಸಿದ ಒಡೆಯರ್ ಕುಟುಂಬ
ಮೈಸೂರು, ಆಗಸ್ಟ್ 23: ಎಚ್.ಡಿ.ಕೋಟೆ ತಾಲೂಕಿನ ಹಂಪಾಪರ ಹೊರ ವಲಯದ ಕುಂದೂರಿನ ಚಿಕ್ಕದೇವಮ್ಮನ ಬೆಟ್ಟದಲ್ಲಿ ವಿಗ್ರಹಗಳ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಜಮಾತೆ ಪ್ರಮೋದಾದೇವಿ, ಯದುವೀರ್ ಒಡೆಯರ್ ಮತ್ತು ಪತ್ನಿ ತ್ರಿಷಿಕಾ ಒಡೆಯರ್ ಭೇಟಿ ನೀಡಿ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.
ರಾಜಪರಂಪರೆಯಂತೆ ತಾಯಿ ಚಿಕ್ಕದೇವಮ್ಮನಿಗೆ ಬಾಗಿನ ಅರ್ಪಿಸುವ ಮೂಲಕ ಪೂಜೆ ಸಲ್ಲಿಸಿ ವಂದಿಸಿದರು. 1929ರಲ್ಲಿ ಮೈಸೂರು ಒಡೆಯರಾಗಿದ್ದ ನಂಜರಾಜ ಒಡೆಯರ್ ಅಂದು ಇಲ್ಲಿನ ಭೈರವೇಶ್ವರ, ಭೀಮೇಶ್ವರ ದೇವಾಲಯಗಳನ್ನು ಉದ್ಘಾಟಿಸಿದ್ದರು, ಇದಾದ ಬಳಿಕ ಚಿಕ್ಕದೇವಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದಾಗ ರಾಜಮನೆತನದಿಂದ ಬಾಗಿನ ಮತ್ತು ಸೀರೆಯನ್ನು ದೇವಿಗೆ ಅರ್ಪಿಸಲಾಗಿತ್ತು.[ಜಯಚಾಮರಾಜ ಒಡೆಯರ್ ಪ್ರತಿಮೆ ಮೈಸೂರಿನ ಹೊಸ ಆಕರ್ಷಣೆ]
ಇದೀಗ ಅದನ್ನು ರಾಜಮಾತೆ ಪ್ರಮೋದಾದೇವಿ ಮುಂದುವರೆಸಿ ಮಗ ಹಾಗೂ ಸೊಸೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ್ದು ವಿಶೇಷವಾಗಿದೆ. ಪೂಜೆಯ ಬಳಿಕ ದೇವಾಲಯಗಳಿಗೆ ಪ್ರಮೋದಾದೇವಿ, ಯದುವೀರ್ ಮತ್ತು ತ್ರಿಷಿಕಾ ದಂಪತಿ ಪ್ರದಕ್ಷಿಣೆ ಹಾಕಿದರು.[ಯದುವೀರ್-ತ್ರಿಷಿಕಾ ದಂಪತಿಗಳಿಗೆ ಶುಭ ಕೋರಿದ ಗಣ್ಯರು]
ಯದುವಂಶದ ರಾಜಮಾತೆ ಪ್ರಮೋದಾದೇವಿ ಕುಟುಂಬ ಆಗಮಿಸುತ್ತಿರುವ ವಿಷಯ ತಿಳಿದ ಭಕ್ತರು ಬೆಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕಾದಿದ್ದು ಕಂಡು ಬಂತು.