ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ರೈತ ಸಂಘ ಖಂಡನೆ
ಮೈಸೂರು, ಜುಲೈ.27 : ಸಂಪೂರ್ಣ ಸಾಲಮನ್ನಾ ಮತ್ತು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರೈತ ಹುತಾತ್ಮ ದಿನಾಚರಣೆ ದಿನದಂದು ಕೊಪ್ಪಳ ಬಳಿ ನಡೆಸಿದ ಚಳವಳಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಲಘುವಾಗಿ ಮಾತನಾಡಿರುವುದು ಅವರ ಅಪ್ರಬುದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಪತಿಕ್ರಿಯಿಸಿದ್ದಾರೆ.
ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಜಾರಿಗೆ ತರಬೇಕಾದದ್ದು ಆ ಪಕ್ಷದ ಹೊಣೆಗಾರಿಕೆ. ಹೊಣೆಗಾರಿಕೆಯನ್ನು ಪೂರೈಸಿ ಎಂದು ಒತ್ತಾಯಪಡಿಸುವ ಚಳುವಳಿಗಳ ಬಗ್ಗೆ ಉಡಾಫೆಯಿಂದ ಮಾತನಾಡಿರುವುದು ಕುಮಾರಸ್ವಾಮಿ ಅವರ ಸಂಸ್ಕೃತಿಯನ್ನು ತೋರಿಸುತ್ತದೆ.
ಕುಮಾರಸ್ವಾಮಿ ಸಿಎಂ ಆಗಿದ್ದೇ ದೊಡ್ಡ ವ್ಯಂಗ್ಯ ಎಂದು ಟೀಕಿಸಿದ ತೇಜಸ್ವಿನಿ
ಚಳುವಳಿ ಮಾಡುವವರನ್ನು "ನಮ್ಮ ಪಕ್ಷಕ್ಕೆ ಮತಹಾಕಿದ್ದಾರೆಯೇ, ಸಾಲಮನ್ನಾ ಬಗ್ಗೆ ಒತ್ತಾಯಿಸಲು ಅವರಿಗೆ ನೈತಿಕತೆ ಇದೆಯೇ" ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಅವರು, ಸಾಲಮನ್ನಾ ಕುರಿತು ಚರ್ಚಿಸಲು ವಿಧಾನಸೌಧನಕ್ಕೆ ಚಳವಳಿಗಾರರನ್ನು ಆಹ್ವಾನಿಸಿ, ನುಡಿದಂತೆ ಸಾಲಮನ್ನಾ ಮಾಡುವುದಾಗಿ ಹೇಳಿ 15 ದಿನ ಕಾಲಾವಕಾಶ ಕೇಳಿದ್ದೇಕೆ?
1983ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬರಲು ರೈತ ಚಳವಳಿ ಮತ್ತು ಇತರೆ ಜನಪರ ಚಳವಳಿಗಳು ಕಾರಣ ಎಂಬುದನ್ನು ಮುಖ್ಯಮಂತ್ರಿಗಳು ಮರೆತಿದ್ದಾರೆ. ಈ ಚಳವಳಿಗಳ ಬೆಂಬಲದಿಂದಲೇ ಅಧಿಕಾರಕ್ಕೆ ಬಂದ ಸರ್ಕಾರದಲ್ಲಿ ಎಚ್.ಡಿ.ದೇವೇಗೌಡ ಅವರು ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾಗಿ, ಮುಂದೆ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಲು ಸಾಧ್ಯವಾಯಿತು.
ಇದರಿಂದಲೇ ನೀವು ಮುಖ್ಯಮಂತ್ರಿಯಾಗಿರುವುದು. ಇದರ ಬಗ್ಗೆ ಕುಮಾರಸ್ವಾಮಿ, ಅವರ ತಂದೆಯನ್ನು ಕೇಳಿ ತಿಳಿದುಕೊಳ್ಳಲಿ ಎಂದು ತಿಳಿಸಿದ್ದಾರೆ.