ದಾರಿ ಬದಿ ಗಿಡಗಳ ಆರೈಕೆಯಲ್ಲಿ ಮೈಸೂರಿನ 'ಅಪ್ನದೇಶ್'
ಮೈಸೂರು, ಜನವರಿ,27: ಸಾಮಾನ್ಯವಾಗಿ ಮಳೆಗಾಲ, ಪರಿಸರ ದಿನಾಚರಣೆ, ವನಮಹೋತ್ಸವ ಮುಂತಾದ ದಿನಗಳಲ್ಲಿ ಗಿಡನೆಟ್ಟು ಪರಿಸರದ ಬಗ್ಗೆ ಭಾಷಣ ಮಾಡುವ ಕೆಲವರು ರಸ್ತೆ ಬದಿಯಲ್ಲಿ ನೆಟ್ಟ ಗಿಡದ ಮೇಲೆ ಗಮನ ಹರಿಸುವುದೇ ಇಲ್ಲ. ಇಂತಹ ಗಿಡಗಳಿಗೆ ನೀರು ಹಾಯಿಸಿ ಆರೈಕೆ ಮಾಡುತ್ತಿದೆ ಮೈಸೂರಿನಲ್ಲಿನ ಒಂದು ಸಂಸ್ಥೆ.
ಹೌದು ದಾರಿ ಬದಿಯಲ್ಲಿ ನೆಡುವ ಗಿಡಗಳು ಚಿಗುರಿ ಬೆಳೆಯುವಂತೆ ಮಾಡುವಲ್ಲಿ ಮೈಸೂರಿನ ಅಪ್ನ ದೇಶ್ ಬಳಗದ ಸದಸ್ಯರ ಶ್ರಮ ಅಪಾರ. ಬೇಸಿಗೆಯಲ್ಲಿ ಬಿರು ಬಿಸಿಲಿಗೆ ಸಿಕ್ಕಿ ಒಣಗುವ ಗಿಡಗಳಿಗೆ ನೀರುಣಿಸುವ ಕಾಯಕದಲ್ಲಿ ಇವರು ಸದಾ ಮಗ್ನ.[ವಾಸ್ತುದೋಷ ಕಾರಣ, ನೇರಳೆ ಮರದ ಜೀವ ಹರಣ?]
ಅಪ್ನದೇಶ್ ಸಂಸ್ಥೆಯ ಧನಲಕ್ಷ್ಮಿ ಸ್ಯಾರಿ ಮಾತನಾಡಿ, 'ಸಂಸ್ಥೆ ವತಿಯಿಂದ 500ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ಪ್ರತಿ ವರ್ಷವೂ ರಸ್ತೆ ಬದಿಗಳಲ್ಲಿ ನೆಡಲಾಗುತ್ತಿದ್ದು, ಅದರ ಪೋಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದರು.
ಈಗಾಗಲೇ ಬೇಸಿಗೆಯ ದಿನಗಳು ಆರಂಭವಾಗಿರುವುದರಿಂದ ಸುತ್ತೂರು-ಮೈಸೂರು ಮುಖ್ಯ ರಸ್ತೆಯ ಎರಡು ಬದಿಯಲ್ಲಿರುವ ಸುಮಾರು 500ಕ್ಕೂ ಹೆಚ್ಚು ಗಿಡಗಳಿಗೆ ಟ್ಯಾಂಕರ್ ಮೂಲಕ ನೀರುಣಿಸಿ ಸಾಯುವ ಅಂಚಿನಲ್ಲಿದ್ದ ಗಿಡಗಳನ್ನು ಬದುಕಿಸಿದ್ದಾರೆ.[ಸಸಿ ನೆಟ್ಟು ಹೆಣ್ಣು ಮಗುವಿನ ಜನನ ಸ್ವಾಗತಿಸುವ ಗ್ರಾಮಸ್ಥರು]
ಗ್ರಾಮೀಣ ಪ್ರದೇಶಗಳ ಯುವಕ ಯುವತಿಯರು, ಸ್ತ್ರೀಶಕ್ತಿ, ಸ್ವಸಹಾಯ ಸಂಘಗಳ ಸದಸ್ಯರು ತಮ್ಮ ಗ್ರಾಮದ ರಸ್ತೆ ಬದಿಯಲ್ಲಿ ನೆಟ್ಟ ಗಿಡಗಳಿಗೆ ನೀರು ಹಾಕಿ ಪೋಷಿಸಿದರೆ ಉತ್ತಮವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ನೆಟ್ಟ ಗಿಡಗಳನ್ನು ಬದುಕಿಸುವುದಲ್ಲದೆ ಸ್ವಚ್ಛ ಪರಿಸರ ನಿರ್ಮಾಣಕ್ಕೂ ಸಹಕಾರಿಯಾಗಲಿದೆ.
ಈ ಸಂಸ್ಥೆಯು ಪ್ರತಿ ವರ್ಷವೂ ರಸ್ತೆ ಬದಿಯಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದು, ಮಳೆಗಾಲದಲ್ಲಿ ಗಿಡನೆಟ್ಟು ಬೇಸಿಗೆಯಲ್ಲಿ ನೀರುಣಿಸಿ ಅದನ್ನು ಸಲಹುತ್ತಾ ಬಂದಿದ್ದಾರೆ. ಗಿಡನೆಟ್ಟ ಒಂದು ವರ್ಷಗಳ ಕಾಲ ಅದನ್ನು ನೀರು ಹಾಕಿ ಪೋಷಿಸಿದರೆ ಬಳಿಕ ಅದು ಭೂಮಿಯಲ್ಲಿನ ನೀರಿನಂಶ ಹೀರಿಕೊಂಡು ಬದುಕುತ್ತವೆ. ಹೀಗಾಗಿ ಇನ್ನು ಮುಂದೆಯಾದರೂ ಗಿಡಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಾಗಬೇಕಾಗಿದೆ.