ಮೈಸೂರಿನಲ್ಲಿ ಬಂದ್ ಬೆಂಬಲಿಸದಂತೆ ಹೂಗುಚ್ಚ ನೀಡಿ ಮನವಿ
ಪ್ರತಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಗೆ ಬೆಂಬಲ ಸೂಚಿಸಿದಂತೆ ಅರಿವು ಸಂಟನೆ ಸದಸ್ಯರು ಹೂಗುಚ್ಛ ನೀಡಿ ಮೈಸೂರಿನ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೈಸೂರು, ನವೆಂಬರ್, 27: ದೇಶದಾದ್ಯಂತ ಎಡಪಂಕ್ತೀಯ ಪಕ್ಷಗಳು ಆಕ್ರೋಶ ದಿವಸಕ್ಕೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಅರಿವು ಸಂಸ್ಥೆ ವತಿಯಿಂದ ಮೈಸೂರು ನಗರದಲ್ಲಿ ಬಂದ್ ಆಚರಿಸದಂತೆ ವ್ಯಾಪಾರಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ನಗರದಾದ್ಯಂತ ಸಂಸ್ಥೆಯ ಪದಾಧಿಕಾರಿಗಳು ಸಂಚರಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಕ್ಕೆ ಉಪಯುಕ್ತವಾದ ಕೆಲಸವನ್ನು ಮಾಡಿದ್ದಾರೆ. 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ಬಡವರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.[ಆಕ್ರೋಶ ದಿವಸದಂದು ಕರ್ನಾಟಕದಲ್ಲಿ ಏನಿರುತ್ತೆ? ಏನಿಲ್ಲ?]
ಕಪ್ಪು ಹಣವನ್ನು ಕೂಡಿಟ್ಟು ದೇಶಕ್ಕೆ ತೆರಿಗೆ ನೀಡದೆ ವಂಚಿಸಿದವರಿಗೆ ಮಾತ್ರ ತೊಂದರೆಯಾಗಿದೆ. ದೇಶದಲ್ಲಿ ಒಂದು ಮಹಾ ಕ್ರಾಂತಿ ನಡೆಯುತ್ತಿರುವ ಈ ಸಂದರ್ಭದಲ್ಲಿ ಜನ ಇದೀಗ ಆಗುತ್ತಿರುವ ಕೆಲವು ಅನಾನುಕೂಲಗಳನ್ನು ಸಹಿಸಿಕೊಂಡು ದೇಶದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭ ದೇವರಾಜು ಅರಸು ರಸ್ತೆ, ಅಶೋಕ ರಸ್ತೆಯಲ್ಲಿರುವ ಅಂಗಡಿ ಮಾಲೀಕರಿಗೆ ಮತ್ತು ರಸ್ತೆಬದಿ ವ್ಯಾಪಾರಿಗಳಿಗೆ ಹೂಗಚ್ಛವನ್ನು ನೀಡಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಮತ್ತು ಕಪ್ಪು ಹಣದ ನಿಯಂತ್ರಣಕ್ಕಾಗಿ ನರೇಂದ್ರ ಮೋದಿರವರನ್ನು ಬೆಂಬಲಿಸಿ ಎಂಬ ಮನವಿಯ ಕರಪತ್ರಗಳನ್ನು ನೀಡಿ ಬೆಂಬಲ ಕೋರಿದರು.
ಸಂಸ್ಥೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ರಾಜಗೋಪಾಲ್, ಶ್ರೀಕಾಂತ್ ಕಶ್ಯಪ್, ಅನುಶ್ ಶಿವಪ್ಪ, ಕುಮಾರ್ ನಾಯ್ಡು, ಆದಿ ಗಣೇಶ್, ರವಿತೇಜ ಮೊದಲಾದವರು ಉಪಸ್ಥಿತರಿದ್ದರು.