ರೇಪ್ : ಮೈಸೂರು ಪೊಲೀಸ್ ಅಧಿಕಾರಿ ಎಬ್ಬಿಸಿದ ಬಿರುಗಾಳಿ
ಮೈಸೂರು, ಜು. 26 : ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಕೇಸು ದಾಖಲಿಸದಂತೆ ಅಥವಾ ತನಿಖೆಯನ್ನು ಹಳ್ಳಹಿಡಿಸುವಂತೆ ಮೇಲಿನ ಅಧಿಕಾರಿಗಳಿಂದ ಅಥವಾ ಪ್ರಭಾವಿ ರಾಜಕಾರಣಿಗಳು ಒತ್ತಡ ಹೇರುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿರುವುದು ವಿವಾದದ ಬಿರುಗಾಳಿ ಎಬ್ಬಿಸುವ ಸಾಧ್ಯತೆಯಿದೆ.
ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಅವರು ಈ ರೀತಿ ಹೇಳುವ ಧೈರ್ಯ ತೋರಿದ್ದಾರೆ. ಮಕ್ಕಳು ಅಥವಾ ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಎಫ್ಐಆರ್ ದಾಖಲಿಸದಿರುವಂತೆ ಮತ್ತು ಕೇಸ್ ಕ್ಲೋಸ್ ಮಾಡುವಂತೆ ಜನಪ್ರತಿನಿಧಿಗಳು ಮಾತ್ರವಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕೂಡ ತಡೆಯೊಡ್ಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಕುರಿತಂತೆ ಮೈಸೂರು ತಾಲೂಕ್ ಪಂಚಾಯತ್ ಅಧ್ಯಕ್ಷ ಜೆ ಕುಮಾರ್ ಎಂಬುವವರು ಕರೆದಿದ್ದ ಸಭೆಯಲ್ಲಿ ಈ ಸಂಗತಿಯನ್ನು ಗೋಪಾಲಕೃಷ್ಣ ಅವರು ವ್ಯವಸ್ಥೆಯಲ್ಲಿನ ಹುಳುಕನ್ನು ಬಯಲಿಗೆಳೆದಿದ್ದಾರೆ. ನಾವು ಅನೇಕ ಪ್ರಕರಣಗಳಲ್ಲಿ ಕೇಸ್ ದಾಖಲಿಸಿದ್ದೇವೆ. ಆದರೆ, ಈ ಅಧಿಕಾರಿ ಮತ್ತು ರಾಜಕಾರಣಿಗಳೇ ದೊಡ್ಡ ತೊಂದರೆ ಎಂದು ಹೇಳಿದ್ದಾರೆ.
ಬೆಂಗಳೂರಿನ ವಿಬ್ಗಯಾರ್ ಶಾಲೆಯಲ್ಲಿ ನಡೆದ 6 ವರ್ಷದ ಮಗುವಿನ ಮೇಲಾದ ಅತ್ಯಾಚಾರ ಪ್ರಕರಣದಲ್ಲೂ ಅತ್ಯಾಚಾರವೆಸಗಿದ ಪ್ರಮುಖ ಆರೋಪಿ ಮುಸ್ತಾಫಾ ಮತ್ತು ಶಾಲೆಯ ಪ್ರಿನ್ಸಿಪಾಲ್ ರುಸ್ತುಂ ಕೇರಾವಾಲಾ ಅವರನ್ನು ಬಂಧಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗಿತ್ತು. ಈ ಪ್ರಕರಣದ ಹಿಂದೆ ಕೂಡ ಕಾಣದ ಕೈಗಳು ತಡೆಯೊಡ್ಡಲು ಯತ್ನಿಸಿದ್ದವೆ ಎಂಬ ಅನುಮಾನ ಕೂಡ ಮೂಡುವಂತಿದೆ.
ಇಂಥ ಪರಿಸ್ಥಿತಿ ಇರುವುದರಿಂದಲೇ ಕಾಮುಕರು ಸ್ವೇಚ್ಛೆಯಿಂದ ವರ್ತಿಸುತ್ತಿದ್ದು, ಬಂಧನದ ಅಥವಾ ತನಿಖೆಯ ಹೆದರಿಕೆಯಿಲ್ಲದೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವುದು ಮಾತ್ರವಲ್ಲ, ಜನರಲ್ಲಿ ಈ ಕುರಿತು ಹೆಚ್ಚಿನ ಜಾಗೃತಿಯ ಅಗತ್ಯವಿದೆ.
ಈ ನಡುವೆ, ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಶ್ರೀಶ್ರೀ ರವಿಶಂಕರ್ ವಿದ್ಯಾಮಂದಿರ ಶಾಲೆಯಲ್ಲಿ ಕೂಡ ಶಿಕ್ಷಕನ ವಿರುದ್ಧ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ದೂರು ದಾಖಲಿಸಲಾಗಿದೆ. ಈ ಕೇಸಿನಲ್ಲಿ ಶಿಕ್ಷಕ ಅರಿಫುಲ್ಲಾನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುವ ಬದಲು ಆತನನ್ನು ಸುದೀರ್ಷ ರಜೆಯ ಮೇಲೆ ಮನೆಗೆ ಕಳುಹಿಸಲಾಗಿದೆ.