ಜೆಡಿಎಸ್ ಜಿಲ್ಲಾ ಮುಖಂಡರ ವಿರುದ್ಧ ಅನಿಲ್ ಚಿಕ್ಕಮಾದು ಕಿಡಿ
ಮೈಸೂರು, ಫೆಬ್ರವರಿ 3 : ಜೆಡಿಎಸ್ ಗೆ ರಾಜೀನಾಮೆ ನೀಡಲು ಜಿಲ್ಲಾ ಮಟ್ಟದ ಜೆಡಿಎಸ್ ನಾಯಕರೇ ಕಾರಣ. ನಮ್ಮ ಕುಟುಂಬದ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ್ದು ನೋವು ತಂದಿದೆ. ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪುವಂತೆ ಮಾಡಿದ್ದು ನಮ್ಮ ಪಕ್ಷದ ನಾಯಕರು ಎಂದು ಅನಿಲ್ ಚಿಕ್ಕಮಾದು ಹೇಳಿದ್ದಾರೆ.
ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಅನಿಲ್ ಚಿಕ್ಕಮಾದು ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದಕ್ಷ ಆಡಳಿತಕ್ಕೆ ನಾವು ಕಾಂಗ್ರೆಸ್ ಬೆಂಬಲಿಸುತ್ತೇವೆ. ಫೆಬ್ರವರಿ 5ರಂದು ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಗೆ ಸೇರ್ಪಡೆ ಆಗುತ್ತೇನೆ ಎಂದು ಅವರು ಹೇಳಿದ್ದಾರೆ.
ಎಚ್.ಡಿ.ಕೋಟೆ ಜೆಡಿಎಸ್ ಶಾಸಕ ಚಿಕ್ಕಮಾದು ಪರಿಚಯ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೊಡುವುದು ಅಥವಾ ಬಿಡುವುದೋ ಅದು ಕಾಂಗ್ರೆಸ್ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಜಿಲ್ಲಾ ಪಂಚಾಯಿತಿಯಲ್ಲಿ ದಿವಂಗತ ಚಿಕ್ಕಮಾದು ಅವರ ಮಗ ಅನಿಲ್ ಚಿಕ್ಕಮಾದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೈಸೂರು ಭಾಗದಲ್ಲಿ ಚಿಕ್ಕಮಾದು ಪ್ರಭಾವಿ ನಾಯಕರಾಗಿದ್ದರು. ಜೆಡಿಎಸ್ ನಿಂದ ಶಾಸಕರಾಗಿದ್ದರು.
ಅವರ ನಿಧನದ ನಂತರ ಮಗ ಅನಿಲ್ ಚಿಕ್ಕಮಾದು ಜೆಡಿಎಸ್ ನ ಜಿಲ್ಲಾ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ.